ಸಾರಾಂಶ
ಮಸ್ಕಿ ತಾಪಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಸ್ಕಿ
ತಾಲೂಕಿನಲ್ಲಿ ಮುಂಗಾರು ಮಳೆ ಚುರುಕು ಪಡೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸೊಳ್ಳೆಗಳ ನಿಯಂತ್ರಣಕ್ಕೆ ಎಲ್ಲಾ ಹಳ್ಳಿಗಳಲ್ಲಿ ಫಾಗಿಂಗ್ ಕೈಗೊಳ್ಳಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಾಪಂ ಇಒ ಉಮೇಶ್ ಸೂಚನೆ ನೀಡಿದರು.ತಾಲೂಕು ಪಂಚಾಯತಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ತಾಲೂಕಿನ ವಿವಿಧೆಡೆ ಡೆಂಘೀ ಪ್ರಕರಣ ದಾಖಲಾಗುತ್ತಿದ್ದು, ಚರಂಡಿ ಸ್ವಚ್ಛತೆ, ಫಾಗಿಂಗ್, ನೀರಿನ ಮೂಲಗಳ ಶುಚಿತ್ವಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಶಾಲಾ ವಿದ್ಯಾರ್ಥಿಗಳ ಜೊತೆ ಜಾಥಾ ಕೈಗೊಂಡು, ಕಸದ ವಾಹನದ ಮೂಲಕ ಜಾಗೃತಿ ಪದ ಬಿತ್ತರಿಸಿ ಸ್ಥಳೀಯರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ನರೇಗಾ ಯೋಜನೆಯಡಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕಡತಗಳನ್ನು ಒಂದು ವಾರದೊಳಗೆ ಪರಿಶೀಲಿಸಲಾಗುವುದು ಎಂದರು.
ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ, ಪ್ರಕರಣಗಳನ್ನು ತಿರುವಳಿ ಮಾಡಿಕೊಳ್ಳಬೇಕು ಹಾಗೂ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕು. ಗ್ರಾಪಂ ಸಿಬ್ಬಂದಿ ಕಡ್ಡಾಯವಾಗಿ ಬಯೋ ಮೆಟ್ರಿಕ್ನಲ್ಲಿ ಹಾಜರಾತಿ ಹಾಕಬೇಕು. ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆಗೆ ಕ್ರಮಕೈಗೊಳ್ಳಬೇಕು. ಜಿಪಂ ಪ್ರತಿಯೊಂದು ಗ್ರಾಪಂಗೆ 90-100 ಶೌಚಗೃಹದಂತೆ ಒಟ್ಟು 2000 ಶೌಚಗೃಹ ನಿರ್ಮಾಣಕ್ಕೆ ಗುರಿ ನಿಗದಿಪಡಿಸಿದ್ದು, ಕೂಡಲೇ ಸಮೀಕ್ಷೆ ಕೈಗೊಂಡು, ಅರ್ಹ ಫಲಾನುಭವಿ ಗುರುತಿಸಬೇಕು ಎಂದರು.ಈ ವೇಳೆ ಸಹಾಯಕ ನಿರ್ದೇಶಕ ಶಿವಾನಂದ ರೆಡ್ಡಿ, ಸೋಮನಗೌಡ, ತಾಪಂ ವ್ಯವಸ್ಥಾಪಕ ಗಂಗಾಧರ ಮೂರ್ತಿ, ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.