ಸಾರಾಂಶ
ವಿದ್ಯಾರ್ಥಿಗಳಿಗೆ ಸಲ್ಲುವ ಪ್ರತಿಭಾ ಪುರಸ್ಕಾರಗಳು ಅವರನ್ನು ಮತ್ತಷ್ಟು ಹೆಚ್ಚು ಜವಾಬ್ದಾರಿಗಳನ್ನು ಹೊತ್ತುಕೊಳ್ಳುವಂತೆ ಸ್ಫೂರ್ತಿ ನೀಡುತ್ತವೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ: ವಿದ್ಯಾರ್ಥಿಗಳಿಗೆ ಸಲ್ಲುವ ಪ್ರತಿಭಾ ಪುರಸ್ಕಾರಗಳು ಅವರನ್ನು ಮತ್ತಷ್ಟು ಹೆಚ್ಚು ಜವಾಬ್ದಾರಿಗಳನ್ನು ಹೊತ್ತುಕೊಳ್ಳುವಂತೆ ಸ್ಫೂರ್ತಿ ನೀಡುತ್ತವೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ತಂದೆ-ತಾಯಿ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಎ. ಉಮಾಪತಿ ಅವರ ತಂದೆ ಹೆಸರಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕೇವಲ ಅಂಕಗಳ ಗಳಿಸುವುದಕ್ಕಾಗಿ ಅಥವಾ ಪ್ರತಿಷ್ಠಿತ ಕಾಲೇಜುಗಳಲ್ಲಿ ಅಡ್ಮಿಷನ್ ಸಿಗಬೇಕು ಎಂಬ ಕಾರಣಕ್ಕೆ ಓದುವುದಕಿಂತ ಮೌಲ್ಯಾಧಾರಿತ ಜೀವನ ನಡೆಸಲು ಶಿಕ್ಷಣ ಬೇಕಾಗಿದೆ. ಸನ್ಮಾರ್ಗದಲ್ಲಿ ಮುನ್ನಡೆದು ಸಮಾಜಮುಖಿ ಬದುಕು ನಡೆಸುವುದು, ನೈತಿಕ ಶಿಕ್ಷಣ ಪಡೆದು ಸತ್ಪ್ರಜೆಯಾಗಿ ಬಾಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ.ಧನಂಜಯ ಮಾತನಾಡಿ, ಕಾಲೇಜಿನ ವಾತಾವರಣ ಸರಿ ಇದ್ದರೆ ಆ ಕಾಲೇಜಿನಲ್ಲಿ ಎಲ್ಲ ಚಟುವಟಿಕೆಗಳು ಕ್ರಿಯಾಶೀಲವಾಗಿರುತ್ತವೆ. ಈ ಕಾಲೇಜಿನಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಹಾಗಾಗಿ ನಮ್ಮ ಕಾಲೇಜಿನಲ್ಲಿ ಎಲ್ಲ ವಿಷಯದಲ್ಲೂ ಮುಂದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.ದಾವಣಗೆರೆ ವಿ.ವಿ. ಮಟ್ಟದಲ್ಲಿ ತೃತೀಯ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಗಗನ, ಉದ್ಯಮಿ ಎಚ್.ಎ. ಉಮಾಪತಿ, ಉಪನ್ಯಾಸಕ ರಾಘವೇಂದ್ರ ರಾವ್ ಮಾತನಾಡಿದರು. ಚೈತ್ರಾ, ಗಗನ ಹಾಗೂ ಕಲಾವತಿ ಅರನ್ನು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಉದ್ಯಮಿ ಎಚ್.ಎ. ಉಮಾಪತಿ ಹಾಗೂ ಪ್ರಾಂಶುಪಾಲ ಡಾ.ಧನಂಜಯ ಸನ್ಮಾನಿಸಿದರು.
ಉಪನ್ಯಾಸಕರಾದ ಗೀತಾ, ರಾಘವೇಂದ್ರ, ಹರಾಳು ಮಹಾಬಲೇಶ್, ಅಶೋಕ್, ಗ್ರಂಥಪಾಲಕ ನಾಗರಾಜ್ ನಾಯ್ಕ್ ಹಾಗೂ ಇತರರು ಇದ್ದರು.- - -
-13ಎಚ್.ಎಲ್.ಐ1.ಜೆಪಿಜಿ:ಕಾರ್ಯಕ್ರಮವನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು.