ಮಂಗಳವಾರ ವಾಯು ವಿಹಾರಕ್ಕೆ ಹೋದ ವೇಳೆ ಬನ್ನಿ ಮಹಾಂಕಾಳಿದೇವಿ ದೇವಸ್ಥಾನ ಹಾಗೂ 5 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪುತ್ಥಳಿ ತೆರವು ಮಾಡುತ್ತಿರುವುದನ್ನು ನೋಡಿದ ಸಾರ್ವಜನಿಕರು ಪ್ರತಿಭಟಿಸಿದ್ದಾರೆ. ಮಧ್ಯಾಹ್ನ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ತೆರವುಗೊಳಿಸಿದ ಜಾಗಕ್ಕೆ ಭೇಟಿ ನೀಡಿ ರೈಲ್ವೆ ಇಲಾಖೆ ಅಧಿಕಾರಿಗಳ ನಡೆ ಖಂಡಿಸಿದರು.
ಹುಬ್ಬಳ್ಳಿ:
ಇಲ್ಲಿಯ ಕೇಶ್ವಾಪುರ ರಸ್ತೆಯಲ್ಲಿ ಇರುವ ನೈಋತ್ಯ ರೈಲ್ವೆ ಗಾಲ್ಫ್ ಮೈದಾನದಲ್ಲಿದ್ದ ಬನ್ನಿ ಮಹಾಂಕಾಳಿದೇವಿ ದೇವಸ್ಥಾನ ಹಾಗೂ 5 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪುತ್ಥಳಿ ತೆರವುಗೊಳಿಸಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ರೈಲ್ವೆ ಕಚೇರಿಗೆ ಮುತ್ತಿಗೆ ಹಾಕಿದರು. ಡಿಆರ್ಎಂ ಕಚೇರಿಯಲ್ಲಿನ ನಾಮಫಲಕ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಮಂಗಳವಾರ ವಾಯು ವಿಹಾರಕ್ಕೆ ಹೋದ ವೇಳೆ ತೆರವು ಮಾಡುತ್ತಿರುವುದನ್ನು ನೋಡಿದ ಸಾರ್ವಜನಿಕರು ಪ್ರತಿಭಟಿಸಿದ್ದಾರೆ. ಮಧ್ಯಾಹ್ನ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ತೆರವುಗೊಳಿಸಿದ ಜಾಗಕ್ಕೆ ಭೇಟಿ ನೀಡಿ ರೈಲ್ವೆ ಇಲಾಖೆ ಅಧಿಕಾರಿಗಳ ನಡೆ ಖಂಡಿಸಿದರು.
ಬಳಿಕ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ವಿಭಾಗೀಯ ವ್ಯವಸ್ಥಾಪಕಿ ಬೇಲಾ ಮೀನಾ ಕಚೇರಿಗೆ ಮುತ್ತಿಗೆ ಹಾಕಿ, ನಾಮಫಲಕ ಕಿತ್ತೊಗೆದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪ್ರತಿಭಟನಾಕಾರರು ಹಾಗೂ ಆರ್ಪಿಎಫ್ ಅಧಿಕಾರಿಗಳ ನಡುವೆ ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ವಿಭಾಗೀಯ ವ್ಯವಸ್ಥಾಪಕರು ಆಗಮಿಸುವ ವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ ವಿಭಾಗೀಯ ಸಹ ವ್ಯವಸ್ಥಾಪಕ ಟಿ.ವಿ. ಭೂಷಣ್ ಅವರು ಪ್ರತಿಭಟನಾಕಾರರ ಸಮಾಧಾನ ಪಡಿಸಿ ಮನವಿ ಸ್ವೀಕರಿಸಿದರು. ಬಳಿಕವಷ್ಟೇ ಪ್ರತಿಭಟನೆ ಹಿಂಪಡೆಯಲಾಯಿತು.
ಹಿಂದೂ ಮುಖಂಡ ಜಯತೀರ್ಥ ಕಟ್ಟಿ ಮಾತನಾಡಿ, ರೈಲ್ವೆ ಗಾಲ್ಫ್ ಮೈದಾನದಲ್ಲಿ 70 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಬನ್ನಿ ಮಹಾಂಕಾಳಿ ದೇವಿ ದೇವಸ್ಥಾನ ಹಾಗೂ ಸ್ವಾಮಿ ವಿವೇಕಾನಂದ ಪುತ್ಥಳಿ ತೆರವುಗೊಳಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ನಿಮಗೆ ತಾಕತ್ತಿದ್ದರೆ ರೈಲ್ವೆ ಆಸ್ತಿ ವ್ಯಾಪ್ತಿಯಲ್ಲಿ ಹಲವು ದರ್ಗಾ ಹಾಗೂ ಚರ್ಚ್ಗಳಿದ್ದು ಅವುಗಳನ್ನು ತೆರವುಗೊಳಿಸಿ ಎಂದು ಸವಾಲು ಹಾಕಿದರು.ಹಿಂದೂ ದೇವಸ್ಥಾನ ತೆಗೆದಿರುವುದು ಮೂರ್ಖತನದ ಪರಮಾವಧಿ. ಶನಿವಾರದೊಳಗೆ ದೇವಸ್ಥಾನ ಹಾಗೂ ಪುತ್ಥಳಿ ಪುನರ್ ಸ್ಥಾಪಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಬಳಿಕ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ದೇವಸ್ಥಾನ ಹಾಗೂ ವಿವೇಕಾನಂದ ಮೂರ್ತಿ ತೆರವುಗೊಳಿಸಿದ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ವಿಶ್ವ ಹಿಂದೂ ಪರಿಷತ್ ಹು-ಧಾ ಮಹಾನಗರ ಕಾರ್ಯದರ್ಶಿ ರಮೇಶ ಕದಂ, ಸಹ ಕಾರ್ಯದರ್ಶಿ ಚೇತನ್ ರಾವ್, ಸಂಯೋಜಕ ಪ್ರಶಾಂತ ನರಗುಂದ, ಶಂಕರ ಕಮತರ, ಸಂತೋಷ, ಸುಭಾಸಿಂಗ್ ಜಮಾದಾರ, ಗಣೇಶ ಸೇರಿದಂತೆ ಹಲವರಿದ್ದರು.ವಾಯು ವಿಹಾರಿಗಳಿಂದ ಪ್ರತಿಭಟನೆ..
ಗಾಲ್ಫ್ ಮೈದಾನಕ್ಕೆ ಬೆಳಗ್ಗೆ ವಾಯುವಿಹಾರಿಗಳು ತೆರಳಿದಾಗ ದೇವಸ್ಥಾನ ಹಾಗೂ ವಿವೇಕಾನಂದ ಪುತ್ಥಳಿ ತೆರುವು ಮಾಡುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡರು. ಮೈದಾನದ ಮುಖ್ಯದ್ವಾರದ ಬಳಿ ದಿಢೀರ್ ಪ್ರತಿಭಟನೆ ನಡೆಸಿ, ತಪ್ಪಿಸ್ಥರ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕು. ಮಾ.14ರ ಒಳಗೆ ಪ್ರತಿಮೆ ಪುನರ್ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ನಿರ್ಮಿಸಬೇಕೆಂದು ಗಡುವ ನೀಡಿದರು. ಈ ವೇಳೆ ಬಸವರಾಜ ಕುಂದಗೋಳಮಠ, ವೆಂಕಟೇಶ ಹಬೀಬ, ಪ್ರಭು ನವಲಗುಂದಮಠ, ಬಸವರಾಜ ಶಿರಕೋಳ, ಶೇಖರ ಜಾಧವ, ಶಿವಕುಮಾರ ಹಿರೇಮಠ ಸೇರಿದಂತೆ ಹಲವರಿದ್ದರು.