ಸಾರಾಂಶ
ಕೆಲಸ ಕೊಡಲಿಲ್ಲವೆಂದು ಕಂಪನಿಗೆ ಹೀಗೆ ಮಾಡಿದಳೇ?
ಕನ್ನಡಪ್ರಭ ವಾರ್ತೆ ಬೆಳಗಾವಿ
ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ಅಸಮಾನಧಾನಗೊಂಡ ಟೆಕ್ಕಿ ಬೆಂಗಳೂರಿನ ಖಾಸಗಿ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿದ ಯುವತಿಯ ಮನೆಗೆ ಬೆಂಗಳೂರು ಪೊಲೀಸರು ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ.ಇಲ್ಲಿನ ಶಾಹುನಗರದ ನಿವಾಸು ಶ್ರುತಿ ಶೆಟ್ಟಿ ಎಂಬ ಯುವತಿಯೇ ಬೆಂಗಳೂರಿನ ಸಾಫ್ಟವೇರ್ ಕಂಪನಿ ಟಿಸಿಎಸ್ಗೆ ಹುಸಿಬಾಂಬ್ ಕರೆ ಮಾಡಿದ್ದಳು. ಈಕೆ ತನ್ನ ತಾಯಿಯ ಮೊಬೈಲ್ನಿಂದ ಬೆಂಗಳೂರಿನ ಟಿಸಿಎಸ್ ಕಂಪನಿಯ ಕಚೇರಿಗೆ ಹುಸಿ ಬಾಂಬ್ ಕರೆ ಮಾಡಿ ಬೆದರಿಕೆ ಹಾಕಿದ್ದಳು.ಈ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಮಂಗಳವಾರ ಸಂಜೆ ಬೆಳಗಾವಿಗೆ ಆಗಮಿಸಿದ್ದರು. ಯುವತಿ ಶ್ರುತಿ ಶೆಟ್ಟಿ ಮತ್ತು ಅವರ ಪೋಷಕರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದರು. ಶ್ರುತಿ ಶೆಟ್ಟಿ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಉನ್ನತ ವ್ಯಾಸಂಗ ಸಂಬಂಧ ಕೆಲಸ ಬಿಟ್ಟಿದ್ದಳು. ವ್ಯಾಸಂಗ ಮುಗಿಸಿದ ಬಳಿಕ ಕಂಪನಿಯವರು ಪುನಃ ಕೆಲಸಕ್ಕೆ ತೆಗೆದುಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಶ್ರುತಿ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಪೊಲೀಸರ ತಂಡ ಬೆಳಗಾವಿಯ ಎಪಿಎಂಸಿ ಠಾಣೆ ಪೊಲೀಸರ ಸಹಾಯದಿಂದಶ್ರುತಿ ಶೆಟ್ಟಿಯನ್ನು ವಿಚಾರಿಸಿ, ಹೆಚ್ಚಿನ ವಿಚಾರಣೆಗೆ ಪೋಷಕರೊಂದಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಗೆ ಬರುವಂತೆ ನೋಟಿಸ್ ಕೂಡ ನೀಡಿದ್ದಾರೆ.