ಸೊಳ್ಳೆಗಳಿಂದ ಹರಡಬಹುದಾದ ಮಲೇರಿಯಾ, ಡೆಂಘೀ, ಚಿಕುನಗುನ್ಯಾ ಹಾಗೂ ಜೆಇ(ಮೆದುಳು ಜ್ವರ) ಪ್ರಕರಣಗಳ ಕುರಿತು ಚರ್ಚಿಸಲು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜಗದೀಶ ಜಿಂಗಿ ಅಧ್ಯಕ್ಷತೆಯಲ್ಲಿ ಬೆಳಗಾವಿ ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ತಾಲೂಕು ವ್ಯಾಪ್ತಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳ ಸಭೆ ಬುಧವಾರ ಜರುಗಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಸೊಳ್ಳೆಗಳಿಂದ ಹರಡಬಹುದಾದ ಮಲೇರಿಯಾ, ಡೆಂಘೀ, ಚಿಕುನಗುನ್ಯಾ ಹಾಗೂ ಜೆಇ(ಮೆದುಳು ಜ್ವರ) ಪ್ರಕರಣಗಳ ಕುರಿತು ಚರ್ಚಿಸಲು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜಗದೀಶ ಜಿಂಗಿ ಅಧ್ಯಕ್ಷತೆಯಲ್ಲಿ ಬೆಳಗಾವಿ ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ತಾಲೂಕು ವ್ಯಾಪ್ತಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳ ಸಭೆ ಬುಧವಾರ ಜರುಗಿತು.ಜಿಲ್ಲೆಯಲ್ಲಿ ಜನವರಿ-ಜೂನ್ ರವರೆಗೆ 12 ಮಲೇರಿಯಾ, 44 ಡೆಂಘೀ, 13 ಚಿಕುನಗುನ್ಯಾ, ಹಾಗೂ 8 ಸಂಶಯಾಸ್ಪದ ಜೆಇ ಪ್ರಕರಣಗಳು ವರದಿಯಾಗಿ ಯಾವುದೇ ಮರಣದ ಪ್ರಕರಣಗಳು ಕಂಡು ಬಂದಿರುವುದಿಲ್ಲ. ಬೆಳಗಾವಿ ತಾಲೂಕಿನಲ್ಲಿ ಜೂನ್ ಅಂತ್ಯದವರೆಗೆ ಬೆಳಗಾವಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ 7 ಮಲೇರಿಯಾ, 15 ಡೆಂಘೀ, 10 ಚಿಕುನಗುನ್ಯಾ ಹಾಗೂ 6 ಸಂಶಯಾಸ್ಪದ ಮೆದುಳು ಜ್ವರ (ಜೆಇ) ಪ್ರಕರಣಗಳಲ್ಲಿ ಹೊರ ರಾಜ್ಯದ್ದಾಗಿರುತ್ತದೆ. ಶೇ.50 ರಷ್ಟು ಪ್ರಕರಣಗಳು ಬೆಳಗಾವಿ ತಾಲೂಕಿನಲ್ಲಿ ವರದಿಯಾಗಿದ್ದು, ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ರೋಗ ಹರಡುವ ಕುರಿತು ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ಸಿಬ್ಬಂದಿ ಹಾಗೂ ವೈದ್ಯರೊಂದಿಗೆ ಚರ್ಚಿಸಿ ರೋಗ ಉಲ್ಬಣವಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.ಎಲ್ಲ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ತಮ್ಮ ಕಾರ್ಯ ಕ್ಷಮತೆ ಅರಿತು ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸಿ ಯಾವುದೇ ಮರಣದ ಪ್ರಕರಣಗಳು ವರದಿಯಾಗದಂತೆ ನೋಡಿಕೊಳ್ಳಲು ಹಾಗೂ ವೈದ್ಯರು ಸೂಚಿಸಿದ ಎಲ್ಲ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಿ ಶೀಘ್ರ ಪತ್ತೆ ಹಚ್ಚಲು ಕ್ರಮವಹಿಸುವಂತೆ ಪ್ರಯೋಗಾಲಯ ತಂತ್ರಜ್ಞರಿಗೆ ತಿಳಿಸಲಾಯಿತು.ಮಲೇರಿಯಾ ಹೆಣ್ಣು ಅನಾಪೇಲಿಸ್ ಸೊಳ್ಳೆ, ಡೆಂಘೀ ಹಾಗೂ ಚಿಕುನಗುನ್ಯಾ ಈಡಿಸ್ ಸೊಳ್ಳೆ, ಜೆಇ ವೈಶ್ನವಿ ಕ್ಯೂಲೆಕ್ಷ ಜಾತಿಯ ಸೊಳ್ಳೆ ಕಚ್ಚುವ ಮೂಲಕ ಪ್ರಸಾರವಾಗುತ್ತದೆ. ಸೊಳ್ಳೆಗಳು ಸ್ವಚ್ಛವಾದ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದ ತಮ್ಮ ಮನೆಯ ಒಳಗೆ ಹಾಗೂ ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ ನೀರಿನ ಪರಿಕರಗಳನ್ನು, ತೊಟ್ಟೆಗಳನ್ನು ಪರಿಶೀಲಿಸಿ(CHECK), ಸ್ವಚ್ಛಗೊಳಿಸಿ (CLEAN) ಭದ್ರವಾಗಿ ಮುಚ್ಚಿಡಲು (CLOSE), ಕ್ರಮವಹಿಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು..
ಸಭೆಯಲ್ಲಿ ಜಿಲ್ಲಾ ಹಾಗೂ ವಲಯ ಕೀಟಶಾಸ್ತ್ರಜ್ಞರು ಹಾಜರಿದ್ದು, ಲಾರ್ವಾ ಸಮೀಕ್ಷೆ ಸೊಳ್ಳೆಗಳ ನಾಸಪಡಿಸುವಿಕೆ ಮತ್ತು ಕೀಟಗಳ ನಿಯಂತ್ರಣ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು, ತಾಲೂಕು ಹಾಗೂ ಜಿಲ್ಲಾಮಟ್ಟದ ಮೇಲ್ವಿಚಾರಕ ಸಿಬ್ಬಂದಿ ಹಾಜರಾಗಿದ್ದರು.ಕ್ಷೇತ್ರಮಟ್ಟದಲ್ಲಿ ಎಲ್ಲ ಜ್ವರದ ಪ್ರಕರಣಗಳನ್ನು ಸಮೀಕ್ಷೆ ಕೈಗೊಂಡು ಸಂಶಯಾಸ್ಪದ ಜ್ವರದ ಪ್ರಕರಣಗಳನ್ನು ಗುರುತಿಸಿ ಸಮಂಜಸವಾದ ಪರೀಕ್ಷೆಗೆ ಒಳಪಡಿಸಿ ಶೀಘ್ರ ಪತ್ತೆ ಹಚ್ಚಿ, ತ್ವರಿತವಾಗಿ ಚಿಕಿತ್ಸೆಗೆ ಒಳಪಡಿಸಬೇಕು. ಯಾವುದೇ ಸಾವು, ನೋವುಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಬೇಕು.ಸರಿಯಾದ ಸಮಯಕ್ಕೆ ಮೇಲಾಧಿಕಾರಿಗಳಿಗೂ ಹಾಗೂ ಜಿಲ್ಲಾ ಕಚೇರಿಗಳಿಗೆ ವರದಿ ಮಾಡಬೇಕು.-ಡಾ.ಜಗದೀಶ ಜಿಂಗಿ,
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ.