ಸಾರಾಂಶ
ದಾಬಸ್ಪೇಟೆ: ಮಕ್ಕಳಲ್ಲಿ ಮಾನವೀಯ ಬಾಂಧವ್ಯ ವೃದ್ಧಿಸಲು ಅಂಗನವಾಡಿ ಕೇಂದ್ರಗಳು ಪೂರಕವಾಗಲಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು. ತ್ಯಾಮಗೊಂಡ್ಲು ಹೋಬಳಿಯ ಅರಿವೇಸಂದ್ರದಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಕಾಲಘಟ್ಟದಲ್ಲಿ ಮಕ್ಕಳು ಮಾನವೀಯ ಬಾಂಧವ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳಲ್ಲಿ ಹಿರಿಯರನ್ನು ಗೌರವಿಸುವುದು ಕಡಿಮೆಯಾಗುತ್ತಿದೆ. ಇದು ಸಮಾಜಕ್ಕೆ ಮಾರಕ. ಅಂಗನವಾಡಿ ಶಿಕ್ಷಕರು ಮಕ್ಕಳಲ್ಲಿ ಸಂಸ್ಕಾರ ಕಲಿಸಬೇಕು. ಕಲಿಸುವ ಕೇಂದ್ರಗಳಾಗಿ, ಭವಿಷ್ಯದಲ್ಲಿ ಅಂಗನವಾಡಿ ಕೇಂದ್ರಗಳು ಸಮಾಜವನ್ನು ಗಟ್ಟಿಗೊಳಿಸುವ ಮಕ್ಕಳನ್ನು ರೂಪಿಸಬೇಕು ಎಂದು ಹಾರೈಸಿದರು. ಗ್ರಾಪಂ ಅಧ್ಯಕ್ಷೆ ಸೌಮ್ಯ ಅಂಜನಮೂರ್ತಿ ಮಾತನಾಡಿ, ಕೇಂದ್ರದ ಆವರಣದಲ್ಲಿ ಮುಂದಿನ ದಿನಗಳಲ್ಲಿ ಮಕ್ಕಳ ಕಲಿಕೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಪೋಷಕರು ಮಕ್ಕಳನ್ನು ಅಂಗನವಾಡಿಗಳಿಗೆ ದಾಖಲಿಸಬೇಕು ಎಂದರು. ಅಂಗನವಾಡಿ ಮೇಲ್ವಿಚಾರಕಿ ನಿರ್ಮಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ನರಸಿಂಹಮೂರ್ತಿ, ರಂಗೇಗೌಡ, ಹರೀಶ್, ಬಮೂಲ್ ನಿರ್ದೇಶಕ ಭಾಸ್ಕರ್, ಕೆಪಿಸಿಸಿ ಸದಸ್ಯರಾದ ಪ್ರಕಾಶ್ ಬಾಬು, ವಾಸುದೇವ್, ಸಾದತ್ ಉಲ್ಲಾ, ಬುಲೆಟ್ ರಾಜು, ಸೋಮಣ್ಣ, ಅಪ್ಪಾಜಿಗೌಡ, ಧರಣೇಶ್, ವಿಶ್ವನಾಥ್, ಗಂಗಪ್ಪ ಇತರರಿದ್ದರು.