ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜನರ ಸಮಸ್ಯಗಳಿಗೆ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸುವುದಕ್ಕೆ ಗ್ರಾಹಕರ ನ್ಯಾಯಾಲಯ ಸ್ಥಾಪನೆಯಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಧಾರವಾಡ ಉಚ್ಚನ್ಯಾಯಾಲದ ಹಿರಿಯ ವಕೀಲ ಬಸವಪ್ರಭು ಹೊಸಕೆರಿ ತಿಳಿಸಿದರು.ಇಲ್ಲಿನ ಜಿಲ್ಲಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಗ್ರಾಹಕರ ಹಿತರಕ್ಷಣಾ ಕಾಯ್ದೆ-2019ರ ಕುರಿತು ಜಿಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗ್ರಾಹಕರ ಹಿತಕಾಯುವ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಈ ಕುರಿತು ಅಧಿಕಾರಿಗಳು ಸಾಮಾನ್ಯ ಜ್ಞಾನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಹಕರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ 2019ರಲ್ಲಿ ಹೊಸ ಗ್ರಾಹಕರ ಹಿತರಕ್ಷಣಾ ಕಾನೂನು ಜಾರಿಗೆ ತಂದಿದೆ ಅನೇಕ ಮಾರ್ಪಾಡುಗಳನ್ನು ಮಾಡುವ ಮೂಲಕ ಜನರಿಗೆ ಸರಳವಾಗಿ ಶೀಘ್ರವಾಗಿ ನ್ಯಾಯವನ್ನು ನೀಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಗ್ರಾಹಕನಾಗಿರುತ್ತಾನೆ. ಇಂದಿನ ದಿನಮಾನಗಳಲ್ಲಿ ವ್ಯಾಪಾರದಲ್ಲಿ ಸಾಕಷ್ಟು ಮೋಸ, ವಂಚನೆಯಂತಹ ಪ್ರಕರಣಗಳನ್ನು ನಾವು ಕಾಣಬಹುದು ಎಂದು ಹೇಳಿದರು.ಎಲ್ಲಾ ಪ್ರಕರಣಗಳನ್ನು ಸಿವಿಲ್ ನ್ಯಾಯಾಲದಲ್ಲಿ ಬಗೆಹರಿಸಲು ಸಾಧ್ಯವಿಲ್ಲದ ಕಾರಣ ವಿಶ್ವಸಂಸ್ಥೆಯ ನಿರ್ದೇಶನದ ಮೆರೆಗೆ ಭಾರತ ಸರ್ಕಾರ 1986ರಲ್ಲಿ ಮೊದಲ ಬಾರಿಗೆ ಈ ಕಾಯ್ದೆ ಜಾರಿಗೆ ತಂದಿದೆ ಎಂದು ಹೇಳಿದರು.
ಹೊಸ ಕಾಯ್ದೆಯೂ ಅನೇಕ ಅನುಕೂಲಗಳನ್ನು ಗ್ರಾಹಕರಿಗೆ ನೀಡಿದ್ದು ವಸ್ತು ಮತ್ತು ಸೇವೆ ರೂಪದಲ್ಲಿ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಾನೂನಾತ್ಮಕವಾಗಿ ಅತ್ಯಂತ ಸರಳವಾಗಿ ಜನರಿಗೆ ಜಿಲ್ಲಾ ಕೇಂದ್ರದಲ್ಲಿ ನ್ಯಾಯಾಲಯದಲ್ಲಿ ಸ್ಥಳೀಯವಾಗಿ ನ್ಯಾಯವನ್ನು ಒದಗಿಸು ಕೆಲಸವನ್ನು ಮಾಡುತ್ತಿದೆ. ಬದಲಾದ ಹೊಸ ಕಾಯ್ದೆಗಳ ಕುರಿತು ಅಧಿಕಾರಿಗಳು ಮೊದಲು ಮಾಹಿತಿ ಪಡೆದುಕೊಳ್ಳುವುದು ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕಾರ್ಯಾಗಾರದ ಮೂಲಕ ತಮ್ಮ ಬಳಿ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ಸರಿಯಾದ ಮಾರ್ಗದರ್ಶನ ನೀಡಲು ಸಹಕಾರಿಯಾಗಿದೆ ಎಂದರು.ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಅವಿನ್ ಮಾತನಾಡಿ, ಗ್ರಾಹಕರ ಕಾನೂನು ಹಾಗೂ ಕಾರ್ಯಚಟುವಟಿಕೆಗಳು ಜನಸಮಾನ್ಯರಿಗೆ, ರೈತರಿಗೆ ಸಮಾಜದಲ್ಲಿ ನಿತ್ಯ ನಡೆಯುವ ಗ್ರಾಹಕರ ವಂಚನೆ ಪ್ರಕರಣಗಳ ಬಗ್ಗೆ ಮೊದಲು ಅಧಿಕಾರಿಗಳಿಗೆ ಕಾನೂನಿನ ಜ್ಞಾನ ಅವಶ್ಯಕವಾಗಿದೆ. ಆದ್ದರಿಂದ ಜಿಲ್ಲಾಡಳಿತದ ಸಹಕಾರದಿಂದ ಸಂಪನ್ಮೂಲ ವ್ಯಕ್ತಿಗಳಿಂದ ಗ್ರಾಹಕರ ಹಿತರಕ್ಷಣಾ ಕಾನೂನುಗಳ ಕುರಿತು ಅರಿವು ಮೂಡಿಸುವ ಕಾರ್ಯಾಗಾರವನ್ನು ನೆಡಸಲಾಗುತ್ತಿದ್ದು, ಅಧಿಕಾರಿಗಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಎಂದು ಸಲಹೆ ನೀಡಿದರು.
ಈ ವೇಳೆ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಬಳಕೆದಾರರ ವೇದಿಕೆ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಬಾಗ್ ಗ್ರಾಹಕರ ರಕ್ಷಣೆಗೆ ಇರುವ ಇತರೆ ಕಾನೂನುಗಳ ಕುರಿತು ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಮತ್ತು ಗ್ರಾಹಕರ ರಕ್ಷಣಾ ಪರಿಷತ್ ಸಂಚಾಲಕ ಜಯಸ್ವಾಮಿ ಮತ್ತು ಸೈಬರ್ ಪ್ರಕರಣಗಳ ಕುರಿತು ಪೊಲೀಸ್ ಉಪ ಅಧೀಕ್ಷಕ ಕೆ.ಕೃಷ್ಣಮೂರ್ತಿ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.