ಹುಬ್ಬರವಾಡಿ ಗ್ರಾಮದ ಮಾಲಿನ್ಯ ಅಧ್ಯಯನಕ್ಕೆ ತಂಡ

| Published : Jan 07 2025, 12:30 AM IST

ಸಾರಾಂಶ

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದಲ್ಲಿ ರಾಸಾಯನಿಕ ಗೊಬ್ಬರ ಗೋದಾಮಿನ ಚಟುವಟಿಕೆಯಿಂದ ಅಂತರ್ಜಲ ಮಲಿನಗೊಳ್ಳುತ್ತಿರುವ ಸಂಬಂಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆ‌ಎಸ್‌ಪಿ‌ಸಿಬಿ) ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದಲ್ಲಿ ರಾಸಾಯನಿಕ ಗೊಬ್ಬರ ಗೋದಾಮಿನ ಚಟುವಟಿಕೆಯಿಂದ ಅಂತರ್ಜಲ ಮಲಿನಗೊಳ್ಳುತ್ತಿರುವ ಸಂಬಂಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆ‌ಎಸ್‌ಪಿ‌ಸಿಬಿ) ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಅಂತರ್ಜಲ ಮಾಲಿನ್ಯದ ಕುರಿತು ಅಧ್ಯಯನ ನಡೆಸಲು ನಾಲ್ವರು ಸದಸ್ಯರ ತಂಡ ರಚನೆ ಮಾಡುವಂತೆ ಕೆಎಸ್‌ಪಿಸಿಬಿ ಅಧ್ಯಕ್ಷರಿಗೆ ನಿರ್ದೇಶಿಸಿದೆ.

ಈ ಕುರಿತಂತೆ ಹುಬ್ಬರವಾಡಿ ಗ್ರಾಮದ ನಿವಾಸಿ ಪಾಂಡುರಂಗ ಮಹಾದೇವ ಕಾಂಬ್ಳೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮಾಡಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣದ ಗಂಭೀರತೆ ಪರಿಗಣಿಸಿದ ನ್ಯಾಯಪೀಠ, ಕೆಎಸ್‌ಪಿಸಿಬಿ ಅಧ್ಯಕ್ಷರು ಹುಬ್ಬರವಾಡಿ ಗ್ರಾಮದಲ್ಲಿ ಅಂತರ್ಜಲ ಮಾಲಿನ್ಯದ ಕುರಿತು ಅಧ್ಯಯನ ನಡೆಸಲು ನಾಲ್ವರು ಸದಸ್ಯರ ತಂಡ ರಚನೆ ಮಾಡಬೇಕು. ಮಂಡಳಿಯ ಹಿರಿಯ ಪರಿಸರ ಅಧಿಕಾರಿ (ಎಸ್‌ಇಒ) ತಂಡದ ನೇತೃತ್ವ ವಹಿಸಬೇಕು. ತಂಡದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಇಬ್ಬರು ಅಧಿಕಾರಿಗಳು, ಗ್ರಾಮೀಣ ನೀರು ಸರಬರಾಜು ಇಲಾಖೆಯ ಮುಖ್ಯ ಎಂಜಿನಿಯರ್ ಹಾಗೂ ರಾಯಬಾಗ ತಹಸೀಲ್ದಾರ್ ಅವರಿರಬೇಕು.ಈ ತಂಡ ಅರ್ಜಿಯಲ್ಲಿ ಆರೋಪಿಸಲಾದ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿ ಯಾವ ರೀತಿಯ ಮಾಲಿನ್ಯವಾಗುತ್ತಿದೆ. ಅದರಿಂದ ಶಾಲೆಯ ಮಕ್ಕಳು ಹಾಗೂ ಗ್ರಾಮಸ್ಥರ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ. ರಾಸಾಯನಿಕ ಗೊಬ್ಬರ ಗೋದಾಮುಗಳ ಕಾರ್ಯ ಚಟುವಟಿಕೆಯಿಂದ ಅಂತರ್ಜಲ ಮಲಿನಗೊಳ್ಳುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿ, ಮುಂದಿನ ವಿಚಾರಣೆ ವೇಳೆಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.ವೀರರಾಣಿ ಕಿತ್ತೂರು ಚನ್ನಮ್ಮನವರ 196ನೇ‌ ಸ್ಮರಣೋತ್ಸವವನ್ನು ಫೆ.02 ರಂದು ಬೈಲಹೊಂಗಲದಲ್ಲಿರುವ ಚನ್ನಮ್ಮಾಜಿ ಐಕ್ಯಸ್ಥಳದಲ್ಲಿ ಅರ್ಥಪೂರ್ಣವಾಗಿ ಸರ್ಕಾರದಿಂದ ಆಚರಿಸುವಂತೆ ಆಗ್ರಹಿಸಿ ವೀರರಾಣಿ ಕಿತ್ತೂರ ಚನ್ನಮ್ಮನ ಸ್ಮರಣೋತ್ಸವ ಸಮಿತಿ, ರಾಜಕೀಯ ಮುಖಂಡರು, ವಿವಿಧ ಸಂಘಟನೆ, ಸಮಾಜದ ಪದಾಧಿಕಾರಿಗಳು ಪಕ್ಷ ಮತ್ತು ಜಾತಿ ಬೇಧವಿಲ್ಲದೇ ಚನ್ನಮ್ಮನವರ ನೂರಾರು ಅಭಿಮಾನಿಗಳು ಉಪವಿಭಾಗಧಿಕಾರಿಗಳ ಮೂಲಕ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ಚನ್ನಮ್ಮನ ಐಕ್ಯಸ್ಥಳದಲ್ಲಿ ಮನವಿಪತ್ರ ನೀಡಿ ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದರು.ಹುಬ್ಬರವಾಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರವೂ ಆಗಿರುವ ಸರ್ಕಾರಿ ಪ್ರಾಥಮಿಕ ಶಾಲೆ ಕಳೆದ 45 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಏಳು ವರ್ಷಗಳ ಹಿಂದೆ ಶಾಲೆಯ ಪಕ್ಕದಲ್ಲೇ ರಾಸಾಯನಿಕ ಗೊಬ್ಬರದ ಗೋದಾಮಿಗೆ ಅನುಮತಿ ನೀಡಲಾಗಿದೆ. ಅಲ್ಲಿ ರಾಸಾಯನಿಕ ಗೊಬ್ಬರಗಳ ಚೀಲಗಳನ್ನು ಲೋಡಿಂಗ್ ಹಾಗೂ ಅನ್‌ಲೋಡಿಂಗ್ ನಡೆಸಲಾಗುತ್ತಿದೆ. ಈ ವೇಳೆ ಚೀಲಗಳಿಂದ ಏಳುವ ರಾಸಾಯನಿಕ ಧೂಳು ಸುತ್ತಲಿನ ಪ್ರದೇಶಗಳಿಗೆ ಹಬ್ಬುತ್ತಿದ್ದು, ಪಕ್ಕದಲ್ಲೇ ಇರುವ ಶಾಲೆಗೂ ತಲುಪುತ್ತಿದೆ. ರಾಸಾಯನಿಕ ಭೂಮಿಯ ಮುಖಾಂತರ ಅಂತರ್ಜಲ ಸೇರುತ್ತಿದೆ ಎಂದು ಅರ್ಜಿದಾರರು ಆಕ್ಷೇಪಿಸಿದರು.

ಅಲ್ಲದೆ, ಗೋದಾಮಿನ ಕಾರ್ಮಿಕರು ತೆರೆದ ಪ್ರದೇಶದಲ್ಲೇ ಟ್ರಕ್ ಮತ್ತು ಲಾರಿಗಳನ್ನು ತೊಳೆಯುವ ಜತೆಗೆ, ಅವರೂ ಸಹ ಅಲ್ಲಿಯೇ ಸ್ನಾನ ಮಾಡುತ್ತಾರೆ. ಆ ನೀರಿನಲ್ಲಿರುವ ರಾಸಾಯನಿಕ ಸಹ ಅಂತರ್ಜಲ ಸೇರುತ್ತಿದೆ. ಇದರಿಂದ, ಇಡೀ ಗ್ರಾಮ ಹಾಗೂ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಲಭ್ಯವಿರುವ ಏಕೈಕ ಕುಡಿಯುವ ನೀರಿನ ಮೂಲವಾಗಿರುವ ಕೊಳವೆ ಬಾವಿಯ ನೀರೂ ಮಲಿನಗೊಳ್ಳುತ್ತಿದೆ. ಕಲುಷಿತ ನೀರಿನ ದೀರ್ಘ ಕಾಲದ ಬಳಕೆಯಿಂದ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.