ಸಾರಾಂಶ
ಕೋಲಾರ : ಬಿಪಿಎಲ್ಗೆ ಅರ್ಹರಲ್ಲದ ಕಾರ್ಡ್ಗಳು ಬದಲಾವಣೆ ಆಗುತ್ತದೆ. ಆದರೆ, ಬಿಪಿಎಲ್ ಕಾರ್ಡ್ ರದ್ದು ಮಾಡಲ್ಲ, ಅವರನ್ನು ಎಪಿಎಲ್ ಕಾರ್ಡ್ಗೆ ಬದಲಾವಣೆ ಮಾಡ್ತೇವೆ ಅಷ್ಟೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದ ಹೊರವಲಯದ ರತ್ನಕನ್ವೇಕ್ಷನ್ ಹಾಲ್ಗೆ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಶೇ.50 ಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ಗಳಿಲ್ಲ. ಆದ್ರೆ ಕರ್ನಾಟಕದಲ್ಲಿ ಶೇ.75 ರಿಂದ 80 ರಷ್ಟು ಬಿಪಿಎಲ್ ಕಾರ್ಡ್ ಇರೋದಕ್ಕೆ ಸಾಧ್ಯನಾ? 10 ವರ್ಷಗಳಿಂದ ಎಲ್ಲಾ ಸರ್ಕಾರಗಳಲ್ಲಿ ಕಾರ್ಡ್ ನೀಡಲಾಗಿದೆ. ಅಲ್ಲದೆ ಕರ್ನಾಟಕ ಆರ್ಥಿಕವಾಗಿ ಸುಭದ್ರವಿರುವ ರಾಜ್ಯ, ತೆರಿಗೆ ಪಾವತಿಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಎಂದರು.
ಐಟಿ ಪಾವತಿದಾರರು, ಸರ್ಕಾರಿ ಕೆಲಸದವರು, 1 ಲಕ್ಷ 20 ಸಾವಿರ ಆದಾಯ ಮೀರಿದವರನ್ನು ಎಪಿಎಲ್ ಕಾರ್ಡ್ಗೆ ಬದಲಾವಣೆ ಮಾಡಲಾಗುತ್ತದೆ. ನಾಳೆ ಅಂಕಿ ಅಂಶಗಳ ಜೊತೆ ಪತ್ರಿಕಾಘೋಷ್ಟಿ ಮಾಡುತ್ತೇವೆ. ಒಂದು ವೇಳೆ ಅಕಸ್ಮಾತ್ ಬಡವರ ಕಾರ್ಡ್ ರದ್ದಾಗಿದ್ದರೆ ತಹಸೀಲ್ದಾರ್ಗೆ ಅರ್ಜಿ ಹಾಕಲಿ, ಕಾರ್ಡ್ ಸಿಗುತ್ತೆ, ಅರ್ಹರಿಗೆ ಬಿಪಿಎಲ್ ಕಾರ್ಡ್ಗಳು ತಪ್ಪೋದಿಲ್ಲ ಎಂದು ಭರವಸೆ ನೀಡಿದರು.
ಸಿಎಂ ಹಾಗೂ ಅಧ್ಯಕ್ಷರ ಜೊತೆ ಸಭೆ ಮಾಡಿದ್ದೇವೆ, ಅವರು ಸಹ ಹೀಗೆ ಸೂಚನೆ ನೀಡಿದ್ದಾರೆ. ಅಪ್ಪಿತಪ್ಪಿ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ವಾಪಸ್ಸು ಕೊಡಲು ಸೂಚಿಸಿದ್ದಾರೆ. ಅರೋಗ್ಯಕ್ಕಾಗಿ ಕಾರ್ಡ್ ಬೇಕು ಅಂದ್ರೆ ಒಂದೇ ವಾರದಲ್ಲಿ ನೀಡುತ್ತೇವೆ, ಬಿಜೆಪಿ ಮಾಡ್ತಿರುವ ಆರೋಪದಲ್ಲಿ ವಾಸ್ತವಾಂಶ ಇಲ್ಲ. ಬಿಪಿಎಲ್ ಕಾರ್ಡ್ನವರಿಗೆ ಕೊಡಲು 2 ಸಾವಿರ ಕೋಟಿ ಸರ್ಕಾರ ಖರ್ಚು ಮಾಡುತ್ತಿದ್ದೇವೆ, ಆದ್ರೂ 700 ಕೋಟಿ ಮೇಲೆ ಖರ್ಚು ಆಗ್ತಿಲ್ಲ, ಸಕಾಲಕ್ಕೆ ಹಣ ಹೋಗ್ತಿದೆ. ಸಿಎಂ ಸಿದ್ದರಾಮಯ್ಯ 14 ಬಜೆಟ್ ಮಂಡಿಸಿದ್ದಾರೆ, ಆರ್ಥಿಕ ಪರಿಸ್ಥಿತಿ ಸಮತೋಲನ ಮಾಡೋದು ಗೊತ್ತಿದೆ ಹಿಂದಿನ ಸರ್ಕಾರ ಮಾಡಿರುವ ಸಾಲ ತೀರಿಸುತ್ತಿದ್ದೇವೆ ಅಷ್ಟೆ ಎಂದರು.
ನಬಾರ್ಡ್ನಿಂದ ಸಾಲ ಕೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರೈತರಿಗೆ, ಸ್ವಸಹಾಯ ಸಂಘಗಳಿಗೆ ಹಣ ನೀಡಬೇಕಾಗಿದೆ ಕಾನೂನು ಬದ್ದವಾಗಿ ನಬಾರ್ಡ್ ನವರು ಕರ್ನಾಟಕಕ್ಕೆ ಹಣ ನೀಡಬೇಕು ರಾಜ್ಯ ಬೇರ್ಪಡಿಸಿ ತೀರ್ಮಾನ ಆಗಲ್ಲ. ಅಲ್ಲದೆ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆಯುತ್ತಾರೆ ಎಂದರು.
ಮುಡಾ ವಿಚಾರದಲ್ಲಿ ಲೋಕಾಯುಕ್ತ ತನಿಖೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ತನಿಖೆ ನಡೆಯುವ ವೇಳೆ ಉತ್ತರ ನೀಡಲ್ಲ ಸಿಎಂ ಸಿದ್ದರಾಮಯ್ಯ ನವರ ಪಾತ್ರ ಇಲ್ಲ ಪತ್ರ ಬರೆದಿಲ್ಲ, ಫೋನ್ ಮಾಡಿಲ್ಲ ಬಿಜೆಪಿ ರಾಜಕೀಯವಾಗಿ ತೇಜೋವಧೆ ಮಾಡ್ತಿದೆ, ಲೋಕಾಯುಕ್ತ ಎಸ್ಪಿ ಯನ್ನ ಯಾರೇ ಭೇಟಿ ಮಾಡಲಿ, ತನಿಖೆ ಬಳಿಕ ಸತ್ಯ ಹೊರ ಬರಲಿದೆ ಎಂದರು.ಕಾರ್ಮಿಕರ ಕಾರ್ಡ್ಗಳು ರದ್ದಾಗಿರುವ ಕುರಿತು ಮಾತನಾಡಿದ ಅವರು ಯಾವ ಕಾರ್ಡ್ಗಳು ರದ್ದಾಗಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.