ಸಾರಾಂಶ
ಷೇರು ಮಾರ್ಕೆಟ್ನಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಹಾಕಿಸಿಕೊಂಡು ಮೋಸ ಮಾಡಿದ್ದ ಆರೋಪಿಯನ್ನು ಹಾವೇರಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಬಂದಿಸಿದ್ದಾರೆ.
ಹಾವೇರಿ: ಷೇರು ಮಾರ್ಕೆಟ್ನಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಹಾಕಿಸಿಕೊಂಡು ಮೋಸ ಮಾಡಿದ್ದ ಆರೋಪಿಯನ್ನು ಹಾವೇರಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಬಂದಿಸಿದ್ದಾರೆ.
ಬ್ಯಾಡಗಿ ಪಟ್ಟಣದ ಗಾಂಧಿನಗರ ನಿವಾಸಿ (ಸದ್ಯ ಹಾವೇರಿ ಬಸವೇಶ್ವರ ನಗರ 17ನೇ ಕ್ರಾಸ್ ನಿವಾಸಿ) ಚಂದ್ರಪ್ಪ ಶಿವಪ್ಪ ತೋಟದ ಎಂಬಾತನೇ ಬಂಧಿತ ಆರೋಪಿ. ಈತ ಹಾನಗಲ್ ತಾಲೂಕು ಶಿಗೇಹಳ್ಳಿಯ ಮನೋಜ ಹಾದಿಮನಿ ಎಂಬುವವರಿಂದ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಪ್ರತಿದಿನ ಶೇ. 2ಕ್ಕಿಂತ ಅಧಿಕ ಲಾಭ ಕೊಡುತ್ತೇನೆ ಎಂದು ನಂಬಿಸಿ, ತನ್ನ ಬ್ಯಾಂಕ್ ಅಕೌಂಟ್ಗೆ ₹5,83,500 ಹಾಕಿಸಿಕೊಂಡು, ಮರಳಿ ಇನ್ವೆಸ್ಟ್ ಮಾಡಿದ ಹಣ ಹಾಗೂ ಲಾಭಾಂಶವನ್ನು ಕೊಡದೇ ನಂಬಿಕೆ ದ್ರೋಹ ಮಾಡಿ ಮೋಸವೆಸಗಿದ್ದ. ಈ ಬಗ್ಗೆ ದೂರುದಾರ ಮನೋಜ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕಿ ಪ್ರಗ್ಯಾ ಆನಂದ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಶಿವಶಂಕರ ಗಣಾಚಾರಿ, ಸಿಬ್ಬಂದಿ ನಾಗೇಂದ್ರ ಹಾನಗಲ್, ಪಿ.ಆರ್. ಭಾವಿಕಟ್ಟಿ, ಎಚ್.ಬಿ. ಭರಮಗೌಡ್ರ ಜತೆಗೂಡಿ ಆರೋಪಿತನ ಖಚಿತ ಮಾಹಿತಿಯನ್ನು ಪತ್ತೆ ಮಾಡಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿತ ಚಂದ್ರಪ್ಪ ತೋಟದನನ್ನು ಹುಬ್ಬಳ್ಳಿ ಬೈರಿದೇವರಕೊಪ್ಪ ಲೆಕ್ವ್ಯೂ ನಗರದಲ್ಲಿ ಹಿಡಿದು ದಸ್ತಗಿರಿ ಮಾಡಿದ್ದಾರೆ. ಈ ಆರೋಪಿತನ ಮೇಲೆ ಈ ಹಿಂದೆಯೂ ಎರಡು ಪ್ರಕರಣಗಳು ದಾಖಲಾಗಿದ್ದು, ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಜಾಮೀನು ಪಡೆದುಕೊಂಡು, ಹೊರಬಂದು ಮತ್ತೆ ಸಾರ್ವಜನಿಕರಿಗೆ ವಂಚನೆ ಮಾಡಿ ತಲೆಮರೆಸಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.