ಕನ್ನಡಪ್ರಭ ವಾರ್ತೆ ಮಡಿಕೇರಿ

ಮೂರ್ನಾಡು ಪ್ರೌಢಶಾಲೆಯ 1993-1995ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ‘ಪ್ರಕೃತಿರಶ್ಮಿ ವಿದ್ಯಾರ್ಥಿ ಬಳಗ’ ವತಿಯಿಂದ ಮೂರ್ನಾಡು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ಬ್ಯಾಗ್ ವಿತರಿಸಲಾಯಿತು.

ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್ ಮಾತನಾಡಿ, ಸಮಾನ ಮನಸ್ಕ ವ್ಯಕ್ತಿಗಳಿಂದ ರೂಪುಗೊಳ್ಳುವ ಸಂಘಟನೆಗಳು ಸದೃಢತೆಯಿಂದ ಕೂಡಿರುತ್ತವೆ. ಇಲ್ಲಿ ಜಾತಿ, ಧರ್ಮ, ಬಡವ, ಬಲ್ಲಿದ ಅನ್ನೋ ತಾರತಮ್ಯ ಇರುವುದಿಲ್ಲ ಎಂದರು.ಸಂಘಟನೆಗಳು ಸೇವಾ ಮನೋಭಾವನೆಯಿಂದ ಸಮಾಜಕ್ಕೆ ಸದುಪಯೋಗವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆಗ ಸಮಾಜದಲ್ಲಿ ಉತ್ತಮ ಸಂಘಟನೆಯಿದು ಎಂದು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಂಘದಲ್ಲಿ ಕ್ರೋಢೀಕರಣವಾಗುವ ಹಣದಲ್ಲಿ ಶೇ. 30ರಷ್ಟು ಸೇವೆಗೆ ವಿನಿಯೋಗಿಸಿದಷ್ಟರೆ ಸಾಕು. ಉಳಿದ ಹಣದಲ್ಲಿ ಸದಸ್ಯರ ಕ್ಷೇಮಾಭಿವೃದ್ದಿ ಹಾಗೂ ಮನರಂಜನೆಯ ನಿಮಿತ್ತ ಮೀಸಲಿಡಬಹುದು ಎಂದರು. ನಿವೃತ್ತಿ ಹೊಂದಿದ ಮೂರ್ನಾಡು ಪ್ರೌಢಶಾಲೆಯ ಶಿಕ್ಷಕ ಎಚ್.ಬಿ. ಕೃಷ್ಣಪ್ಪ ಮತ್ತು ಕಚೇರಿ ಸಹಾಯಕ ಚನ್ನಪ್ಪ ಅವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು. ಪ್ರಕೃತಿರಶ್ಮಿ ವಿದ್ಯಾರ್ಥಿ ಬಳಗದ ಸದಸ್ಯರಾದ ಲತೀಫ್, ರೂಪಶ್ರೀ, ಶ್ವೇತ ಮತ್ತು ಬಾಲಕೃಷ್ಣ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಬಿ.ಎ. ಕೇಶವ, ಪಾರೆಮಜಲು ಅಶೋಕ್, ಎಂ.ಎಸ್. ಸಮೀರ್ ಮತ್ತು ದೇವಿಪ್ರಸಾದ್ ಉಪಸ್ಥಿತರಿದ್ದರು.

ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಕೃತಿರಶ್ಮಿ ವಿದ್ಯಾರ್ಥಿ ಬಳಗದ ಸದಸ್ಯರು ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು. ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 9 ಮತ್ತು 10ನೇ ತರಗತಿಯ ತಲಾ ಮೂರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಪ್ರೌಢಶಾಲೆ ವಿದ್ಯಾರ್ಥಿಗಳಾದ ಭವಿಷ್ಯ ಮತ್ತು ವರುಣ್ಯ ಸ್ವಾಗತ ನೃತ್ಯ ಮತ್ತು ಅನುಪದ ನಾಗರಾಜ್ ಭರತನಾಟ್ಯ ಪ್ರದರ್ಶನ ನೀಡಿದರು. ಕುಶಾಲನಗರದಿಂದ ಆಗಮಿಸಿದ್ದ ರೂಪಶ್ರೀ ವಿದ್ಯಾರ್ಥಿಗಳು ಗಾಂಧಾರ ವಿದ್ಯೆಯ ಪ್ರದರ್ಶನ ನೀಡಿದರು.


ಪ್ರಕೃತಿ ರಶ್ಮಿ ಬಳಗದ ಜಲಜ ನಾಗರಾಜ್ ಪ್ರಾರ್ಥಿಸಿ, ಶಾಲಾ ಸಹ ಶಿಕ್ಷಕಿ ಸುಜಾತ ಸ್ವಾಗತಿಸಿ, ಅನುಪಮ ನಿರೂಪಿಸಿದರು.