ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ನಮ್ಮ ಸಮಾಜಕ್ಕೆ ಬಿಜೆಪಿ ವಿಭಾಗೀಯ ಸಹಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಉಮೇಶಕುಮಾರ ಗೊಂದೆಗಾಂವಕರ್ ತಿಳಿಸಿದರು.ನಗರದ ಡಾ.ಅಂಬೇಡ್ಕರ್ ವೃತ್ತದ ಸಮೀಪದ ಜನವಾಡಾ ರಸ್ತೆಯಲ್ಲಿರುವ ಜಿಲ್ಲಾ ಸವಿತಾ ಸಮಾಜದಿಂದ ಹಾಗೂ ಠಾಕೂರ್ ಅವರು ನೀಡಿರುವ ದೇಣಿಗೆಯಲ್ಲಿ ನಿರ್ಮಿಸಲಾದ ಸವಿತಾ ಸಮಾಜ ಭವನದ ಮೇಲ್ಛಾವಣಿ ಉದ್ಘಾಟನೆಯನ್ನು ಈಶ್ವರಸಿಂಗ್ ಠಾಕೂರ್ ದಂಪತಿ ನೆರೆವೇರಿಸಿದರು. ಈ ವೇಳೆ ಮಾತನಾಡಿದ ಗೊಂದೆಗಾಂವಕರ್, ನಮ್ಮ ಒಂದು ಮನವಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಸಮಾಜದ ಕೆಲಸ ಕಾರ್ಯಗಳಿಗೆ ಸಹಕಾರವಾಗುವ ನಿಟ್ಟಿನಲ್ಲಿ ಠಾಕೂರ್ ಅವರು ದೇಣಿಗೆ ನೀಡಿದ್ದಾರೆ. ಅವರಿಗೆ ನಮ್ಮ ಸಮಾಜದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈಶ್ವರಸಿಂಗ್ ಠಾಕೂರ್ ಮಾತನಾಡಿ, ಸರ್ವರಿಗೂ ಸಮಬಾಳು, ಸಮಪಾಲು ಎನ್ನುವ ತತ್ವ ನಮ್ಮದಾಗಬೇಕು. ಸವಿತಾ ಸಮಾಜ ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದೆ. ಮೇಲ್ಛಾವಣಿಯು ಸಮಾಜದ ಸಂಘಟನೆಗೆ ಪೂರಕವಾಗಿ ಸದ್ಬಳಕೆಯಾಗಲಿ. ಸಂಘಟಿತ ಹೋರಾಟದ ಮೂಲಕ ಸಮಾಜ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು. ಸಮಾಜದ ಗುರುಗಳಾದ ಸವಿತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಭವನದ ಮೇಲ್ಛಾವಣಿ ಉದ್ಘಾಟನೆಗೂ ಮುನ್ನ ಹೋಮ-ಹವನ, ಪೂಜೆ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಗಂಧರ್ವ ಸೇನಾ, ಸಮಾಜದ ಉಪಾಧ್ಯಕ್ಷ ನಾಗರಾಜ ಆರ್ಯ, ಸಂಜುಕುಮಾರ ಮೋರ್ಗಿಕರ್, ಪ್ರಧಾನ ಕಾರ್ಯದರ್ಶಿ ಅಂಬಾದಾಸ ಮೋರ್ಗಿ, ಸಹ ಕಾರ್ಯದರ್ಶಿ ಹರೀಶ್ ಚಲವಾ, ಕೋಶಾಧ್ಯಕ್ಷ ವಸಂತ ತಿರಮನದಾರ, ಕಾರ್ಯಕಾರಿಣಿ ಸದಸ್ಯರಾದ ಗಣಪತಿ ಮೋರ್ಗಿಕರ್, ಅಶೋಕ ಕರಂಜಿ, ಮಧುಕರ ಚಿನಿಮಿಶ್ರೀ, ಪ್ರಕಾಶ ಭೋಪಾಳಗಾಡ, ಪ್ರಕಾಶ ಹೊಕ್ರಾಣಾ, ರಾಕೇಶ್ ಚೌದ್ರಿ, ಸಂಗಪ್ಪ ಗೊಂದೆಗಾಂವಕರ್, ಶ್ರೀನಿವಾಸ ಮುಖೇಡಕರ್, ಶ್ರೀನಿವಾಸ ಚಿಲ್ಲರ್ಗಿಕರ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ತಾಯಂದಿರು, ಯುವಕರು ಉಪಸ್ಥಿತರಿದ್ದರು.