ಸಾರಾಂಶ
ದೇಶ ರಕ್ಷಣೆ ವಿಷಯದಲ್ಲಿ ಎಲ್ಲರು ಒಂದಾಗಿರಬೇಕು. ಅಗತ್ಯಬಿದ್ದರೆ ಯುದ್ಧ ಮಾಡಬಹುದು. ಆದರೆ, ಅದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯುದ್ಧವೆಂದರೆ ಹುಡುಗಾಟಿಕೆ ಅಲ್ಲ.
ಕೊಪ್ಪಳ:
ಪೆಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸರಿ ಇದೆ. ಅಗತ್ಯವಿದ್ದರೆ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲಿ. ಅದಕ್ಕೂ ಮುನ್ನ ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಏರ್ಸ್ಟ್ರೈಕ್ ಮಾಡಿದ್ದು ಸರಿ ಇದೆ. ಇದನ್ನು ಬೆಂಬಲಿಸುತ್ತೇವೆ. ಉಗ್ರಗಾಮಿಗಳ ಅಡಗುತಾಣ ಪತ್ತೆ ಮಾಡಿ ದಾಳಿ ಮಾಡಿದ್ದು ಸೂಕ್ತವಾಗಿದೆ ಎಂದ ಅವರು, ರಾಜ್ಯ ಕಾಂಗ್ರೆಸ್ ಈ ಕುರಿತು ಏನು ಟ್ವೀಟ್ ಮಾಡಿತ್ತು ಎಂಬುದು ನನಗೆ ತಿಳಿದಿಲ್ಲ. ಆದರೆ, ದೇಶ ರಕ್ಷಣೆ ವಿಷಯದಲ್ಲಿ ಎಲ್ಲರು ಒಂದಾಗಿರಬೇಕು. ಅಗತ್ಯಬಿದ್ದರೆ ಯುದ್ಧ ಮಾಡಬಹುದು. ಆದರೆ, ಅದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯುದ್ಧವೆಂದರೆ ಹುಡುಗಾಟಿಕೆ ಅಲ್ಲ. ಅದಕ್ಕೆಲ್ಲ ಪೂರ್ವ ತಯಾರಿಬೇಕಾಗುತ್ತದೆ ಎಂದ ಅವರು, ಯುದ್ಧಕ್ಕೆ ₹ 12 ಲಕ್ಷ ಕೋಟಿ ಬೇಕಾಗುತ್ತದೆ. ಅದೇನೆ ಇರಲಿ, ದೇಶದ ಹಿತಕ್ಕಾಗಿ ಯುದ್ಧ ಮಾಡಿದರೆ ತಪ್ಪೇನೂ ಇಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಪೆಹಲ್ಗಾಮ್ ಪ್ರಕರಣದ ಬಳಿಕ ಕಾಶ್ಮೀರಕ್ಕೆ ಹೋಗಿಲ್ಲ, ಅವರು ಮೊದಲು ಹೋಗಿ ಬರಲಿ ಎಂದ ಅವರು, ಸಾಧ್ಯವಾದರೆ ವಿರೋಧ ಪಕ್ಷದವರನ್ನು ಕರೆದುಕೊಂಡು ಹೋಗಲಿ ಎಂದರು.