ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ತಾಲೂಕಿನ ಜ್ಞಾನ ವಿಕಾಸ ಕಾರ್ಯಕ್ರಮದ ಪ್ರಯುಕ್ತ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ಮಡಿಕೇರಿ ಮೈತ್ರಿ ಸಭಾಂಗಣದಲ್ಲಿ ನಡೆಯಿತು.ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಸಭೆ ಅಧ್ಯಕ್ಷರಾದ ಕಲಾವತಿ ಪಿ ನೆರವೇರಿಸಿ ಮಾತನಾಡಿ, ಮಹಿಳೆಯರು ಸಮಾಜಮುಖಿ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮಹಿಳೆಯರಿಗೆ ಇಂತಹ ವಿಚಾರ ಗೋಷ್ಠಿ ಕಾರ್ಯಕ್ರಮ ಮಾಹಿತಿ ಅತ್ಯಗತ್ಯ ಎಂದು ಹೇಳಿದರು.ಜಿಲ್ಲಾ ನ್ಯಾಯಾಲಯದ ವಕೀಲರಾದ ಮೀನಾ ಕುಮಾರಿ, ನೊಂದ ಮಹಿಳೆಗೆ ಕಾನೂನುನಲ್ಲಿ ಸಿಗುವ ನ್ಯಾಯದ ಬಗ್ಗೆ, ಬಾಲ್ಯ ವಿವಾಹದ ಬಗ್ಗೆ, ಹೆಣ್ಣು ಮಕ್ಕಳಿಗೆ ಶಿಕ್ಷಣದ ಮೌಲ್ಯದ ಕುರಿತು ಮಹಿಳಾ ಸಹಾಯವಾಣಿಯ ಕುರಿತು ಮಾಹಿತಿ ನೀಡಿದರು.
ಪ್ರಾಸ್ತವಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮಡಿಕೇರಿ ತಾಲೂಕಿನ ಯೋಜನಾಧಿಕಾರಿ ಪುರುಷೋತ್ತಮ್ ಮಾತನಾಡಿ, ಯೋಜನೆಯ ಹಿನ್ನೆಲೆ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಇಂದು ಮಹಿಳೆಯು ಸರ್ವತೋಮುಖ ಬೆಳವಣಿಗೆ ಆಗಿ, ಒಂದು ಕುಟುಂಬ ನಿರ್ವಹಣೆ ಮಾಡಲು ಮಹಿಳೆ ಸಿದ್ಧರಾಗಿದ್ದಾರೆ.ಗ್ರಾಮಾಭಿವೃದ್ಧಿ ಯೋಜನೆಯಿಂದ ಎಲ್ಲಾ ಕಾರ್ಯಕ್ರಮಕ್ಕೆ ತೊಡಗಿಸಿಕೊಳ್ಳುವುದರಿಂದ ಇವತ್ತು ಪ್ರತಿ ಯೊಬ್ಬ ಮಹಿಳೆ ತನ್ನ ಕಾಲ ಮೇಲೆ ನಿಂತು ಜೀವನವನ್ನು ಸಾಗಿಸುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ತಾಳೂರು ಉಷಾಕಾಶಿ ರವರು ಮಹಿಳಾ ವಿಚಾರಗೋಷ್ಠಿಯಲ್ಲಿ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಬೆಳೆಸುವಲ್ಲಿ ಮಹಿಳೆ ಮತ್ತು ಪೋಷಕರ ಪಾತ್ರ ದ ಬಗ್ಗೆ ಮಾತನಾಡುತ್ತಾ, ಸಂಸ್ಕೃತಿ ಮತ್ತು ಸಂಸ್ಕಾರದ ಕುರಿತು ಮಕ್ಕಳಲ್ಲಿ ಪೋಷಕರು ಯಾವ ಸಂಸ್ಕಾರ ವನ್ನು ಜೀವನದಲ್ಲಿ ಅಳವಡಿಸಬೇಕು, ಹಿಂದಿನ ಕಾಲದಲ್ಲಿ ಹಿರಿಯರು ಅವಿಭಕ್ತ ಕುಟುಂಬದ ಜೀವನ ಶೈಲಿಯಲ್ಲಿ ಹಿರಿಯರು ಮಕ್ಕಳಿಗೆ ಯಾವ ರೀತಿ ಜೀವನ ಶೈಲಿ, ಸಂಸ್ಕಾರ ಸಂಸ್ಕೃತಿಯನ್ನು ಜೀವನ ರೂಪಿಸುವ ಬಗ್ಗೆ, ಜೀವನದಲ್ಲಿ ಜ್ಞಾನ ಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ ಎಂದರು.ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹೂಗುಚ್ಛ , ರಂಗೋಲಿ, ಛದ್ಮವೇಷ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಅತಿಥಿಗಳು ಬಹುಮಾನವನ್ನು ನೀಡಿ ಶುಭ ಹಾರೈಸಿದರು.ಕೇಂದ್ರದ ಸದಸ್ಯರಿಂದ ಸ್ವ ಉದ್ಯೋಗಕ್ಕೆ ಸಂಬಂಧಿಸಿದಂತೆ ಸ್ಟಾಲ್ ಹಾಕಲಾಗಿತ್ತು.
ಕಾರ್ಯಕ್ರಮದಲ್ಲಿ ಹರಿಣಿ ಪ್ರಾರ್ಥಿಸಿ, ಸೇವಾ ಪ್ರತಿನಿಧಿ ಚಿತ್ರ ಸ್ವಾಗತಿಸಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಾಲಿನಿ ನಿರೂಪಿಸಿ ಯಶೋದ ವಂದಿಸಿದರು.