ಸಾರಾಂಶ
ಧಾರವಾಡ: ಕಲಘಟಗಿ ತಾಲೂಕಿನ ತಂಬೂರು ಗ್ರಾಪಂ ಹಾಗೂ ಹೆಚ್ಚುವರಿ ಪ್ರಭಾರ ಮುಕ್ಕಲ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ನಾಗರಾಜಕುಮಾರ ಎಸ್. ಬಿದರಳ್ಳಿ ಅವರನ್ನು ಕರ್ತವ್ಯಲೋಪ ಹಾಗೂ ಹಣಕಾಸು ದುರಪಯೋಗ ಆಪದಾನೆಗಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅಮಾನತ್ತುಗೊಳಿಸಿದ್ದಾರೆ.
ನಾಗರಾಜಕುಮಾರ ತಂಬೂರ ಹಾಗೂ ಮುಕ್ಕಲ ಗ್ರಾಪಂನಲ್ಲಿ ಎಸ್ಕೋ ಬ್ಯಾಂಕ್ ಖಾತೆಯಿಂದ ಖಾಸಗಿ ವ್ಯಕ್ತಿಗಳಿಗೆ ಹಣ ಸಂದಾಯ ಮಾಡಿರುವುದು ಕಂಡುಬಂದಿದೆ. ತಂಬೂರ ಗ್ರಾಪಂ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ₹5,10 ಲಕ್ಷ ಮತ್ತು 2025-26ನೇ ಸಾಲಿನಲ್ಲಿ ₹2.28 ಲಕ್ಷ ಹಾಗೂ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿರುವ ಮುಕ್ಕಲ ಗ್ರಾಪಂನಲ್ಲಿ 2024ರಲ್ಲಿ ₹4.20 ಲಕ್ಷ ಮತ್ತು 2025ನೇ ಸಾಲಿನಲ್ಲಿ ₹1.30 ಲಕ್ಷ ಮೊತ್ತವನ್ನು ಎಸ್ಕೋ ಬ್ಯಾಂಕ್ ಖಾತೆಯಿಂದ ಖಾಸಗಿ ವ್ಯಕ್ತಿಗಳಿಗೆ ಹಣ ಸಂದಾಯ ಮಾಡಿ, ಸರ್ಕಾರ ನಿಯಮಗಳನ್ನು ಮತ್ತು ಇಲಾಖಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ.ಗ್ರಾಪಂನ ಎಸ್ಕೋ ಖಾತೆಗಳಲ್ಲಿ ಉಳಿದಿರುವ ಅನುದಾನವನ್ನು ಕಡ್ಡಾಯವಾಗಿ ಹೆಸ್ಕಾಂ ಕಂಪನಿಗಳಿಗೆ ಪಾವತಿಸುವುದು ಹಾಗೂ ಶಾಸನಬದ್ಧ ಅನುದಾನದಡಿ ಗ್ರಾಮ ಪಂಚಾಯಿತಿಯ ಎಸ್ಕೋ ಖಾತೆಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಕಡ್ಡಾಯವಾಗಿ ಹಿಂದಿನ ವರ್ಷಗಳಿಗೆ ಬಾಕಿ ಇರುವ ವಿದ್ಯುಚ್ಛಕ್ತಿ ಬಿಲ್ನ್ನು ಪ್ರತಿ ಆರ್.ಆರ್. ಸಂಖ್ಯೆ ಅನುಸಾರ ಹೊಂದಾಣಿಕೆ ಮಾಡಿಕೊಳ್ಳದಿದ್ದರೂ ಸಹ ಮುಂಗಡವಾಗಿ ಹೆಸ್ಕಾಂ ಕಂಪನಿಗಳಿಗೆ ಪಾವತಿಸಲು ಸೂಚಿಸಲಾಗಿದ್ದರೂ ಸಹ ಸರ್ಕಾರದ ನಿಯಮಗಳನ್ನು ಪಾಲಿಸಿದೆ ಇಲಾಖಾ ಮಾರ್ಗಸೂಚಿ ಉಲ್ಲಂಘಿಸಿ, ಕರ್ತವ್ಯ ಲೋಪ ಮಾಡಿದ್ದಾರೆ. ಆದ್ದರಿಂದ ನಾಗರಾಜಕುಮಾರ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ಅಮಾನತ್ತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.