ಮಕ್ಕಳ ಕ್ಷೇತ್ರ ಅವಜ್ಞೆಗೊಳಗಾಗಿರುವ ಅರಿವು ಇದ್ದ ರೆಡ್ಡಿನಾಯ್ಕ, ತಾವು ಕಾರ್ಯ ನಿರ್ವಹಿಸುವ ಉರ್ದು ಶಾಲೆಯಲ್ಲಿ ಪ್ರತಿ ಮಗುವಿನ ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ ಹಾಗು ಶೈಕ್ಷಣಿಕ ಆಯಾಮಗಳನ್ನು ಪುಷ್ಟೀಕರಿಸಿ ಮಕ್ಕಳ ಉನ್ನತಿಗೆ ಶ್ರಮಿಸಿದ ಪರಿಣಾಮವಾಗಿಯೇ ಅವರು ಮಕ್ಕಳ ಮೇಷ್ಟುç ಎಂದೇ ತಾಲೂಕಿನಾದ್ಯಂತ ಜನಜನಿತರಾಗಿದ್ದಾರೆ

ಹಗರಿಬೊಮ್ಮನಹಳ್ಳಿ: ಶಿಕ್ಷಕ ಆಗುವುದು ಸುಲಭ ಆದರೆ, ಮಕ್ಕಳ ಶಿಕ್ಷಕರಾಗುವುದು ಸವಾಲಿನ ಕೆಲಸ. ಜಾತಿ, ಲಿಂಗ, ಧರ್ಮ ಹಾಗೂ ವರ್ಣ ತಾರತಮ್ಯದಿಂದ ಮುಕ್ತರಾದವರೇ ಮಕ್ಕಳು. ಇದೇ ತಾರತಮ್ಯದಿಂದ ಮುಕ್ತರಾದ ರೆಡ್ಡಿನಾಯ್ಕ ಮಕ್ಕಳ ಶಿಕ್ಷಕರಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿವಿಪಿಪಿ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಅಕ್ಕಿ ಬಸವೇಶ ಪ್ರತಿಪಾದಿಸಿದರು.

ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ಶನಿವಾರ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ರೆಡ್ಡಿನಾಯ್ಕ ಅವರನ್ನು ನಾನಾ ಸಂಘಟನೆಗಳು ಮತ್ತು ನಾನಾ ಶಿಕ್ಷಕರು ಜಂಟಿಯಾಗಿ ನಡೆಸಿದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳ ಕ್ಷೇತ್ರ ಅವಜ್ಞೆಗೊಳಗಾಗಿರುವ ಅರಿವು ಇದ್ದ ರೆಡ್ಡಿನಾಯ್ಕ, ತಾವು ಕಾರ್ಯ ನಿರ್ವಹಿಸುವ ಉರ್ದು ಶಾಲೆಯಲ್ಲಿ ಪ್ರತಿ ಮಗುವಿನ ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ ಹಾಗು ಶೈಕ್ಷಣಿಕ ಆಯಾಮಗಳನ್ನು ಪುಷ್ಟೀಕರಿಸಿ ಮಕ್ಕಳ ಉನ್ನತಿಗೆ ಶ್ರಮಿಸಿದ ಪರಿಣಾಮವಾಗಿಯೇ ಅವರು ಮಕ್ಕಳ ಮೇಷ್ಟುç ಎಂದೇ ತಾಲೂಕಿನಾದ್ಯಂತ ಜನಜನಿತರಾಗಿದ್ದಾರೆ ಎಂದು ಬಣ್ಣಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಸಾಹಿತಿ ಹುರಕಡ್ಲಿ ಶಿವಕುಮಾರ್, ಬುಡಕಟ್ಟು ಸಮುದಾಯದ ಮನಸ್ಸುಗಳಲ್ಲಿ ಕಲ್ಮಷವಿರುವುದಿಲ್ಲ. ಬುಡಕಟ್ಟು ಸಮುದಾಯದ ಶಿಕ್ಷಕ ರೆಡ್ಡಿನಾಯ್ಕರು ಬಹುತೇಕ ಮಕ್ಕಳ ಶಾಲಾ ಶುಲ್ಕ, ವಸತಿ ನಿಲಯಗಳಿಗೆ ಸೇರ್ಪಡೆ ಸಹಿತ ಮಕ್ಕಳ ಅನೇಕ ಅಗತ್ಯಗಳಿಗಾಗಿ ತಮ್ಮ ಸಂಬಳದಲ್ಲಿ ಹಣವನ್ನು ಭರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರತಿ ಹಂತದಲ್ಲೂ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.

ಸಾಹಿತಿ ಮೇಟಿ ಕೊಟ್ರಪ್ಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅಮ್ಮ ಸಂಸ್ಥೆಯ ಸಂಸ್ಥಾಪಕಿ ಸಾಹಿರಾಬಾನು ಮಾತನಾಡಿದರು. ಸಮಾರಂಭದಲ್ಲಿ ಮಕ್ಕಳ ಅಧ್ಯಯನ ಕೇಂದ್ರದ ವತಿಯಿಂದ ಸಾಹಿತಿ ಉಪ್ಪಾರ ಬಸಪ್ಪನವರಿಗೆ ರೂ.೫೦೦೦ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿನಿ ಕು.ರಿಷಿಕಾ ಅವರಿಗೆ ರೂ.೩೦೦೦ ಸಹಾಯ ಧನ ವಿತರಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕ ವಿ.ಬಿ.ಮಲ್ಲೇಶಪ್ಪ ಮತ್ತು ಬ್ಯಾಂಕ ಉದ್ಯೋಗಿ ಗಣೇಶರಾವ್ ಹವಾಲ್ದಾರ್ ಸಮಾರಂಭದಲ್ಲಿ ಸನ್ಮಾನಿತರಾದ ಶಿಕ್ಷಕ ರೆಡ್ಡಿನಾಯ್ಕ ಅವರ ಸಾಧನೆ ಕುರಿತ ಕವನಗಳನ್ನು ವಾಚಿಸಿದರು. ಸಮಾರಂಭದಲ್ಲಿ ಪಿ.ಡಬ್ಲುö್ಯ.ಡಿ ಎಇಇ ಕೃಷ್ಣಾನಾಯ್ಕ, ಮುಖ್ಯಗುರುಗಳಾದ ಕೃಷ್ಣಾನಾಯ್ಕ, ವಕೀಲೆ ವಾಸಂತಿ ಸಾಲ್ಮನಿ ಹಾಗೂ ನಿರ್ಮಲಾ ಸೇರಿದಂತೆ ಕೂಡ್ಲಿಗಿ, ಹಡಗಲಿ, ಹೊಸಪೇಟೆ ತಾಲೂಕಿನ ಬಹುತೇಕ ಶಿಕ್ಷಕರು ಉಪಸ್ಥಿತರಿದ್ದರು.

ಪ್ರಕಾಶ್ ಜೈನ್, ಉಪನ್ಯಾಸಕ ವೆಂಕಟೇಶ ನಾಯ್ಕ ಮತ್ತು ಶಿಕ್ಷಕ ಎಂ.ಮಲ್ಲಿಕಾರ್ಜುನ ನಿರೂಪಿಸಿದರು.