ಸಾರಾಂಶ
ಆರ್ಥಿಕವಾಗಿ ಸಾಮಾಜಿಕವಾಗಿ ಕೆಳವರ್ಗದ ಸಮಾಜದವರಿಗಿಂತ ಬಡವರಾಗಿದ್ದೇವೆ
ಗದಗ: ಸಂವಿಧಾನದ ಪ್ರಕಾರ ನೀಡಿರುವ ಮೀಸಲಾತಿ ಅವಕಾಶ ಬದಲಿಸಿ ಒಳಮೀಸಲಾತಿ ನೀಡುವ ನಿರ್ಧಾರ ಕೈ ಬೀಡಬೇಕೆಂದು ಒತ್ತಾಯಿಸಿ ದಿ.ನೀಲುಬಾಯಿ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಶಿರಹಟ್ಟಿ ಅಧ್ಯಕ್ಷ ಎಂ.ಕೆ.ಲಮಾಣಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅತೀ ಬಡವರಾಗಿದ್ದು, ಆರ್ಥಿಕವಾಗಿ ಸಾಮಾಜಿಕವಾಗಿ ಕೆಳವರ್ಗದ ಸಮಾಜದವರಿಗಿಂತ ಬಡವರಾಗಿದ್ದೇವೆ. ನಮ್ಮ ಬಡತನ ತಾವು ಸಮೀಕ್ಷೆ ಮಾಡಿ ಜನಗಣತಿ ಮಾಡಿ ಬೇರೆ ರಾಜ್ಯಗಳಿಗೆ ದುಡಿಯಲು ಹೋಗುತ್ತಿರುವ ಹಾಗೂ ಉದ್ಯೋಗಕ್ಕಾಗಿ ತಮ್ಮ ಪ್ರಾಣ ಕಳೆದುಕೊಂಡಿರುವ ಬಡತನದಲ್ಲಿ ಜೀವನ ಸಾಗಿಸಲು ಕಷ್ಟ ಸಾಧ್ಯವಾಗಿ ತಮ್ಮ ಮಕ್ಕಳನ್ನೇ ಮಾರಿಕೊಂಡಿರುವ ಮತ್ತು ಬಡತನದ ಬೇಗೆಯಲ್ಲಿಯೇ ಇಂದಿಗೂ ನರಳಿ ಜೀವನ ಸಾಗಿಸುತ್ತಿರುವ ಸಮಾಜದ ಈ ಬವಣೆ ತಾವು ಪರಿಗಣಿಸಬೇಕು. ನಮ್ಮ ಬಂಜಾರಾ ಸಮಾಜದವರು ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಹೀಗೆ ದೇಶದ ಎಲ್ಲ ರಾಜ್ಯಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಮಾಹಿತಿ ತಾವು ಪಡೆಯಬಹುದು. ಜತೆಗೆ ವಿದೇಶಗಳಲ್ಲಿ ಕೂಡಾ ಉದ್ಯೋಗಕ್ಕಾಗಿ ಹೋಗಿ ತಮ್ಮ ಹೊಟ್ಟೆಯ ಚೀಲ ತುಂಬಿಕೊಳ್ಳುತ್ತಿರುವುದು ತಾವು ಪರಿಗಣಿಸಬೇಕು. ಯಾವ ಮೀಸಲಾತಿ ನಮ್ಮನ್ನು ಸ್ವಲ್ಪ ಜೀವನಕ್ಕೆ ಮಕ್ಕಳ ಉದ್ಯೋಗಕ್ಕೆ ಸಹಾಯವಾಗಿದೆಯೋ ಅದನ್ನೂ ಕೂಡಾ ಸರ್ಕಾರ ಒಳಮೀಸಲಾತಿ ಎಂಬ ಮಹಾಮಾರಿಯ ಮೂಲಕ ಈ ಬಡಸಮಾಜಕ್ಕೆ ಅನ್ಯಾಯ ಮಾಡುತ್ತಿರುವುದು ಶೋಚನೀಯ.ನಮ್ಮ ಸಮಾಜದ ಅನೇಕ ಸಮಸ್ಯೆಗಳನ್ನು ಒಂದು ಸಮಿತಿ ರಚಿಸಿ ಸಂಪೂರ್ಣ ಮಾಹಿತಿ ಪಡೆದು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅವಕಾಶ ಗಣನೆಗೆ ತೆಗೆದುಕೊಂಡು ಈ ನಿರ್ಧಾರ ಮಾಡಿದರೆ ನಿಜವಾಗಲೂ ಒಳ ಮೀಸಲಾತಿ ನಮಗೇ ಸಿಗಬೇಕು. ಹೀಗಿರುವಾಗ ಸರ್ಕಾರವು ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ಈ ನಿರ್ಧಾರ ದಯಮಾಡಿ ರದ್ದುಪಡಿಸಬೇಕು. ಈ ನಿರ್ಧಾರ ಕೈ ಬಿಡದಿದ್ದರೆ ಬಂಜಾರಾ ಭೋವಿ, ಕೊರಚ, ಕೊರಮ ಇನ್ನಿತರ ಎಲ್ಲ ಸಮಾಜಗಳಿಗೆ ತಾವು ಅನ್ಯಾಯ ಮಾಡಿದಂತಾಗುತ್ತದೆ. ಈ ಒಳ ಮೀಸಲಾತಿ ನಿರ್ಧಾರ ಕೈ ಬಿಡಬೇಕು ಎಂದು ಮನವಿಯಲ್ಲಿ ತಿಳಿಸಿದರು.