ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ವಕ್ಪ್ ಆಸ್ತಿಯನ್ನು ಕೊಳ್ಳೆ ಹೊಡೆಯಲು ಹೊರಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.ನಗರದ ಈದ್ಗಾ ಮೈದಾನದಲ್ಲಿ ಅಲ್ ಇಂಡಿಯಾ ಮುಸ್ಲಿಂ ಕಾನೂನು ಸಮಿತಿ, ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ವಕ್ಪ್ ಕಾಯ್ದೆ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮೋದಿ ಮತ್ತು ಅಮಿತ್ ಶಾ ವಕ್ಸ್ ಆಸ್ತಿಯನ್ನು ಕೊಳ್ಳೆಹೊಡೆದು ಇಬ್ಬರು ವ್ಯಾಪಾರಿಗಳಿಗೆ ಕೊಡಲು ತೀರ್ಮಾನ ತೆಗೆದುಕೊಂಡಿದ್ದಾರೆ. ದೇಶವನ್ನು ಲೂಟಿ ಮಾಡಿ ಕೊಳ್ಳೆಹೊಡೆಯಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಜೆಪಿ, ಆರ್ಎಸ್ಎಸ್, ಮುಸ್ಲಿಂ ಸಮುದಾಯವನ್ನು ದ್ವೇಷಿಸುತ್ತಿದೆ. ಜಾತಿ ಜಾತಿ ಹೊಡೆಯುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದರು.ವಕ್ಸ್ ಕಾಯ್ದೆ ಬಿಲ್ ನ್ನು ತಂದು ಆ.8 ಕ್ಕೆ ಒಂದು ವರ್ಷ ಆಗುತ್ತದೆ. ಕಾನೂನು ಆಗಿ ಜಾರಿಯಾಯಿತು. ರಾಷ್ಟ್ರಪತಿಗಳು ಅಂಕಿತ ಹಾಕಿ ಕಾನೂನು ಮಾಡಿದ್ದಾರೆ. ಈದ್ಗಾ ಮೈದಾನಕ್ಕೆ ಬಿಜೆಪಿಯವರು ಬೇಲಿ ಹಾಕಿಬಿಡುತ್ತಿದ್ದರು. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಇದೆ. ಬಿಜೆಪಿ ಸರ್ಕಾರ ಬಂದರೆ ನೂರಕ್ಕೆ ನೂರಷ್ಟು ಬೇಲಿ ಹಾಕುತ್ತಾರೆ. ಕಾನೂನು ಕರಾಳವಾಗಿದೆ. ಕಾನೂನು ಜಾರಿಯಾದರೆ ಮಸೀದಿಯಲ್ಲಿ ನಮಾಜ್ ಮಾಡಲು ಜಿಲ್ಲಾಧಿಕಾರಿ ಅನುಮತಿ ಕೇಳಬೇಕಾಗುತ್ತದೆ ಎಂದರು.
ಅಂಕಣಕಾರ, ಸಾಮಾಜಿಕ ಚಿಂತಕ ಶಿವಸುಂದರ್ ಮಾತನಾಡಿ, ದೇಶದಲ್ಲಿ ಅಣ್ಣ ತಮ್ಮಂದಿರಂತೆ ಬದುಕುತ್ತಿರುವ ಹಿಂದೂ-ಮುಸ್ಲಿಮರ ಮಧ್ಯೆ ದ್ವೇಷ ಬೀಜ ಬಿತ್ತು ತಮ್ಮ ರಾಜಕೀಯ ಬೇಳೆ. ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದರು.ಸಮಾವೇಶದಲ್ಲಿ ಮುಫ್ತಿ ಜಾಫರ್ ಹುಸೇನ್ ಸಾಹೇಬ್, ಅಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ಸದಸ್ಯರಾದ ಮೌಲಾನ ತನ್ವೀರ್ ಹಾಸ್ಮಿ ಸಾಹೇಬ್, ಮುಫ್ತಿ ಇಫ್ತೆಖಾರ್ ಸಾಹೇಬ್, ಮೌಲಾನ ಖಾರಿ ಸಲ್ಮಾನ್ ಸಾಹೇಬ್, ಮೌಲ್ವಿ ಆರಿಫ್ ಸಾಹೇಬ್ ತಾಳವಾಡಿ, ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಮಾಜಿ ಅಧ್ಯಕ್ಷ ಸೈಯದ್ ರಫೀ, ಅಬ್ರಾರ್ ಅಹಮದ್ , ಇತರರು ಭಾಗವಹಿಸಿದ್ದರು.