ಕನ್ನಡಪ್ರಭ ವಾರ್ತೆ ಆಲಮಟ್ಟಿ
ರಾಜ್ಯದ 1.5 ಲಕ್ಷ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಸದಸ್ಯತ್ವ ಹೊಂದಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ಕೆಎಸ್ ಪಿಎಸ್ ಟಿಎ ) 2026-31ರ ಅವಧಿಯ ಚುನಾವಣೆಗೆ ಸಂಬಂಧಿಸಿದ ಪರಿಷ್ಕೃತ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾಧಿಕಾರಿಗಳು ಮಂಗಳವಾರ ಪ್ರಕಟಿಸಿದ್ದಾರೆ.ಈ ಹಿಂದೆ ಏಪ್ರಿಲ್ 1ಕ್ಕೆ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಹೈಕೋರ್ಟ್ ಏಕಸದಸ್ಯ ಪೀಠದ ತಡೆಯಾಜ್ಞೆಯಿಂದಾಗಿ ಏ.18ರಂದು ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿಗಳಿದ್ದ ಹೈಕೋರ್ಟ್ ಪ್ರಧಾನ ವಿಭಾಗೀಯ ಪೀಠ ಮಂಗಳವಾರ ತಡೆಯಾಜ್ಞೆ ತೆರವುಗೊಳಿಸಿತ್ತು. ಇದರಿಂದ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದ್ದ ಹಂತದಿಂದಲೇ ಚುನಾವಣೆ ಪ್ರಕ್ರಿಯೆ ಪುನರಾರಂಭಗೊಂಡಿದೆ.
ತಾಲೂಕು/ ಯೋಜನಾ ಸಂಘಗಳ ಕಾರ್ಯಕಾರಿ ಸಮಿತಿಗೆ ಚುನಾವಣೆ:ತಾಲೂಕು/ ಯೋಜನಾ ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸ್ಸಾತಿ, ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪ್ರಕಟಣೆವರೆಗೂ ಚುನಾವಣಾ ಪ್ರಕ್ರಿಯೆಗಳು ಮುಗಿದು, ನಿಗದಿತ ಸ್ಥಾನದಷ್ಟೇ ಅಭ್ಯರ್ಥಿಗಳು ಚುನಾಚಣೆ ಕಣದಲ್ಲಿ ಉಳಿದರೆ ಅವಿರೋಧ ಆಯ್ಕೆಯ ಫಲಿತಾಂಶ ಘೋಷಣೆಯಾಗಿತ್ತು. ನಿಗದಿತ ಸ್ಥಾನಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿದ ಕಡೆ ಮತದಾನ ಜರುಗಿಸಲು ಒಂದು ದಿನ ಬಾಕಿ ಉಳಿದು ಅಭ್ಯರ್ಥಿಗಳ ಚುನಾವಣೆ ಪ್ರಚಾರ ಚಾಲ್ತಿಯಲ್ಲಿತ್ತು. ಈಗ ಹಂತದಿಂದಲೇ ಚುನಾವಣೆ ಪ್ರಕ್ರಿಯೆ ಪುನಃ ಆರಂಭಗೊಳ್ಳಲಿವೆ.
ಅಗತ್ಯ ಇರುವ ಕಡೆಗಳಲ್ಲಿ ಮೇ 1ಕ್ಕೆ ಬೆಳಗ್ಗೆ 8.30 ರಿಂದ ಸಂಜೆ 4.30 ರವರೆಗೆ ಮತದಾನ ನಡೆದು ಆ ಬಳಿಕ ಅದೇ ದಿನ ರಾತ್ರಿ 6.30 ರಿಂದ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ತಾಲೂಕು/ಯೋಜನಾ/ಜಿಲ್ಲಾ/ ರಾಜ್ಯ ಘಟಕಗಳ ಚುನಾವಣೆ:
ಈ 3 ಹಂತದ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ಏಕಕಾಲದಲ್ಲಿ ನಡೆಯಲಿದೆ. ಚುನಾವಣೆಗೆ ಅರ್ಹ ಮತದಾರರ ಯಾದಿ ಮೇ 4 ಕ್ಕೆ ಪ್ರಕಟಗೊಳ್ಳಲಿದೆ.ಮೇ 4 ಮತ್ತು 5ಕ್ಕೆ ನಾಮಪತ್ರಗಳ ವಿತರಣೆ ಮತ್ತು ಸ್ವೀಕಾರ ನಡೆಯಲಿದ್ದು, ಅದೇ ದಿನ ಸಂಜೆ 5.30 ನಡೆದು ಕ್ರಮಬದ್ಧ ನಾಮ ಪತ್ರಗಳ ಯಾದಿ ಪ್ರಕಟಿಸಲಾಗುತ್ತದೆ. ಮೇ 6ಕ್ಕೆ ಸಂಜೆ 5.30 ರವರೆಗೆ ನಾಮಪತ್ರ ಹಿಂಪಡೆಯಲು ಸಮಯವಿದೆ. ಮೇ 10ಕ್ಕೆ ಬೆಳಗ್ಗೆ 9 ರಿಂದ ಮಧ್ಯಾಹ್ನ 12.30 ರ ತನಕ ಚುನಾವಣೆ, ಮಧ್ಯಾಹ್ನ1.30ರ ನಂತರ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ರಾಜ್ಯ ಚುನಾವಣಾಧಿಕಾರಿ ಮೆಹೆಬೂಬ್ ಪಾಷಾ ಮೂಲಿಮನಿ ತಿಳಿಸಿದ್ದಾರೆ.
