ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಆರೋಪದಲ್ಲಿ ಮಾರತ್ತಹಳ್ಳಿಯ ಎಇಸಿಎಸ್ ಲೇಔಟ್‌ನಲ್ಲಿದ್ದ ವರಸಿದ್ಧಿ ವಿನಾಯಕ ದೇವಸ್ಥಾನದ ಗೋಪುರವನ್ನು ಜಿಬಿಎ ಅಧಿಕಾರಿಗಳು ಜೆಸಿಬಿ ಯಂತ್ರ ಬಳಸಿ ಶನಿವಾರ ತೆರವುಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಆರೋಪದಲ್ಲಿ ಮಾರತ್ತಹಳ್ಳಿಯ ಎಇಸಿಎಸ್ ಲೇಔಟ್‌ನಲ್ಲಿದ್ದ ವರಸಿದ್ಧಿ ವಿನಾಯಕ ದೇವಸ್ಥಾನದ ಗೋಪುರವನ್ನು ಜಿಬಿಎ ಅಧಿಕಾರಿಗಳು ಜೆಸಿಬಿ ಯಂತ್ರ ಬಳಸಿ ಶನಿವಾರ ತೆರವುಗೊಳಿಸಿದ್ದಾರೆ.

ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಭಾಗವಾಗಿ ನಡೆದಿರುವ ಈ ಕ್ರಮಕ್ಕೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹತ್ತಾರು ವರ್ಷಗಳಿಂದ ದೇವಸ್ಥಾನವಿದೆ. ಆದರೆ, ಈಗ ಗೋಪುರ ತೆರವು ಮಾಡಲಾಗಿದೆ. ನೋಟಿಸ್ ಮತ್ತು ಮಾಹಿತಿ ನೀಡದೆ ತೆರವು ಕಾರ್ಯಾಚರಣೆ ಕೈಗೊಂಡಿರುವುದು ಸರಿಯಲ್ಲ. ಧಾರ್ಮಿಕ ನಂಬಿಕೆಗಳು ಇರುವುರಿಂದ ಮುಂಚಿತವಾಗಿ ಮಾಹಿತಿ ನೀಡಬೇಕಿತ್ತು ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೆರವು ಕಾರ್ಯಾಚರಣೆಯ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಲವು ವರ್ಷಗಳಿಂದ ದೇವಸ್ಥಾನ ಇರುವುದರಿಂದ ಸ್ಥಳೀಯರಿಗೆ ಧಾರ್ಮಿಕ ಭಾವನೆ ಬೆಸೆದುಕೊಂಡಿದೆ. ಹೀಗಾಗಿ, ತೆರವುಗೊಳಿಸುವ ಮುನ್ನ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸೂಕ್ತ ಕಾಲಾವಕಾಶ ನೀಡಬಹುದಿತ್ತು ಎಂಬುದು ಸ್ಥಳೀಯ ನಿವಾಸಿಗಳ ವಾದ.ನೋಟಿಸ್ ಅಂಟಿಸಲಾಗಿತ್ತು ಎಂದ ಪಾಲಿಕೆ:

ದೇವಸ್ಥಾನದ ರಾಜಗೋಪುರವು ಫುಟ್‌ಪಾತ್ ಭಾಗಕ್ಕೆ ಅಡ್ಡಿಯಾಗುತ್ತಿದೆ ಎಂದು ತಿಳಿಸುವ ನೋಟಿಸ್ ಅನ್ನು ಸಾಕಷ್ಟು ದಿನಗಳ ಹಿಂದೆಯೇ ದೇವಸ್ಥಾನಕ್ಕೆ ಅಂಟಿಸಲಾಗಿತ್ತು ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.