ಸಾರಾಂಶ
ಕನ್ನಡಪ್ರಭ ವಾರ್ತೆ ಕುರುಗೋಡು
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ವತಿಯಿಂದ ದೊಡ್ಡಬಸವೇಶ್ವರ ಮಹಾರಥೋತ್ಸವದ ಅಂಗವಾಗಿ ಪಟ್ಟಣದ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಗೆಹಬ್ಬ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.ಗಂಗಾವತಿ ಪ್ರಾಣೇಶ್, ನರಸಿಂಹಜೋಷಿ ಮತ್ತು ಬಸವರಾಜ ಮಹಾಮನಿ ಅವರನ್ನೊಳಗೊಂಡ ಹಾಸ್ಯ ಕಲಾವಿದರ ತಂಡ ಉತ್ತರ ಕರ್ನಾಟಕದ ಜವಾರಿ ಶೈಲಿಯ ಹಾಸ್ಯ ಚಟಾಕಿಗಳನ್ನು ಹಾರಿಸಿದರು.
ಪಟ್ಟಣದಲ್ಲಿ ಹೆಚ್ಚು ಜನರು ಬಯಲು ಬಹಿರ್ದೇಸೆಯನ್ನು ಅವಲಂಬಿಸಿದ್ದೀರಿ. ಗ್ರಾಮವನ್ನು ಸುತ್ತುವರಿದಿರುವ ಗುಡ್ಡದ ಮರೆಯಲ್ಲಿ ಬಹಿರ್ದೇಸೆಗೆ ಹೋಗುವುದು ನೋಡಿದರೆ ಹೈದರಾಲಿ ಸೈನಿಕರು ಕಂಡಂತೆ ಕಾಣುತ್ತಾರೆ ಎಂದು ಹಾಸ್ಯದ ರೂಪದಲ್ಲಿ ಹೇಳಿದ ಗಂಗಾವತಿ ಪಾಣೇಶ ಜನರನ್ನು ನಗೆಗಡಲಲ್ಲಿತೇಳಿಸಿದರು.ನರಸಿಂಹ ಜೋಷಿ ಮತ್ತು ಬಸವರಾಜ ಮಹಾಮನಿ ಅವರ ಹಾಸ್ಯ ಪ್ರೇಕ್ಷಕರಲ್ಲಿ ನಗೆಬುಗ್ಗೆ ಎಬ್ಬಿಸಿತು. ಹೊಸಪೇಟೆಯ ಅಂಜಲಿ ಮತ್ತು ತಂಡದ ಕಲಾವಿದರು ಭರತನಾಟ್ಯ ಪ್ರದರ್ಶಿಸಿದರು. ಹೋಗೋಣ ಬಾ ಜಾತ್ರೆಗೆ ಜಾನಪದ ಗೀತೆಗೆ ನೃತ್ಯ ಪ್ರದರ್ಶನ ನೀಡಿ ಜನಮನ ರಂಜಿಸಿದರು. ಪ್ರಕೃತಿ ರೆಡ್ಡಿ ಮತ್ತು ತಂಡ ಶುಶ್ರಾವ್ಯವಾಗಿ ಹಾಡಿದ ಸಂಗೀತಕ್ಕೆ ಪ್ರೇಕ್ಷಕರು ತಲೆದೂಗಿದವು. ಕಾರ್ಯಕ್ರಮ ಉದ್ಘಾಟಿಸಿ ಎಡಿಸಿ ಮಂಜುನಾಥ, ಜಿಲ್ಲೆಯವಿವಿಧ ತಾಲೂಕುಗಳಿಂದ ರಥೋತ್ಸವಲ್ಲಿ ಭಾಗವಹಿಸುವ ಭಕ್ತರಿಗೆ ಯಾವುದೇ ಮನೋರಂಜನೆ ದೊರೆಯುತ್ತಿರಲಿಲ್ಲ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ವತಿಯಿಂದ ಹಾಸ್ಯ ಕಾರ್ಯಕ್ರಮ ಆಯೋಜಿಸಿರುವುದು ಹರ್ಷತಂದಿದೆ. ಪ್ರತಿವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಸಲಹೆ ನೀಡಿದರು. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಇದ್ದರು.