ಕಲ್ಯಾಣ ಕರ್ನಾಟಕದ ಬೆಳವಣಿಗೆಗೆ ವಿದ್ಯಾರ್ಥಿಗಳು ಶ್ರಮಿಸಬೇಕು.

ಹೊಸಪೇಟೆ: ತಂತ್ರಜ್ಞಾನ ಮತ್ತು ವ್ಯಾಪಾರವು ಅಭಿವೃದ್ಧಿಯ ಎರಡು ಕಣ್ಣುಗಳು. ಅದರಲ್ಲಿ ಯಾವುದಾದರು ಒಂದು ಪತನ ಹೊಂದಿದರೆ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಜಗತ್ತಿನ ಆರ್ಥಿಕತೆಗೆ ಪೆಟ್ಟು ಬೀಳುತ್ತದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಮತ್ತು ವ್ಯಾಪಾರಗಳಿಗೆ ಸಮಾನಾಂತರವಾಗಿ ಒತ್ತು ನೀಡಿದರೆ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಎಂ.ಮುನಿರಾಜು ಅಭಿಪ್ರಾಯವ್ಯಕ್ತಪಡಿಸಿದರು.

ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಿಂಚನ ​2026ರ ಅಂಗವಾಗಿ ಬುಧವಾರ ನಡೆದ ಪದವಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕದ ಬೆಳವಣಿಗೆಗೆ ವಿದ್ಯಾರ್ಥಿಗಳು ಶ್ರಮಿಸಬೇಕು. ಈ ಭಾಗವು ಹಿಂದುಳಿದ ಪ್ರದೇಶ, ಇಲ್ಲಿ ಏನೂ ಸೌಕರ್ಯಗಳು ದೊರೆಯುವುದಿಲ್ಲವೆಂದು ಕೈಚಾಚಿ ಕುಳಿತರೆ ಈ ಹೈದರಾಬಾದ್ ಕರ್ನಾಟಕವು ಬೆಂಗಳೂರು ನಗರಗಳಂತೆ ವೇಗವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆಗಳನ್ನು ಹಾಗೂ ಸ್ಟಾರ್ಟ್ ಅಪ್ ಆರಂಭಿಸಿದರೆ ಈ ಭಾಗವು ಬೆಳೆವಣಿಗೆ ಕಾಣುತ್ತದೆ ಎಂದು ಕಿವಿಮಾತು ಹೇಳಿದರು.

ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಕಲ್ಗುಡಿ ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವಿ ಕಲಿಕೆಯ ಅಂತ್ಯವಲ್ಲ, ಆರಂಭ. ಪ್ರಾಮಾಣಿಕತೆ, ಆತ್ಮವಿಶ್ವಾಸ ಮತ್ತು ಪೋಷಕರಿಗೆ ಗೌರವ ಕೊಡುವುದನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಪಿಡಿಐಟಿಯ ಆಡಳಿತ ಮಂಡಳಿಯ ಸದಸ್ಯರಾದ ಐ.ಎನ್. ಸಂಗನಬಸಪ್ಪ, ಅನಿಲ್ ಆರ್. ಜವಳಿ, ಬಿ. ಚಂದ್ರಮೌಳಿ, ಕಾಲೇಜಿನ ಪ್ರಾಂಶುಪಾಲ ಡಾ.ರೋಹಿತ್ ಯು.ಎಂ., ಉಪಪ್ರಾಂಶುಪಾಲ ಡಾ.ಪಾರ್ವತಿ ಕಡ್ಲಿ, ಕಾರ್ಯಕ್ರಮದ ಸಂಯೋಜಕರಾದ ಡಾ.ರವಿಕುಮಾರ್ ಎಸ್ಪಿ, ಪದವಿ ದಿನಾಚರಣೆಯ ಸಂಯೋಜಕ ಪ್ರೊ. ಮಂಜುಳಾ ಎಸ್.ಡಿ. ಇದ್ದರು.

ಡಿಐಟಿಯ ಕಾಲೇಜಿನ ಪ್ರಾಂಶುಪಾಲ ಡಾ.ರೋಹಿತ್ ಯು.ಎಂ ಸ್ವಾಗತಿಸಿ, ನೂತನ ಪದವಿಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ಮಂಜುಳಾ ಎಸ್.ಡಿ. ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಇಂದಿರಾ ಹಾಗೂ ಪ್ರೊ.ಮಾಲತೇಶ್ ಕೆ. ನಿರೂಪಿಸಿದರು. ಡಾ.ಪಾರ್ವತಿ ಕಡ್ಲಿ ವಂದಿಸಿದರು.

ಇದೇ ಸಂದರ್ಭದಲ್ಲಿ 400ಕ್ಕೂ ಹೆಚ್ಚು ಬಿಇ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.