ಪ್ರತಿ ಗ್ರಾಮಕ್ಕೆ ಗ್ರಾಮಾಭಿವೃದ್ಧಿ ದೃಷ್ಠಿಯಿಂದ ದೇವಸ್ಥಾನ ಹಾಗೂ ಕನ್ನಡ ಶಾಲೆಗಳು ಅತ್ಯವಶ್ಯಕ.

ಕುಕನೂರು: ದೇವಸ್ಥಾನಗಳು ಗ್ರಾಮಸ್ಥರನ್ನು ಭಕ್ತಿ ಮಾರ್ಗದಿಂದ ಸಾಮರಸ್ಯ ಜೀವನಕ್ಕೆ ಕರೆದುಕೊಡು ಹೋದರೆ ಶಾಲೆಗಳು ಶೈಕ್ಷಣಿಕ ಪ್ರಗತಿಗೆ ಕೊಂಡೋಯ್ಯುತ್ತವೆ ಎಂದು ಕಾಗಿನೆಲೆ ಕಾಗಿನೆಲೆಯ ಕನಕ ಗುರುಪೀಠದ ಶ್ರೀನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ಭಟಪ್ಪನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಶ್ರೀಭೀಮಾಂಭೀಕಾದೇವಿ ಜಾತ್ರಾಮಹೋತ್ಸವ ನಿಮಿತ್ತ ನೂತನ ಪಂಚಕಳಸ ರಥೋತ್ಸವ ಲೋಕಾರ್ಪಣೆ ಹಾಗೂ ಸಾಮೂಹಿಕ ವಿವಾಹ ಹಾಗೂ ಪುರಾಣ ಮಹಾಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿ ಗ್ರಾಮಕ್ಕೆ ಗ್ರಾಮಾಭಿವೃದ್ಧಿ ದೃಷ್ಠಿಯಿಂದ ದೇವಸ್ಥಾನ ಹಾಗೂ ಕನ್ನಡ ಶಾಲೆಗಳು ಅತ್ಯವಶ್ಯಕ. ದೇವಸ್ಥಾನಗಳ ಪ್ರಗತಿ ಮನುಷ್ಯನನ್ನು ಸನ್ಮಾರ್ಗದತ್ತ ದಾರಿ ಹಿಡಿಸುತ್ತವೆ. ಶಾಂತಿ ನೆಮ್ಮದಿ ನೀಡುತ್ತವೆ. ಕನ್ನಡ ಶಾಲೆಗಳು ಶಿಕ್ಷಣ ನೀಡುತ್ತವೆ. ಶಿಕ್ಷಣದಿಂದ ಜಗತ್ತು ಬದಲಾವಣೆ ಆಗುತ್ತದೆ. ಶೈಕ್ಷಣೀಕ ಆದ್ಯತೆಯಿಂದ ಶಿಕ್ಷಣದ ಪ್ರಗತಿ ಆಗುತ್ತದೆ ಎಂದರು.

ಭಟಪ್ಪನಹಳ್ಳಿದಲ್ಲಿ ಗ್ರಾಮಸ್ಥರ ಸಂಘಟನೆ, ಸಾಮರಸ್ಯ, ಸೌಹಾರ್ದತೆ ಹಾಗೂ ಒಗ್ಗಟ್ಟಿನಿಂದ ನೂತನ ರಥೋತ್ಸವ ಜರುಗುತ್ತಿದೆ. ರಥ ಎಳೆಯುವ ಹಗ್ಗ ಸಾವಿರಾರು ನೂಲುಗಳಿಂದ ಆಗಿರುತ್ತೆ. ಹಾಗೇ ಗ್ರಾಮೀಣ ಪ್ರದೇಶದಲ್ಲಿ ರಥೋತ್ಸವಗಳು ನೂಲುಗಳೆಂಬ ಎಲ್ಲ ವರ್ಗದ ಜನರು ಒಗ್ಗೂಡಿದರೆ ಮಾತ್ರ ಸಾಧ್ಯ ಆಗುತ್ತವೆ.ಅಂತಹ ಕಾರ್ಯ ಭಟಪ್ಪನಹಳ್ಳಿ ಗ್ರಾಮಸ್ಥರು ಮಾಡಿದ್ದಾರೆ. ಭೀಮಾಂಬೀಕಾದೇವಿ ಸಂಕಟ ದೂರ ಮಾಡುವ ದೇವತೆ ಎಂದರು.

ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮಾತನಾಡಿ, ಸಣ್ಣ ಗ್ರಾಮದಲ್ಲಿ ನೂತನ ರಥ ನಿರ್ಮಾಣ ಮಾಡುವುದು ಸುಲಭದ ಮಾತಲ್ಲ. ಅದು ಗ್ರಾಮಸ್ಥರ ಒಗ್ಗಟ್ಟಿನ ಸಂಕೇತ. ಭಟಪ್ಪನಹಳ್ಳಿ ಗ್ರಾಮಸ್ಥರ ಭಕ್ತಿ ಮಾರ್ಗ ಅನನ್ಯ.ಪ್ರತಿಯೊಬ್ಬರು ಎಲ್ಲ ರಂಗದಲ್ಲೂ ಮುಂದಾಗಬೇಕು.ಶಿಕ್ಷಣದಿಂದ ಯಾರು ವಂಚಿತರಾಗಬಾರದು ಎಂದರು.

ಬಿಜೆಪಿ ಕಾರ್ಯದರ್ಶಿ ಶರಣು ತಳ್ಳಿಕೇರಿ ಮಾತನಾಡಿ, ಗ್ರಾಮದಲ್ಲಿ ಸಹೋದರತೆಯ ಭಾವದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬಾಳುತ್ತಾರೆ. ಗ್ರಾಮೀಣ ಬದುಕು ಸುಂದರ. ಜಾತ್ರೆಗಳು ಗ್ರಾಮೀಣ ಜನರ ಬಾಂಧವ್ಯ ಮತ್ತಷ್ಟು ಹೆಚ್ಚಿಸುತ್ತವೆ ಎಂದರು.

ಚಿದಾನಂದ ಸ್ವಾಮೀಜಿ, ಮಾದಯ್ಯ ಸ್ವಾಮೀಜಿ, ಕೆಪಿಸಿಸಿ ಮಾಜಿ ಸದಸ್ಯ ಎಚ್.ಡಿ.ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಹಾಲು ಮತದ ಯಲಬುರ್ಗಾ ತಾಲೂಕಾಧ್ಯಕ್ಷ ವೀರನಗೌಡ ಪಾಟೀಲ್, ವೀರಯ್ಯ ಭದ್ರಾಪೂರಮಠ, ಪುರಾಣಿಕ ಕಲ್ಲಯ್ಯ ಶಾಸ್ತ್ರೀ, ಹಂಚ್ಯಾಳಪ್ಪ ಕಲ್ಗೂಡಿ, ಶ್ರೀಧರ ಹೊಸಮನಿ, ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ, ಗ್ರಾಮಸ್ಥರಿದ್ದರು. ನಂತರ ಲಘು ರಥೋತ್ಸವ ಜರುಗಿತು.