ಸಹೋದರಿಯರಂತೆ ಕಂಡುಬರುವ ಅನೇಕ ಮಹಿಳೆಯರು ನನ್ನೊಂದಿಗೆ ಬೆಸೆಯಲ್ಪಟ್ಟಿದ್ದಾರೆ. ಪ್ರತಿ ವರ್ಷ ರಕ್ಷಾ ಬಂಧನದಂದು ನನಗೆ ರಾಖಿ ಕಟ್ಟುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದು ನನ್ನ ಮೇಲಿನ ಅವರ ಪ್ರೀತಿ ಮತ್ತು ವಿಶ್ವಾಸದ ಪ್ರತೀಕವಾಗಿದೆ ಎಂದು ಹೇಳಿದರು. ಇಂತಹ ಅವಕಾಶ ಕಲ್ಪಿಸಿದ ಮತದಾರರಿಗೆ ಹಾಗೂ ಮಹಿಳೆಯರಿಗೆ ನಾನು ಸದಾ ಕೃತಜ್ಞನಾಗಿರುತ್ತೇನೆ. ಮಹಿಳಾ ದಿನಾಚರಣೆಯನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟು ವೈಭವದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿರುವ ನಾನು ಸಮಾಜದ ಪ್ರತಿಯೊಬ್ಬರ ಕಷ್ಟ-ನಷ್ಟಗಳನ್ನು ಅರಿತು ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆಂದರೆ ಅದಕ್ಕೆ ಮಹಿಳೆಯರ ಆಶೀರ್ವಾದವೇ ಪ್ರಮುಖ ಕಾರಣ ಎಂದು ಶಾಸಕ ಎಚ್. ಪಿ. ಸ್ವರೂಪ್ ಹೇಳಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಮಹಿಳೆಯರಿಗೆ ಗೌರವ ಕೊಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಕುಟುಂಬ ನಿರ್ವಹಣೆಯಲ್ಲಿ ಸ್ತ್ರೀಯರ ಪಾತ್ರ ಅಪಾರವಾಗಿದೆ. ಮನೆಯ ಸುಖ-ಶಾಂತಿ, ಸಮತೋಲನ ಮತ್ತು ಸಂಸ್ಕಾರದ ಮೂಲವೇ ಮಹಿಳೆಯರು. ಯಾವ ಮನೆಯಲ್ಲಿ ಮಹಿಳೆ ಸಂತೋಷದಿಂದ ಇರುತ್ತಾರೋ ಅಂತಹ ಕುಟುಂಬಗಳು ಅಭಿವೃದ್ಧಿ ಹಾಗೂ ಸುಭಿಕ್ಷತೆಯ ದಾರಿಯಲ್ಲಿ ಸಾಗುತ್ತವೆ ಎಂದು ಅವರು ತಿಳಿಸಿದರು. ನಾನು ಶಾಸಕನಾಗಿ ಆಯ್ಕೆಯಾಗಲು ನನ್ನ ತಾಯಿ, ಧರ್ಮಪತ್ನಿ, ಸಹೋದರಿ ಸೇರಿದಂತೆ ಮನೆಯ ಎಲ್ಲಾ ಮಹಿಳೆಯರ ಪ್ರೋತ್ಸಾಹ ಮತ್ತು ಆಶೀರ್ವಾದ ಕಾರಣವಾಗಿದೆ. ಜನಪ್ರತಿನಿಧಿಯಾಗಿ ಆಯ್ಕೆಯಾದ ಬಳಿಕವೂ ನನ್ನ ಕುಟುಂಬದ ವ್ಯಾಪ್ತಿ ವಿಸ್ತಾರವಾಗಿದೆ. ಸಹೋದರಿಯರಂತೆ ಕಂಡುಬರುವ ಅನೇಕ ಮಹಿಳೆಯರು ನನ್ನೊಂದಿಗೆ ಬೆಸೆಯಲ್ಪಟ್ಟಿದ್ದಾರೆ. ಪ್ರತಿ ವರ್ಷ ರಕ್ಷಾ ಬಂಧನದಂದು ನನಗೆ ರಾಖಿ ಕಟ್ಟುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದು ನನ್ನ ಮೇಲಿನ ಅವರ ಪ್ರೀತಿ ಮತ್ತು ವಿಶ್ವಾಸದ ಪ್ರತೀಕವಾಗಿದೆ ಎಂದು ಹೇಳಿದರು. ಇಂತಹ ಅವಕಾಶ ಕಲ್ಪಿಸಿದ ಮತದಾರರಿಗೆ ಹಾಗೂ ಮಹಿಳೆಯರಿಗೆ ನಾನು ಸದಾ ಕೃತಜ್ಞನಾಗಿರುತ್ತೇನೆ. ಮಹಿಳಾ ದಿನಾಚರಣೆಯನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟು ವೈಭವದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಬಿ.ಪಿ.ಕೃಷ್ಣೇಗೌಡ ಅವರು ಮಾತನಾಡಿ, ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶ ಕಲ್ಪಿಸುವುದು ನಮ್ಮ ಸಮಾಜದ ಪ್ರಮುಖ ಗುರಿಯಾಗಬೇಕು ಎಂದು ಹೇಳಿದರು. ಸೃಷ್ಟಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ತರವಾಗಿದ್ದು, ಭೂಮಿಯಂತೆ ಮಹಿಳೆಯೂ ಜೀವವನ್ನು ನೀಡುವ ಶಕ್ತಿ ಹೊಂದಿದ್ದಾಳೆ. ಆದ್ದರಿಂದ ಭೂಮಿಯನ್ನು ಎಷ್ಟು ಗೌರವಿಸುತ್ತೇವೋ ಅಷ್ಟೇ ಗೌರವವನ್ನು ಮಹಿಳೆಯರಿಗೂ ನೀಡಬೇಕು ಎಂದರು. ಮಹಿಳೆಯರು ಸಹನಶೀಲತೆ, ತ್ಯಾಗ ಮತ್ತು ಕಾಳಜಿಯ ಪ್ರತಿರೂಪವಾಗಿದ್ದು, ಕುಟುಂಬದ ಬೆನ್ನೆಲುಬಾಗಿದ್ದಾರೆ. ಸಮಾಜದ ಪ್ರತಿಯೊಂದು ಹಂತದಲ್ಲೂ ಮಹಿಳೆಯರು ತಮ್ಮದೇ ಆದ ಸಾಧನೆಯನ್ನು ಮೆರೆದಿದ್ದಾರೆ. ರಾಜಕೀಯ, ಶಿಕ್ಷಣ, ಆರೋಗ್ಯ, ವಿಜ್ಞಾನ, ಬಾಹ್ಯಾಕಾಶ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಇಡೀ ಸಮಾಜಕ್ಕೆ ಪ್ರೇರಣೆಯಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಅನೇಕ ಮಹಿಳಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.