ಸೂರಿಲ್ಲದವರಿಗೆ 10 ಸಾವಿರ ಮನೆ ನಿರ್ಮಾಣ ಗುರಿ: ಕೆ.ಎ.ದಯಾನಂದ್

| Published : Jul 21 2025, 12:00 AM IST

ಸೂರಿಲ್ಲದವರಿಗೆ 10 ಸಾವಿರ ಮನೆ ನಿರ್ಮಾಣ ಗುರಿ: ಕೆ.ಎ.ದಯಾನಂದ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಗೃಹ ಮಂಡಳಿಯಿಂದ ರಾಜ್ಯಾದ್ಯಂತ 10,000 ಮನೆಗಳನ್ನು ನಿರ್ಮಿಸಿ, ಸೂರು ಇಲ್ಲದವರಿಗೆ ನೀಡುವಂತಹ ಯೋಜನೆಯನ್ನು ರೂಪಿಸಲಾಗಿದೆ ಎಂದು ರಾಜ್ಯ ಗೃಹ ಮಂಡಳಿ ಆಯುಕ್ತ ಕೆ.ಎ.ದಯಾನಂದ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಗೃಹ ಮಂಡಳಿಯಿಂದ ರಾಜ್ಯಾದ್ಯಂತ 10,000 ಮನೆಗಳನ್ನು ನಿರ್ಮಿಸಿ, ಸೂರು ಇಲ್ಲದವರಿಗೆ ನೀಡುವಂತಹ ಯೋಜನೆಯನ್ನು ರೂಪಿಸಲಾಗಿದೆ ಎಂದು ರಾಜ್ಯ ಗೃಹ ಮಂಡಳಿ ಆಯುಕ್ತ ಕೆ.ಎ.ದಯಾನಂದ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿ, ಜಿ+3 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಿ ವಿತರಣೆ ಮಾಡುವ ಬಗ್ಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದರು.

ರಾಜ್ಯಾದ್ಯಂತ ನಮ್ಮ ಗೃಹ ಮಂಡಳಿಗೆ ಸೇರಿದ ಸಾಕಷ್ಟು ನಿವೇಶನಗಳು ಇವೆ ಅವೆಲ್ಲವನ್ನು ಕ್ರೋಢೀಕರಿಸುವಂತಹ ಕೆಲಸ ಆರಂಭಗೊಂಡಿದ್ದು, ಶೇ.75 ರಷ್ಟು ಪೂರ್ಣಗೊಂಡಿದೆ. ಇವುಗಳನ್ನು ಹರಾಜು ಮಾಡುವ ಅಥವಾ ಹಂಚಿಕೆ ಮಾಡುವ ಬಗ್ಗೆಯೂ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲಿಯೂ ಸಹ ಕೆಎಚ್‌ಬಿ ವತಿಯಿಂದ ಲೇಔಟ್ ಮಾಡಲು ಚಿಂತನೆ ನಡೆಸಲಾಗಿದ್ದು ಭೂ ಮಾಲೀಕರು ಶೇ. 50:50 ಅನುಪಾತದಲ್ಲಿ ನಿವೇಶನಗಳ ಹಂಚಿಕೆಗೆ ಮುಂದೆ ಬಂದಿದ್ದಾರೆ ಇದನ್ನು ಕೂಡ ಕಾರ್ಯರೂಪಕ್ಕೆ ತರಲಾಗುವುದು. ಸಾರ್ವಜನಿಕ ಆಸ್ತಿಗೆ ಸಂಬಂಸಿದಂತೆ ಈ ಸ್ವತ್ತು ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ನನ್ನ ವೃತ್ತಿಯಲ್ಲಿ ಮಹತ್ತರ ಬೆಳವಣಿಗೆ ಎಂದು ಭಾವಿಸುತ್ತೇನೆ ಇದಕ್ಕೆ ಸರ್ಕಾರದಿಂದಲೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಯಿತು ಇದರ ಪರಿಣಾಮ ಇಂದು ರಾಜ್ಯಾದ್ಯಂತ ಇ-ಖಾತೆ ವ್ಯವಸ್ಥೆ ಜಾರಿಗೊಳ್ಳುತ್ತಿದೆ, ನೆರೆಯ ರಾಜ್ಯಗಳು ಕೂಡ ನಮ್ಮ ವ್ಯವಸ್ಥೆಯನ್ನು ನೋಡಿಕೊಂಡು ಆಯಾ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿವೆ ಎಂದರು.

ಅಧಿಕಾರಿಗಳು ಪ್ರಸ್ತುತ ಸನ್ನಿವೇಶದಲ್ಲಿ ಆತ್ಮಾವಲೋಕನಾ ಮಾಡಿಕೊಳ್ಳುವ ಅಗತ್ಯವಿದೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯವಾಗಿದೆ ಪ್ರಸ್ತುತ ದಿನಗಳಲ್ಲಿ ಕಾನೂನುಬಾಹಿರ ಲೇಔಟ್‌ಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯುವ ಸಲುವಾಗಿ ಇ-ಸ್ವತ್ತು ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಶರಾವತಿ ಹಿನ್ನೀರಿನ ಜನರ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಮುಂದಾಗಿದ್ದೆ. ಆ ನಿಟ್ಟಿನಲ್ಲಿ ಕಾರ್ಯೊನ್ಮುಖನಾಗಿದ್ದೆ. ಸಾಕಷ್ಟು ಕೆಲಸ ಮುಗಿದ ಸಂದರ್ಭದಲ್ಲಿಯೇ ಇಲ್ಲಿಂದ ವರ್ಗಾವಣೆಗೊಂಡೆ. ಹಾಗಾಗಿ ಆ ಕೆಲಸ ಅಲ್ಲಿಗೆ ಅಪೂರ್ಣಗೊಂಡಿತು. ಶಿವಮೊಗ್ಗದೊಂದಿಗೆ ಅದರಲ್ಲೂ ವಿಶೇಷವಾಗಿ ಪತ್ರಕರ್ತರೊಂದಿಗಿನ ಪ್ರೀತಿ ವಿಶ್ವಾಸ ಈಗಲೂ ಸಹ ಮುಂದುವದಿದಿದೆ. ನಾನು ಶಿವಮೊಗ್ಗದ ಪತ್ರಕರ್ತರೊಂದಿಗೆ ಉತ್ತಮ ಸಂಬಂಧ, ಸ್ನೇಹ, ಪ್ರೀತಿ ಎಲ್ಲವನ್ನೂ ಹೊಂದಿದ್ದೇನೆ ಎಂದು ಹೇಳಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಪತ್ರಕರ್ತರಾದ ರಾಮಚಂದ್ರ ಗುಣಾರಿ, ಸಂತೋಷ್ ಕಾಚಿನಕಟ್ಟೆ, ಹೊನ್ನಾಳಿ ಚಂದ್ರಶೇಖರ್ ಸೇರಿದಂತೆ ಮುಂತಾದವರು ಹಾಜರಿದ್ದರು.