ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಸಂಘ ಆಯೋಜಿಸಿರುವ ತತ್ವಪದಗಳ ತಾತ್ವಿಕ ಸಂಗಮ ಹಾಗೂ ಕೆರಗೋಡು ಶಿವಮ್ಮ ಮತ್ತು ತಂಡದಿಂದ ತತ್ವಪದಗಳ ಗಾಯನ, ಗುರು ಸ್ಮರಣೆ ಕಾರ್ಯಕ್ರಮ ಜೂ.೨೪ ರಂದು ನಗರದ ಕೆವಿ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಂಜೆ ೫ ಗಂಟೆಗೆ ನಡೆಯಲಿದೆ ಎಂದು ಕವಯತ್ರಿ ಭವಾನಿ ಲೋಕೇಶ್ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅಧ್ಯಕ್ಷತೆ ವಹಿಸುವರು, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತಾ.ಚಿಕ್ಕಣ್ಣ ಉದ್ಘಾಟನೆ ನೆರವೇರಿಸುವರು. ಸಿರಿ ಇಎನ್ಟಿ ಕ್ಲಿನಿಕ್ ಡಾ.ಶ್ರೇಯಸ್ ಗೌರವ ಉಪಸ್ಥಿತರಿರುವರು. ಜನಪದ ಗಾಯಕರಾದ ಗಾಮನಹಳ್ಳಿ ಸ್ವಾಮಿ ಮತ್ತು ಹನುಮಂತು ಶಿಬಿರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದು, ಭವಾನಿ ಲೋಕೇಶ್ ಸಂಚಿಕೆ ನಿರ್ವಹಣೆ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ಸಂಘ ಸ್ಥಳೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ದಾಖಲಿಸುವ ಸಂದರ್ಭದಲ್ಲಿ ದೇಸಿ ಕಲೆಗಳನ್ನು ದೇಸಿ ಪರಂಪರೆಯ ಜ್ಞಾನವನ್ನು ಅನಕ್ಷರಸ್ಥರ ಪರಂಪರೆಯಲ್ಲಿಯೂ ಹುದುಗಿ ಹೋಗಿರುವ ತತ್ವಾದರ್ಶಗಳನ್ನು ಪ್ರಚುರಪಡಿಸಿ ಮುಖ್ಯ ವಾಹಿನಿಗೆ ತರಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ತತ್ವಪದಕಾರರಿಗೆ ತರಬೇತಿ ಮತ್ತು ಪ್ರಸ್ತುತಿಯನ್ನು ಆಯೋಜಿಸಿದೆ. ಸದ್ಯಕ್ಕೆ ಮಂಡ್ಯ ತಾಲೂಕನ್ನು ಕೇಂದ್ರೀಕರಿಸಿ ಮೊದಲ ೧೨ ತಂಡಗಳಿಗೆ ಆದ್ಯತೆ ನೀಡಿ ನುರಿತ ಗಾಯಕರ ಮೂಲಕ ಅವರ ಸಾಹಿತ್ಯ ಮತ್ತು ರಾಗದ ಏರುಪೇರು ತಿದ್ದುವ ಮುಖಾಂತರ ಸುಸಜ್ಜಿತ ತಂಡವಾಗಿ ರೂಪಿಸಲು ಉದ್ದೇಶಿಸಲಾಗಿದೆ ಎಂದರು.

ಒಂದೊಂದು ತಂಡದಲ್ಲಿ ಆರರಿಂದ ಎಂಟು ಜನ ಗಾಯಕರು ಇರುತ್ತಾರೆ. ಕೆರಗೋಡು, ಕೀಲಾರ, ಮಳವಳ್ಳಿ, ಕಾರಸವಾಡಿ ಸೇರಿದಂತೆ ಹಲವು ಹಳ್ಳಿಗಳಲ್ಲಿರುವ ಗಾಯಕರನ್ನು ಒಗ್ಗೂಡಿಸಿ ತಂಡಗಳನ್ನಾಗಿ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.


ಈಗಾಗಲೇ ತತ್ವಪದಕಾರರು ಗುಂಪು ಗುಂಪಾಗಿ ಸುಶ್ರಾವ್ಯವಾಗಿ ಹಾಡುವುದನ್ನು ಕಂಡಿದ್ದೇವೆ. ಆದರೆ, ಅವರ ಹಾಡುಗಾರಿಕೆಯಲ್ಲಿ ಬಹುತೇಕ ಏಕತಾನತೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಏಕತಾನತೆಯನ್ನು ಪಕ್ಕಕ್ಕೆ ಸರಿಸಿ ರಸಾಭಾಸ ಉಂಟಾಗದಂತೆ ಮೆರುಗನ್ನು ನೀಡಬೇಕಿದೆ. ಈ ರೀತಿಯಾಗಿ ಸುಸಜ್ಜಿತ ತಂಡಗಳನ್ನು ಸಾರ್ವಜನಿಕರಿಗೆ ಪರಿಚಯಿಸಿ ಅಂತಿಮವಾಗಿ ಮೂರು ದಿನಗಳ ಕಾಲ ತತ್ವಪದ ಗಾಯನವನ್ನು ಏರ್ಪಡಿಸಿ ಸಾರ್ವಜನಿಕರಲ್ಲಿ ಸದಭಿರುಚಿ ಮೂಡಿಸುವ ಪ್ರಯತ್ನವನ್ನು ಮಾಡಲು ಕರ್ನಾಟಕ ಸಂಘ ಉತ್ಸವವಾಗಿದೆ ಎಂದರು.

ಗೋಷ್ಠಿಯಲ್ಲಿ ಸೋಮಶೇಖರ್, ಗಾಮನಹಳ್ಳಿ ಸ್ವಾಮಿ, ತಗ್ಗಹಳ್ಳಿ ವೆಂಕಟೇಶ್ ಇದ್ದರು.