ಕನ್ನಡಪ್ರಭವಾರ್ತೆ, ಚನ್ನರಾಯಪಟ್ಟಣ

ತಾಲೂಕಿನಲ್ಲಿ ಅಡುಗೆ ಅನಿಲ ಸಿಲಿಂಡರ್‌ಗೆ ಯಾವುದೇ ರೀತಿ ತೊಂದರೆ ಆಗದಂತೆ ತಾಲೂಕಿನ ಆಹಾರ ಇಲಾಖೆ ಗಮನಹರಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದ್ದಾರೆ

ಪಟ್ಟಣದ ತಾಲೂಕು ಕಚೇರಿಯಲ್ಲಿ ಆಹಾರ, ಕಂದಾಯ ಇಲಾಖೆ ಹಾಗೂ ವಿವಿಧ ಅಡುಗೆ ಅನಿಲ ವಿತರಣೆ ಏಜೆನ್ಸಿಗಳ ವ್ಯವಸ್ಥಾಪಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ ತಾಲೂಕಿನಲ್ಲಿ ಸಾರ್ವಜನಿಕರಿಗ ಅಡುಗೆ ಅನಿಲ ಸಿಲಿಂಡರ್ ಗಳು ವಿತರಣೆಯಲ್ಲಿ ಯಾವುದೇ ರೀತಿ ತೊಂದರೆ ಉಂಟಾಗಬಾರದು. ಈಗಾಗಲೇ ದೃಶ್ಯ ಮಾಧ್ಯಮಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಅಡುಗೆ ಅನಿಲ ವಿತರಣೆಯಲ್ಲಿ ಬಹಳಷ್ಟು ತೊಂದರೆ ಆಗಿರುವ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದೆ. ಹೀಗಾಗಿ ಅಧಿಕಾರಿಗಳ ಮತ್ತು ಏಜೆನ್ಸಿ ವ್ಯವಸ್ಥಾಪಕರ ಸಭೆ ಕರೆದು ತಾಲೂಕಿನಲ್ಲಿ ಎಷ್ಟು ಅಡುಗೆ ಅನಿಲ ಬೇಡಿಕೆ ಮತ್ತು ಪೂರೈಕೆ ಇದೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬೇಡಿಕೆ ಅನುಸರಿಸಿ ಸಿಲಿಂಡರ್ ವಿತರಣಾ ಕಾರ್ಯ ಪಾರದರ್ಶಕವಾಗಿ ಮಾಡಬೇಕು. ಒಟ್ಟಾರೆ ತಾಲೂಕಿನಲ್ಲಿ ಐದು ಗ್ಯಾಸ್ ಏಜೆನ್ಸಿಗಳಿದ್ದು ಸುಮಾರು 1,07,694 ಅಡುಗೆ ಅನಿಲ ಸಂಪರ್ಕಗಳಿವೆ. 1227 ಸಿಲಿಂಡರ್‌ ಕೊರತೆ ಕಾಣುತ್ತಿದೆ. ಜಿಲ್ಲಾಧಿಕಾರಿಗೆ ಕೂಡಲೇ 1227 ಕೊರತೆ ಇರುವ ಸಿಲಿಂಡರ್ ಸರಬರಾಜು ಮಾಡುವಂತೆ ಕೋರಲಾಗುವುದು. ಯಾವುದೇ ಕಾರಣಕ್ಕೂ ಅಡುಗೆ ಅನಿಲ ಸಿಲಿಂಡರ್‌ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ತಾಲೂಕು ದಂಡಾಧಿಕಾರಿ ಶಂಕರಪ್ಪ ಮಾತನಾಡಿ ಅಡುಗೆ ಅನಿಲ ಸಂಪರ್ಕದಾರರು ದಯಮಾಡಿ ಯಾರೂ ಕೂಡ ಏಜೆನ್ಸಿ ಕಚೇರಿ ಮುಂಭಾಗದಲ್ಲಿ ಗುಂಪುಗೂಡಬಾರದು. ತಾವು ಬುಕ್ಕಿಂಗ್ ಮಾಡಿದ ಎರಡು ಮೂರು ದಿನಗಳಲ್ಲಿ ಮನೆ ಬಾಗಿಲಿಗೆ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಮಾಡಲು ಈಗಾಗಲೇ ಏಜೆನ್ಸಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.ಎಲ್ಲಾ ಏಜೆನ್ಸಿಗಳು ಕೂಡ ಬುಕ್ಕಿಂಗ್ ಮಾಡಿದ ಒಂದು ಎರಡು ದಿನಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ವಿತರಣೆ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ. ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಸರ್ಕಾರದ ನಿಯಮದಂತೆ 45 ದಿನಕ್ಕೊಂದರಂತೆ ಪ್ರತಿ ಗ್ರಾಹಕರಿಗೆ ಸಿಲಿಂಡರ್ ನೀಡಲು ಕ್ರಮ ವಹಿಸಲಾಗುವುದು. ಜೊತೆಗೆ ಕಮರ್ಷಿಯಲ್ ಸಿಲೆಂಡರ್ ವಿತರಣೆ ಬಗ್ಗೆ ಚರ್ಚಿಸಲಾಗಿದೆ. ಹೋಟೆಲ್ ಹಾಗೂ ಇತರೆ ಬೀದಿಬದಿ ವ್ಯಾಪಾರಿಗಳು ಕಮರ್ಷಿಯಲ್ ಸಿಲಿಂಡರ್ ಬಳಸಿ ತಮ್ಮ ದೈನಂದಿನ ವ್ಯಾಪಾರದಲ್ಲಿ ತೊಡಗಬೇಕು. ಮನೆಬಳಕೆ ಸಿಲಿಂಡರ್ ಬಳಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಡಿವೈಎಸ್ಪಿ ಕುಮಾರ್, ಪುರಸಭೆ ಮುಖ್ಯ ಅಧಿಕಾರಿ ಯತೀಶ್ ಮುಂತಾದವರು ಇದ್ದರು.