ಕನ್ನಡಪ್ರಭ ವಾರ್ತೆ ಬೆಂಗಳೂರುನಗರದ ಎಲ್ಲಾ 5 ನಗರ ಪಾಲಿಕೆಗಳಲ್ಲಿ ಡೆಂಗ್ಯೂ ಪ್ರಕರಣಗಳ ನಿಯಂತ್ರಣ ಹಾಗೂ ಸೊಳ್ಳೆ ಉತ್ಪತ್ತಿ ತಡೆಗಟ್ಟಲು ಮುನ್ನೆಚ್ಚರಿಕಾ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನಾಗರಿಕರು ಸಹಕರಿಸಬೇಕು ಎಂದು ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ.ಸಿರಾಜುದ್ದೀನ್ ಮದನಿ ಮನವಿ ಮಾಡಿದ್ದಾರೆ.

ನಾಗರಿಕರು ತಮ್ಮ ಮನೆ ಹಾಗೂ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಡ್ರಮ್, ಬ್ಯಾರೆಲ್ ಮತ್ತು ನೀರಿನ ತೊಟ್ಟಿಗಳನ್ನು ಮುಚ್ಚಿಡಬೇಕು. ಹಳೆಯ ಟೈರ್, ಎಳನೀರು ಚಿಪ್ಪು, ಒಡೆದ ಬಾಟಲಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ನೀರು ನಿಲ್ಲದಂತೆ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಹೂಕುಂಡ, ಮಡಿಕೆ ಹಾಗೂ ಚರಂಡಿಗಳಲ್ಲಿ ನೀರು ನಿಲ್ಲದಂತೆ ಪ್ರತಿದಿನ ಪರಿಶೀಲಿಸಿ ಸೊಳ್ಳೆ ಉತ್ಪತ್ತಿಯನ್ನು ತಡೆಯಬೇಕು. ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಲು ಸೊಳ್ಳೆ ನಿರೋಧಕಗಳು ಹಾಗೂ ಸೊಳ್ಳೆ ಪರದೆಗಳನ್ನು ಬಳಸಬೇಕು ಎಂದು ಡಾ. ಸಿರಾಜುದ್ದೀನ್ ಹೇಳಿದ್ದಾರೆ.ಜ್ವರ ಅಥವಾ ಡೆಂಗ್ಯೂಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದಲ್ಲಿ ವಿಳಂಬ ಮಾಡದೆ ಸಮೀಪದ ಪಾಲಿಕೆ, ಸರ್ಕಾರಿ ಆರೋಗ್ಯ ಕೇಂದ್ರ, ಆಸ್ಪತ್ರೆಯ ವೈದ್ಯರು, ಆರೋಗ್ಯ ಸಿಬ್ಬಂದಿ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಹಾಗೂ ಸಲಹೆ ಪಡೆಯಬೇಕು ಎಂದು ಡಾ. ಸಿರಾಜುದ್ದೀನ್ ಸಲಹೆ ನೀಡಿದ್ದಾರೆ.ಡೆಂಗ್ಯೂ ನಿಯಂತ್ರಣಕ್ಕೆ ಜಿಬಿಎ ಕೈಗೊಂಡಿರುವ ಕ್ರಮಗಳು:ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ: ಮನೆಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಪತ್ತೆಹಚ್ಚಿ, ಮೂಲದಲ್ಲಿಯೇ ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟುವ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ.ಕ್ಷೇತ್ರಮಟ್ಟದ ಆರೋಗ್ಯ ತಂಡಗಳ ರಚನೆ: ಆಶಾ ಕಾರ್ಯಕರ್ತೆಯರು, ಸಾರ್ವಜನಿಕ ಆರೋಗ್ಯ ಸಮುದಾಯ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳು ಒಳಗೊಂಡ ತಂಡಗಳ ಮೂಲಕ ಡೆಂಗ್ಯೂ ಪ್ರಕರಣಗಳು ಕಂಡುಬಂದ ಪ್ರದೇಶಗಳಲ್ಲಿ ಹಾಗೂ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ವಿಶೇಷ ನಿಗಾ: ಯಾವುದೇ ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಏಕಾಏಕಿ ಹೆಚ್ಚಾದಲ್ಲಿ ಅಥವಾ ಕ್ಲಸ್ಟರ್ ಹಾಗೂ ಔಟ್‌ಬ್ರೇಕ್ ಕಂಡುಬಂದಲ್ಲಿ ತ್ವರಿತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಲಾರ್ವಾ-ಎಂಟಮಾಲಜಿಕಲ್ ಸಮೀಕ್ಷೆ: ಜ್ವರ ಪ್ರಕರಣಗಳು, ಕ್ಲಸ್ಟರ್ ಹಾಗೂ ಔಟ್‌ಬ್ರೇಕ್ ಕಂಡುಬರುವ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ ಹಾಗೂ ಎಂಟಮಾಲಜಿಕಲ್ ಸರ್ವೇ ನಡೆಸಲಾಗುತ್ತಿದೆ. ಅಗತ್ಯವಿರುವ ಸ್ಥಳಗಳಲ್ಲಿ ಹೋಯಿಂಗ್ ಹಾಗೂ ಫಾಗಿಂಗ್ ಕಾರ್ಯಗಳನ್ನು ಕೈಗೊಂಡು ಸೊಳ್ಳೆ ಕಾಟ ನಿಯಂತ್ರಿಸಲಾಗುತ್ತಿದೆ.