ಕೊಪ್ಪಳ: ಕರ್ನಾಟಕ ರಾಜ್ಯ ಮತ್ತು ದೇಶದಲ್ಲಿ ಪ್ರತಿಭಾನ್ವಿತ ನ್ಯಾಯಾಧೀಶರಿದ್ದು, ಜಾಗತಿಕವಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ನ್ಯಾಯಾಂಗ ಇಲಾಖೆಯಿಂದ ನಡೆದ ಯಲಬುರ್ಗಾ ತಾಲೂಕಿನ ನೂತನ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜ್ಯದ ಹೈಕೋರ್ಟಗಳಲ್ಲಿ ಮತ್ತು ದೇಶದ ಸುಪ್ರೀಂ ಕೋರ್ಟನಲ್ಲಿ ಚಿಂತನಾಶೀಲ,ಜನಪರ ಕಾಳಜಿ ಹೊಂದಿದ ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳಿದ್ದಾರೆ. ಈ ಕಾರಣದಿಂದಲೇ ನಮಗೆ ಉತ್ತಮ ನ್ಯಾಯ ಸಿಗುತ್ತಿದೆ ಎಂದ ಅವರು, ಸುಪ್ರೀಂ ಕೋರ್ಟನ ಒಂದು ಪೀಠವು ದಕ್ಷಿಣ ಭಾರತದ ಬೆಂಗಳೂರಲ್ಲಿ ಆರಂಭವಾಗುವ ದಿಸೆಯಲ್ಲಿ ರಾಜ್ಯ ಹೈಕೋರ್ಟನ ಎಲ್ಲ ನ್ಯಾಯಾಧೀಶರು ತೀರ್ಮಾನಿಸಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
ಇಡೀ ಜಗತ್ತಿನಲ್ಲಿಯೇ ಉತ್ತಮ ನ್ಯಾಯಾಂಗ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಎಲ್ಲ ನ್ಯಾಯಾಧೀಶರು ಪ್ರಾಮಾಣಿಕವಾಗಿ ನ್ಯಾಯ ನೀಡುತ್ತಿದ್ದಾರೆ. ಧಾರವಾಡ ಮತ್ತು ಕಲಬುರಗಿಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಪೀಠ ಆರಂಭವಾಗಿದ್ದು, ತ್ವರಿತ ನ್ಯಾಯದಾನಕ್ಕೆ ಅನುಕೂಲವಾಗಿದೆ ಎಂದರು.ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆಗೆ ಮೂಲಸೌಕರ್ಯ ಬೇಕು ಎನ್ನುವ ನ್ಯಾಯಾಧೀಶರ ಸಲಹೆ ಅಭಿವೃದ್ಧಿಗೆ ಪೂರಕವಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ರಾಜ್ಯದ ನ್ಯಾಯಾಲಯಗಳಲ್ಲಿ ಉತ್ತಮ ಮೂಲಭೂತ ಸೌಕರ್ಯವಿದೆ.
ಜನಸಾಮಾನ್ಯರಿಗೆ ಸುಲಭ, ವೇಗವಾದ ಹಾಗೂ ಪರಿಣಾಮಕಾರಿ ನ್ಯಾಯ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಬೆಳೆಯುತ್ತಿರುವ ಪಟ್ಟಣಗಳಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನ್ಯಾಯಾಲಯ ಸಂಕೀರ್ಣ ನಿರ್ಮಿಸುವುದು, ಅಲ್ಲಿನ ಸ್ಥಳೀಯ ಜನರಿಗೆ ಬಹು ಉಪಯುಕ್ತವಾಗಲಿದೆ. ರಾಜ್ಯ ಸರ್ಕಾರವು ನ್ಯಾಯಾಂಗ ಕ್ಷೇತ್ರದಲ್ಲಿ ಸುಧಾರಣೆ ತರಲು ಬದ್ಧವಾಗಿದ್ದು, ಹೊಸ ನ್ಯಾಯಾಲಯಗಳ ನಿರ್ಮಾಣ, ಹಳೆಯ ಕಟ್ಟಡಗಳ ದುರಸ್ತಿ ಹಾಗೂ ತಂತ್ರಜ್ಞಾನ ಬಳಕೆ ಉತ್ತೇಜಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಸಮರ್ಥಗೊಳಿಸಲು ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ ಎಂದರು.
ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಒತ್ತು ನೀಡಿದೆ. ಕೊಪ್ಪಳ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಕುಕನೂರು, ಕಾರಟಗಿ ಮತ್ತು ಕನಕಗಿರಿ ತಾಲೂಕುಗಳಲ್ಲಿ ಸಹ ಹೊಸ ನ್ಯಾಯಾಲಯಗಳ ಸಂಕೀರ್ಣ ನಿರ್ಮಾಣಕ್ಕೆ ಒತ್ತು ಕೊಡಲಾಗಿದೆ ಎಂದರು.
ಕೆರೆ ತುಂಬಿಸುವುದಕ್ಕೆ ಆದ್ಯತೆ: ರೈತರ ಕಾರ್ಯಕ್ರಮಗಳ ಬಗ್ಗೆ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ ಸಲಹೆಯ ಬಗ್ಗೆ ಅಧ್ಯಕ್ಷೀಯ ಭಾಷಣದಲ್ಲಿ ಪ್ರತಿಕ್ರಿಯಿಸಿದ ರಾಯರೆಡ್ಡಿ ಅವರು, ಈಗಾಗಲೇ ಯಲಬುರ್ಗಾ ಮತ್ತು ಕುಕನೂರ ತಾಲೂಕುಗಳಲ್ಲಿ ಕೆರೆ ತುಂಬಿಸುವ ಕಾರ್ಯಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುತ್ತಿದೆ. ಮುಂದಿನ ವರ್ಷ ಮತ್ತೆ 30 ಕೆರೆಗಳನ್ನು ತುಂಬಿಸಲಾಗುತ್ತದೆ ಎಂದರು.ಈಗಾಗಲೇ ಯಲಬುರ್ಗಾ ಮತ್ತು ಕುಕನೂರ ತಾಲೂಕುಗಳಲ್ಲಿ ಕೋಲ್ಡ್ ಸ್ಟೋರೇಜ್ ಇದ್ದು, ಆಹಾರ ಸಂಸ್ಕರಣ ಘಟಕ ತೆರೆಯಲು ಅವಕಾಶವಿದೆ. ಜನತೆ ಉತ್ಸಾಹ ತೋರಬೇಕು. ಯಲಬುರ್ಗಾದಲ್ಲಿ ವಕೀಲರ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ರಾಯರೆಡ್ಡಿ ತಿಳಿಸಿದರು.