ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ತಾಲೂಕು ಸಭಾಂಗಣದಲ್ಲಿ ನಡೆಯಿತು.ಹಿಂದಿನ ಪ್ರಗತಿ ಪರಿಶೀಲನ ಸಭೆಯ ಅನುಷ್ಠಾನ ವರದಿಯನ್ನು ಓದುವ ಮೂಲಕ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಗಳ ಜೊತೆಯಲ್ಲಿ ಯಾವ ಹಂತದಲ್ಲಿ ಅಧಿಕಾರಿಗಳು ಯೋಜನೆಯ ಪ್ರಗತಿಗೆ ಕಾರ್ಯೋನ್ಮುಖರಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು. ಅಧಿಕಾರಿಗಳೊಂದಿಗೆ ಹಿಂದಿನ ಅನುಪಾಲನ ವರದಿಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯೊಂದಿಗೆ ಚರ್ಚೆಗಳು ನಡೆದವು.ಗೃಹ ಜ್ಯೋತಿ ಯೋಜನೆ ವಿಷಯಗಳ ಪ್ರಸ್ತಾವನೆಯ ಸಂದರ್ಭದಲ್ಲಿ ಹೆಬ್ಬಾಲೆಯಲ್ಲಿ ನೂತನ ಚೆಸ್ಕಾಂ ವಿದ್ಯುತ್ ಶಾಖಾ ಕಚೇರಿಯನ್ನು ತೆರಯುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧವಾಗಿ ಸಂಬಂಧಿಸಿದ ಇಲಾಖೆಯ ವ್ಯವಸ್ಥಾಪಕರಿಗೆ ಪತ್ರ ವ್ಯವಹಾರ ಮಾಡುವ ಬಗ್ಗೆ ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು. ಅಧ್ಯಕ್ಷತೆ ವಹಿಸಿದ ವಿ.ಪಿ.ಶಶಿಧರ್ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಯುವ ನಿಧಿ ಯೋಜನೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದರ ಜೊತೆಯಲ್ಲಿ ಯೋಜನೆಯನ್ನು ಎಲ್ಲಾ ಫಲಾನುಭವಿಗಳಿಗೆ ದೊರಕುವಂತೆ ಕರ್ತವ್ಯ ನಿರ್ವಹಿಸುವಂತೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಹಾಜರಿದ್ದ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಪೂರಕವಾದ ಮಾಹಿತಿ ಸಂಗ್ರಹಿಸಿ, ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.ಹೆಚ್ಚುವರಿ ಸಾರಿಗೆ ಸಂಪರ್ಕದ ವ್ಯವಸ್ಥೆ, ಮತ್ತು ಯೋಜನೆಯಲ್ಲಿ ಫಲಾನುಭವಿಗಳು ಹೆಚ್ಚಾಗಿರುವ ಬಗ್ಗೆ, ಇನ್ನೂ ಬಾಕಿ ಇರುವ ಫಲಾನುಭವಿಗಳ ಸಂಖ್ಯೆಗಳ ಬಗ್ಗೆ ಹಾಜರಿದ್ದ ಅಧಿಕಾರಿಗಳೊಂದಿಗೆ ಸವಿಸ್ತಾರವಾದ ಚರ್ಚೆಗಳು ನಡೆದವು.ಸಭೆಯಲ್ಲಿ ಸೋಮವಾರಪೇಟೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ ಕುಮಾರ್, ಜಿಲ್ಲಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕೆ.ಸಿ. ಭೀಮಯ್ಯ, ತಾಲೂಕು ಸಮಿತಿ ಸದಸ್ಯರಾದ ಕೆ.ಎಸ್. ಕೃಷ್ಣ ಗೌಡ, ಶ್ರೀನಿವಾಸನ್, ಅಬ್ದುಲ್ ರಜಾಕ್, ರಫೀಕ್ ಖಾನ್, ಆದಂ, ಮಲ್ಲಿಕಾರ್ಜುನ, ಶ್ರೀನಿವಾಸ್, ಮುಸ್ತಫಾ, ಸೇರಿದಂತೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶ್ರೀ ದೇವಿ, ವಿದ್ಯುತ್ ಇಲಾಖೆಯ ಇಂಜಿನಿಯರ್ ರಾಣಿ, ಸಾರಿಗೆ ಇಲಾಖೆ ಅಧಿಕಾರಿ ನಾಗಮಲ್ಲೇಶ್, ಅಶೋಕ್, ಮತ್ತು ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿ ಮಂಜುನಾಥ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ವರ್ಗ ಇದ್ದರು.