ಬಂಕಾಪುರ: ತಂದೆ-ತಾಯಿಯರು ಮನೆಯಲ್ಲಿ ನಿಮ್ಮ ಮಕ್ಕಳಿಗೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಪಣವಾಗಿಟ್ಟ ಹೋರಾಟಗಾರರ ಬದುಕಿನ ಬಗ್ಗೆ ದಿನನಿತ್ಯ ತಿಳಿಸಿ ಅಧ್ಯಯನ ಮಾಡಿಸಿ ಎಂದು ನಿವೃತ್ತ ಪಿಎಸ್ಐ ಪರಶುರಾಮ ನೀರೊಳ್ಳಿ ಹೇಳಿದರು.
ಪಟ್ಟಣದ ಸುಂಕದಕೇರಿ ಓಣಿಯ ಸಂಗೊಳ್ಳಿ ರಾಯಣ್ಣ ಯುವಕ ಮಂಡಳ ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನಿರ್ವಹಿಸಿ ಮಾತನಾಡಿದರು. ಯುವಕರು ದುಶ್ಚಟಗಳಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಮನೆಯಲ್ಲಿ ತಂದೆ ತಾಯಂದಿರು ನಿಮ್ಮ ಮನೆಯಲ್ಲಿ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸರದಾರ್ ವಲ್ಲಭಭಾಯಿ ಪಟೇಲ್, ಸಾವರ್ಕರ್, ಸಂಗೊಳ್ಳಿ ರಾಯಣ್ಣರಂತಹ ಯೋಧರ ಸದ್ಗುಣಗಳನ್ನು, ದೇಶಾಭಿಮಾನವನ್ನು ಹುಟ್ಟುಹಾಕಬೇಕು ಎಂದರು. ಅವರಲ್ಲಿ ನಮ್ಮ ದೇಶದ ಇತಿಹಾಸದ ಬಗ್ಗೆ ಅರಿವು ಮೂಡಿಸಬೇಕು ಎಂದರು.ಪಿಎಸ್ಐ ಡಿಳ್ಳೆಪ್ಪ ಕೂಡಲ ಮಾತನಾಡಿ, ನಮ್ಮ ದೇಶದ ಏಕತೆ ಹಾಗೂ ಸೌಹಾರ್ದತೆ ಬಗ್ಗೆ ಯುವಕರು ವಿಚಾರವಹಿಸಬೇಕು. ಯುವಜನತೆ ದೇಶದ ಅಭಿವೃದ್ಧಿ ಬಗ್ಗೆ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ದೇಶಕ್ಕೆ ಮಾದರಿಯಾಗಿ ಬೆಳೆಸಬೇಕು. ಅವರಲ್ಲಿ ಜಾತಿ , ಧರ್ಮ , ಭಾಷೆ ಎಂಬ ಭೇದಗಳನ್ನು ಬೆಳೆಸದೇ ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದು ಎಂಬ ಭಾವನೆಗಳನ್ನು ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಯಲ್ಲಪ್ಪ ಸುಂಕದ, ಸೋಮಣ್ಣ ಕುರಿ, ವಿರೂಪಾಕ್ಷಪ್ಪ ಹುರಳಿ, ಸುರೇಶ ರಾಣೊಜಿ, ಮಂಜು ಸುಂಕದ, ಶರಣಪ್ಪ ಹುರಳಿ, ಸತೀಶ ರಾಣೋಜಿ ಮುಂತಾದವರು ಇದ್ದರು.