ಸಾರಾಂಶ
ಶ್ರೀರಂಗಪಟ್ಟಣ: ಪಟ್ಟಣದ ಪುರಾತನ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ದೇವಾಲಯದ ಮುಖ್ಯ ಅರ್ಚಕ ವಿಜಯ ಸಾರಥಿ ನೇತೃತ್ವದಲ್ಲಿ ಮುಂಜಾನೆಯಿಂದಲೇ ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಸ್ತ್ರ ಮತ್ತು ಹೂವುಗಳಿಂದ ರಥವನ್ನು ಅಲಂಕರಿಸಿ, ಅರ್ಚಕ ವೃಂದದವರಿಂದ ಮಹಾ ಮಂಗಳಾರತಿ ಪೂಜೆಯೊಂದಿಗೆ ಚಾಲನೆ ದೊರೆಯಿತು. ಮಂಗಳ ವಾದ್ಯದೊಂದಿಗೆ ದೇವಾಲಯದ ಹೊರಾಂಗಣದ ಮುಖ್ಯ ರಸ್ತೆ ಮೂಲಕ ರಾಜ ಬೀದಿಗಳಲ್ಲಿ ರಥದ ಮೆರವಣಿಗೆ ನಡೆಯಿತು. ರಸ್ತೆ ಉದ್ದಕ್ಕೂ ಮನೆ ಅಂಗಳದಲ್ಲಿ ಭಕ್ತರು ರಂಗೋಲಿ ಬಿಟ್ಟು ದೇವರ ರಥ ಬರುವುದನ್ನೇ ಕಾಯುತ್ತಿದ್ದರು. ಮನೆ ಬಾಗಿಲಿಗೆ ಬಂದ ಸ್ವಾಮಿ ರಥಕ್ಕೆ ಹಣ್ಣು ಕಾಯಿ ಆರತಿ ಮಾಡಿ ದೇವರನ್ನು ಪ್ರಾರ್ಥಿಸಿದರು. ಬಳಿಕ ದೇವಾಲಯದ ಸುತ್ತಲೂ ಒಂದು ಪ್ರದಕ್ಷಣೆ ನಡೆಸಿ, ಅದೇ ಸ್ಥಳಕ್ಕೆ ರಥವನ್ನು ತಂದು ನಿಲ್ಲಿಸಲಾಯಿತು. ಮೆರವಣಿಗೆಯಲ್ಲಿ ವೆಂಕಟೇಶ್ ಸೇರಿ ಇತರ ಅರ್ಚಕರು ಹಾಗೂ ಭಕ್ತರು ಉಪಸ್ಥಿತರಿದ್ದರು.