- ದೇವಿ ಆಭರಣ ಕದ್ದು, ಅದನ್ನು ಖರೀದಿಸಿದ ವ್ಯಾಪಾರಿಗೂ ಟ್ರಸ್ಟ್ ಎಚ್ಚರಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ದೇವಿಯ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣಗಳನ್ನು ಪೂಜಾರಿಯೇ ಕಳವು ಮಾಡಿ, ಆಭರಣಗಳನ್ನು ಕರಗಿಸಿ ಮಾರಾಟ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲೂ ಈ ವಿಚಾರ ಹರಿದಾಡುತ್ತಿದೆ.

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಅರ್ಚಕರ ಕುಟುಂಬಗಳ ಪೈಕಿ ಒಂದು ಪೂಜಾರರ ಕುಟುಂಬಕ್ಕೆ ಸೇರಿದ ಆಕಾಶ ಎಂಬಾತ ದುಗ್ಗಮ್ಮ ದೇವಿಯ ಐದಾರು ಆಭರಣಗಳನ್ನು ಕಳವು ಮಾಡಿದ್ದ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು, ಆ ಭಾಗದ ಮುಖಂಡರು ದೇವಸ್ಥಾನದಲ್ಲೇ ಸಭೆ ಮಾಡಿ, ಆಕಾಶನನ್ನು ತರಾಟೆಗೆ ತೆಗೆದುಕೊಂಡಿರುವುದೂ ವೈರಲ್ ಆಗಿದೆ. ಘಟನೆ ಹಿನ್ನೆಲೆ ಟ್ರಸ್ಟ್ ಕಾರ್ಯಾಧ್ಯಕ್ಷ, ಶಾಸಕ ಹಾಗೂ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನೇತೃತ್ವದಲ್ಲಿ ಟ್ರಸ್ಟಿಗಳು, ಭಕ್ತರ ಸಭೆಯಲ್ಲಿ ಆತನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ದುಗ್ಗಮ್ಮನ ಚಿನ್ನಾಭರಣಗಳು ನಾಪತ್ತೆಯಾದ ಸುದ್ದಿ ಹರಡುತ್ತಿದ್ದಂತೆಯೇ ಭಕ್ತರು ದೇವಸ್ಥಾನ ಬಳಿ ಜಮಾಯಿಸಿದ್ದಾರೆ. ದೇವಸ್ಥಾನದಲ್ಲೇ 3-4 ದಿನಗಳ ಹಿಂದೆ ಸಭೆ ನಡೆಸಿದ ಟ್ರಸ್ಟ್‌ನವರು ಚಿನ್ನಾಭರಣ ಕಳವು ಮಾಡಿದ್ದ ಆರೋಪದ ಮೇಲೆ ಪೂಜಾರಿ ಆಕಾಶನನ್ನು ಕರೆ ತಂದು, ತರಾಟೆಗೆ ತೆಗೆದುಕೊಂಡಿದ್ದರು. ಪೂಜಾರಿ ಆಕಾಶನಿಂದ ಚಿನ್ನಾಭರಣ ಖರೀದಿಸಿದ್ದ ವ್ಯಾಪಾರಿಗೂ ಗುಡಿಗೆ ಕರೆಸಿ, ಎಚ್ಚರಿಕೆ ನೀಡಲಾಗಿತ್ತು.


ಭಕ್ತರು ನೀಡಿರುವ ಚಿನ್ನಾಭರಣ, ಕಾಣಿಕೆಯ ಲೆಕ್ಕ ಇದೆ. ಎಷ್ಟು ಚಿನ್ನಾಭರಣ ಇತ್ತು, ಎಷ್ಟು ನಾಪತ್ತೆ ಆಗಿದೆಯೋ ಅಷ್ಟನ್ನೂ ವಾಪಸ್‌ ತರಬೇಕು ಎಂಬುದಾಗಿ ಪೂಜಾರಿ ಆಕಾಶ ಹಾಗೂ ದೇವಿಯ ಚಿನ್ನಾಭರಣ ಖರೀದಿಸಿದ್ದ ವ್ಯಾಪಾರಿಗೆ ಟ್ರಸ್ಟಿಗಳು, ಆ ಭಾಗದ ಮುಖಂಡರು ಎಚ್ಚರಿಕೆ ನೀಡುವ ವೀಡಿಯೋ ಈಗ ಸದ್ದು ಮಾಡುತ್ತಿದೆ. ಈ ಬಗ್ಗೆ ದೇವಸ್ಥಾನ ಸಮಿತಿಯು ಪೊಲೀಸ್ ಠಾಣೆಗೆ ದೂರು ನೀಡಿದೆ ಎಂಬುದಾಗಿ ಟ್ರಸ್ಟ್ ಕಾರ್ಯಾಧ್ಯಕ್ಷರೂ ಆಗಿರುವ ಎಸ್‌.ಎಸ್‌. ಮಲ್ಲಿಕಾರ್ಜುನ ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

- - -

(ಸಾಂದರ್ಭಿಕ ಚಿತ್ರ)