ಸಾರಾಂಶ
- ಚನ್ನಗಿರಿ ಗಲಭೆ ಖಂಡಿಸಿ ವಿಎಚ್ಪಿ, ಬಜರಂಗದಳ ಪ್ರತಿಭಟನೆ । ತಹಸೀಲ್ದಾರರಿಗೆ ಮನವಿ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ
ಪಟ್ಟಣದಲ್ಲಿ ಕಳೆದ ಶುಕ್ರವಾರ ರಾತ್ರಿ ಪೊಲೀಸ್ ಠಾಣೆ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಕಿಡಿಗೇಡಿಗಳು ನಡೆಸಿದ ಕೃತ್ಯ ಖಂಡಿಸಿ ಸೋಮವಾರ ವಿಶ್ವ ಹಿಂದೂ ಪರಿಷತ್ತು ಹಾಗೂ ಬಜರಂಗಳ ನೇತೃತ್ವದಲ್ಲಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಹಿಂದೂ ಜಾಗರಣಾ ವೇದಿಕೆಯ ಪ್ರಮುಖ ಸತೀಶ್ ಪೂಜಾರಿ ಮಾತನಾಡಿ, ಸಮಾಜದಲ್ಲಿ ಅಶಾಂತಿ, ಅರಾಜಕತೆಯನ್ನು ಸೃಷ್ಠಿಸುವವರನ್ನು ಕೂಡಲೇ ಮಟ್ಟಹಾಕಬೇಕಾಗಿದೆ. ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ಓಲೈಕೆ ರಾಜಕಾರಣ ಮಾಡುತ್ತಿದೆ. ಇದು ಸರಿಯಲ್ಲ ಎಂದರು.
ಕೆಲ ಮುಸ್ಲಿಂ ನಾಯಕರು ಅಮಾಯಕರನ್ನು ಬಂಧನ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ. ಮಟ್ಕಾ ಆಡುವವರು, ಇಸ್ಪೀಟ್ ಆಡುವವರು ಅಮಾಯಕರೇ? ಸಮಾಜಘಾತುಕ ಕೆಲಸ ಮಾಡುವವರು ಯಾರೇ ಆಗಿದ್ದರೂ ಅವರನ್ನು ಕೂಡಲೇ ಬಂಧಿಸಬೇಕು ಎಂದರು.ವಿ.ಎಚ್.ಪಿ.ಯ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಮುಸ್ಲಿಂ ಗೂಂಡಾಗಳು ಆರಕ್ಷಕ ಠಾಣೆ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಇದರ ಹಿಂದೆ ದೇಶದ್ರೋಹಿಗಳ ಕೈವಾಡ ಇರುವುದು ಸ್ಪಷ್ಟ. ಯಾರು ಸಾಮಾನ್ಯ ಜನತೆಗೆ ರಕ್ಷಣೆ ಕೊಡಬೇಕೋ ಆ ವ್ಯವಸ್ಥೆಯ ಮೇಲೆ ದಾಳಿ ನಡೆಸಿ, ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಚನ್ನಗಿರಿ ಪಟ್ಟಣದಲ್ಲಿ ನಡೆದ ಈ ದುಷ್ಕೃತ್ಯ ರಾಜ್ಯದಲ್ಲಿ ಈ ಹಿಂದೆ ನಡೆದ ಕೆ.ಜೆ.ಹಳ್ಳಿ, ಡಿ.ಜೆ ಹಳ್ಳಿ, ಬೆಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ನಗರಗಳಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಿಗೆ ಹೋಲುವಂತಿದೆ ಎಂದು ಟೀಕಿಸಿದರು.
ಚನ್ನಗಿರಿ ಘಟನೆ ನಡೆಸಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರ ವಿರುದ್ಧ ಉಗ್ರ ಹೋರಾಟ ನಡೆಯಲಿದೆ. ನ್ಯಾಯ ಕೇಳಲು ಶಾಂತಿಯುತ ದಾರಿಗಳುಂಟು. ಗೂಂಡಾ ವರ್ತನೆ, ಗಲಾಟೆ ಮಾಡಿ, ಸಮಾಜದ ನೆಮ್ಮದಿಗೆ ಭಂಗ ತರುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ವಿಎಚ್ಪಿ- ಬಜರಂಗದಳ ಪ್ರಮುಖರಾದ ರವಿಚಂದ್ರ, ಮಾಚನಾಯ್ಕನಹಳ್ಳಿ ಜಯಣ್ಣ, ಹೇಮಚಂದ್ರು, ಎಚ್.ಎಸ್. ಶಿವಕುಮಾರ್, ಚನ್ನಗಿರಿ ನವೀನ್, ಶ್ರೀನಿವಾಸ್, ಮಂಜುನಾಥ್ ಕಾಳೆ, ರಂಗನಾಥ್, ನಾಗರಾಜ್, ಸೂರಜ್, ಗಿರೀಶ್, ಹನುಮಂತ್, ಜಯಣ್ಣ, ಅಶೋಕ್, ವಸಂತ್, ರುದ್ರೇಶ್. ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
- - - -27ಕೆಸಿಎನ್ಜಿ1:ಚನ್ನಗಿರಿ ಪಟ್ಟಣದ ಪೊಲೀಸ್ ಠಾಣೆ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳ ಕೃತ್ಯ ಖಂಡಿಸಿ ಸೋಮವಾರ ವಿಶ್ವಹಿಂದೂ ಪರಿಷತ್ತು, ಬಜರಂಗದಳ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.