ಸಾರಾಂಶ
ಭಟ್ಕಳ:
ತಾಲೂಕಿನ ತೆಂಗಿನಗುಂಡಿ ಬಂದರಿನ ಆವರಣದಲ್ಲಿ ಮಾ. 5ರಂದು ಸಂಸದ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಕಿದ್ದ ವೀರ ಸಾರ್ವಕರ ನಾಮಫಲಕ ಹಾಗೂ ಹನುಮ ಧ್ವಜವನ್ನು ಬುಧವಾರ ಮಧ್ಯರಾತ್ರಿ ಹೆಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತಿನೊಂದಿಗೆ ತೆರವುಗೊಳಿಸಿದ್ದಾರೆ.ಈ ಹಿಂದೆ ಕೂಡ ನೆಟ್ಟಿದ್ದ ನಾಮಫಲಕವನ್ನು ಪರವಾನಗಿ ಇಲ್ಲದೇ ಹಾಕಲಾಗಿದೆ ಎಂದು ಹೆಬಳೆ ಪಂಚಾಯಿತಿ ಅಧಿಕಾರಿಗಳು ಜ. 27ರಂದು ಜೆಸಿಬಿ ಮೂಲಕ ತೆರವುಗೊಳಿಸಿದ್ದರು. ನಾಮಫಲಕ ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು, ಬಿಜೆಪಿಗರು ಜ. ೩೦ರಂದು ಹೆಬಳೆ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ, ನಾಮಫಲಕ ಹಾಕಲು ಕಟ್ಟೆಯನ್ನು ಪುನಃ ನಿರ್ಮಿಸಿದ್ದರು. ಸೋಮವಾರ ಕಾರ್ಯಕರ್ತರ ಭೇಟಿಗಾಗಿ ಭಟ್ಕಳಕ್ಕೆ ಆಗಮಿಸಿದ್ದ ಸಂಸದ ಅನಂತಕುಮಾರ ಹೆಗಡೆ ಹೆಬಳೆಗೆ ಹೋದ ಸಂದರ್ಭದಲ್ಲಿ ಕಾರ್ಯಕರ್ತರು ವೀರ ಸಾರ್ವಕರ ನಾಮಫಲಕ ಅಳವಡಿಸಿ, ಹನುಮ ಧ್ವಜ ಹಾರಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸಂಸದ ಅನಂತಕುಮಾರ ಹೆಗಡೆ ಸೇರಿ ೨೧ ಜನರ ಮೇಲೆ ಮಂಗಳವಾರ ಪ್ರಕರಣ ಕೂಡ ದಾಖಲಾಗಿತ್ತು.ಬುಧವಾರ ಮಧ್ಯರಾತ್ರಿ ಪೊಲೀಸ್ ಬಂದೊಬಸ್ತ್ನಲ್ಲಿ ಸಾವರ್ಕರ್ ನಾಮಫಲಕ ಮತ್ತು ಹನುಮಧ್ವಜ ತೆರವು ಕಾರ್ಯಾಚರಣೆ ನಡೆಸಿದ ಪಂಚಾಯಿತಿ ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ. ತೆಂಗಿನಗುಂಡಿಯಲ್ಲಿ ಹಾಕಲಾಗಿದ್ದ ವೀರಸಾವರ್ಕರ್ ನಾಮಫಲಕ ಮತ್ತು ಹನುಮಧ್ವಜ ತೆರವುಗೊಳಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.