ಜಾನಪದ ಕಲೆ, ಕಲಾವಿದರ ಸ್ಥಿತಿ ಸುಧಾರಣೆ ಅಗತ್ಯ

| Published : Aug 23 2025, 02:00 AM IST

ಸಾರಾಂಶ

ರಾಮನಗರ: ನಾಡಿನಲ್ಲಿ 160ಕ್ಕೂ ಹೆಚ್ಚು ಜಾನಪದ ಕಲೆಗಳು ಇವೆ. ಜಾನಪದ ಕಲೆ ಮತ್ತು ಕಲಾವಿದರ ಸ್ಥಿತಿ ಸುಧಾರಣೆಗೆ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ರಾಮನಗರ: ನಾಡಿನಲ್ಲಿ 160ಕ್ಕೂ ಹೆಚ್ಚು ಜಾನಪದ ಕಲೆಗಳು ಇವೆ. ಜಾನಪದ ಕಲೆ ಮತ್ತು ಕಲಾವಿದರ ಸ್ಥಿತಿ ಸುಧಾರಣೆಗೆ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ನಗರದ ಜಾನಪದ ಲೋಕದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ - ಜನಪದ ಕಲಾವಿದರೊಡನೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಜಾನಪದ ಪರಿಷತ್ತು ಮಾಡುವ ಕೆಲಸಕ್ಕೆ ಸರ್ಕಾರ ವರ್ಷಕ್ಕೆ ಕೇವಲ 1 ಕೋಟಿ ಮಾತ್ರ ನೀಡುತ್ತಿದೆ. ಅದೂ ಪ್ರಯಾಸದಿಂದ. ಕನಿಷ್ಠ 5 ಕೋಟಿ ಅನುದಾನವಾದರೂ ಬೇಕು. ಈ ಕುರಿತು ಸರ್ಕಾರಕ್ಕೆ ಕಲಾವಿದರ ನಿಯೋಗದೊಂದಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ನಮ್ಮ ಜಾನಪದರಿಗೆ ಅಕ್ಷರ ಜ್ಞಾನ ಇರಲಿಲ್ಲ. ಆದರೂ ನಾಡಿನಲ್ಲಿ 21 ಜಾನಪದ ಮಹಾಕಾವ್ಯಗಳು ಪ್ರಕಟಗೊಂಡಿವೆ. ದೇಶದ ಯಾವ ಭಾಷೆಯಲ್ಲೂ ಇಷ್ಟೊಂದು ಮಹಾಕಾವ್ಯಗಳಿಲ್ಲ. ಅತಿ ಹೆಚ್ಚು ಮಂದಿ ಮಾತನಾಡುವ ಹಿಂದಿ ಭಾಷೆಯಲ್ಲಿಯೂ ಸಹ ಪ್ರಕಟಗೊಂಡಿಲ್ಲ. ಜಾನಪದವನ್ನು ಯುವ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಜಾನಪದ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದು ಪ್ರೊ.ಹಿ.ಚಿ.ಬೋರಲಿಂಗಯ್ಯ ಹೇಳಿದರು.

ಹಿರಿಯ ಜಾನಪದ ವಿದ್ವಾಂಸರು ಡಾ.ಚಕ್ಕೆರೆ ಶಿವಶಂಕರ್ ಮಾತನಾಡಿ, ನಾಡಿಗೆ ಭೇಟಿ ನೀಡಿದ್ದ ಪಾಶ್ಚಾತ್ಯ ವಿದ್ವಾಂಸರು ಇಲ್ಲಿನ ಪರಂಪರೆ ರಕ್ಷಣೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಕ್ರೈಸ್ತ ಧರ್ಮದ ಪ್ರಚಾರಕ ಕಿಟೇಲ್ ಬರೆದ ಕನ್ನಡ ನಿಘಂಟು ನಂತರದ ಎಲ್ಲಾ ನಿಘಂಟುಗಳಿಗೆ ಬುನಾದಿಯಾಗಿದೆ. ಹೀಗೆ ನೂರಾರು ವಿದ್ವಾಂಸರು ಜಾನಪದ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು.

ಯುನೆಸ್ಕೊ ಅಂತಾರಾಷ್ಟ್ರೀಯ ಮಾನ್ಯತೆ ಕರ್ನಾಟಕ ಜಾನಪದ ಪರಿಷತ್ತಿಗೆ ಸಿಕ್ಕಿದೆ. ಆದರೆ ಪೂರ್ವದಲ್ಲೇ ಅಮೆರಿಕ ಕಾಂಗ್ರೆಸ್ ಫೋಕ್ಲೋರ್ ಕೆಲಸಕ್ಕಿಂತ ಹೆಚ್ಚಿನ ಕೆಲಸವನ್ನು ನಾಗೇಗೌಡರು ಮಾಡಿದ್ದಾರೆ. ಅವರ ನೇತೃತ್ವದಲ್ಲಿ, ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇವೆ. ಅಧ್ಯಯನ, ಸಂಶೋಧನೆ, ಸಂರಕ್ಷಣೆ, ಸಂವರ್ಧನೆ, ಜನಪದದ ಬಹು ಆಯಾಮಗಳಲ್ಲಿ ಕರ್ನಾಟಕ ಜಾನಪದ ಪರಿಷತ್ತು ಪರಿಣಾಮಕಾರಿಯಾದ ಮತ್ತು ರಚನಾತ್ಮಕವಾದ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಹಿಂದೆಯೂ ಮಾಡಿದೆ. ಮುಂದೆಯೂ ಮಾಡಲಿದೆ ಎಂದು ತಿಳಿಸಿದರು.

ಸಂವಾದದಲ್ಲಿ ತಮಟೆ ಕಲಾವಿದ ಗೋವಿಂದಯ್ಯ, ತಮಟೆ ಕುಳ್ಳಪ್ಪ, ಏಕತಾರಿ ರಾಮಯ್ಯ, ಗೊರವ ಮಲ್ಲಯ್ಯ, ಸೋಬಾನೆ ಕೆಂಪಮ್ಮ, ಜಯಣ್ಣ, ಸೋಬಾನೆ ಬೋರಮ್ಮ, ಸೋಬಾನೆ ಲಕ್ಷಮ್ಮ, ಸಿದ್ಧರಾಜು ರಾಮಪುರ, ಪುಟ್ಟಣ್ಣ, ಮಧು ಕೂಡ್ಲೂರು. ಹನುಮಂತನಾಯ್ಕ, ಹಿರಿಯ ಕಲಾವಿದರು ಭಾಗಿಯಾಗಿದರು. ಅಂಕನಹಳ್ಳಿ ಪೂಜಾ ಕುಣಿತ ಕಲಾವಿದ ಶಿವಣ್ಣ ಕಲಾವಿದರಿಗೆ ಬಸ್‌ಪಾಸ್ ಮತ್ತು ಆರೋಗ್ಯ ಚಿಕಿತ್ಸೆಗೆ ವಿಮೆ ಬೇಕು ಎಂದರು.

ಡೊಳ್ಳು ಕುಣಿತ ಕಲಾವಿದ ಮಹೇಶ್ ಮಾತನಾಡಿ, ಜಾನಪದವು ಅನ್ನ ನೀಡುವ ಕಲೆಯಾಗಿಲ್ಲ. ಅದಕ್ಕೆ ನಾವು ನಮ್ಮ ಮಕ್ಕಳನ್ನು ಈ ಕಲೆಗೆ ತರುವುದಿಲ್ಲ. ನಮ್ಮೊಂದಿಗೆ ಈ ಕಲೆ ಮುಗಿಯಲಿ. ಆಯಾ ಕಲೆಗೆ ಅದೇ ಚರ್ಮವಾದ್ಯ ಬೇಕು. ಮೂಲ ಕಲಾವಿದರನ್ನು ಮಾತ್ರ ಕಲಿಸಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ನೆಪಕ್ಕೆ ಮಾತ್ರ ಇದೆ. ಪ್ರಶ್ನೆ ಮಾಡುವ ಕಲಾವಿದರಿಗೆ ಅವಕಾಶ ಕೊಡಲ್ಲ ಎಂದು ತಮ್ಮ ಅನಿಸಿಕೆಗಳನ್ನು ಸಂವಾದ ಕಾರ್ಯಕ್ರಮದಲ್ಲಿ ಹಂಚಿಕೊಂಡರು.

ಕಲಾವಿದ ತೇಜಸ್ ಗೌಡ ಯಕ್ಷಗಾನ ಪ್ರದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಪರಿಷತ್ತಿನ ಜಿಲ್ಲಾಧ್ಯಕ್ಷ ಸು.ತ. ರಾಮೇಗೌಡ, ಡಾ.ವಿಜಯರಾಂಪುರ, ಜಾನಪದ ಲೋಕದ ಕಾರ್ಯನಿರ್ವಹಣಾಧಿಕಾರಿ ಕೆ.ಸರಸವಾಣಿ ,ಕ್ಯೂರೇಟರ್ ಡಾ.ಯು.ಎಂ.ರವಿ, ಎಸ್. ಪ್ರದೀಪ್, ಡಾ. ಸಂದೀಪ್ , ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಜಾನಪದ ಡಿಪ್ಲೂಮಾ ವಿದ್ಯಾರ್ಥಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

ಕೋಟ್‌........

ಶಿಕ್ಷಣ ಮತ್ತು ಸಂಶೋಧನೆ ಬಗ್ಗೆ ಪಾಶ್ಚಾತ್ಯರಿಗೆ ಆದ್ಯತೆಯಾಗಿತ್ತು. ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ಜಾನಪದ ಸಂಶೋಧನೆ ಮತ್ತು ಸಂಗ್ರಹಣೆ ಮುಂದುವರಿದ ದೇಶಗಳಲ್ಲಿ ನಡೆಯುತ್ತಿರಲಿಲ್ಲ. ಕಡೆಗೆ ಈ ತೃತೀಯ ದೇಶಗಳ ನಿಯೋಗ ವಿಶ್ವಸಂಸ್ಥೆ ಮೇಲೆ ಹೇರಿದ ಒತ್ತಡದಿಂದಾಗಿ, 1890 ಜಾನಪದ ಸಂಶೋಧನೆ ಮತ್ತು ಪರಂಪರೆ ರಕ್ಷಣೆಯನ್ನು ಪ್ರತಿಪಾದಿಸಿತು. ಆದರೆ, ಜಗತ್ತಿನ ಯಾವ ದೇಶದಲ್ಲೂ ವಿಶ್ವ ಜಾನಪದ ಎಂಬ ಪರಿಕಲ್ಪನೆಯೇ ಇಲ್ಲ. ಭಾರತದಲ್ಲಿ ದಕ್ಷಿಣ ರಾಜ್ಯಗಳನ್ನು ಬಿಟ್ಟರೆ ಉತ್ತರದ ರಾಜ್ಯಗಳಲ್ಲಿ ಸಹ ಇಲ್ಲ.

-ಡಾ.ಚಕ್ಕೆರೆ ಶಿವಶಂಕರ್, ಜಾನಪದ ವಿದ್ವಾಂಸರು

22ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಾನಪದ ಲೋಕದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ - ಜನಪದ ಕಲಾವಿದರೊಡನೆ ಸಂವಾದ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಉದ್ಘಾಟಿಸಿದರು. ಪರಿಷತ್ತಿನ ಜಿಲ್ಲಾಧ್ಯಕ್ಷ ಸು.ತ. ರಾಮೇಗೌಡ, ಡಾ.ಚಕ್ಕೆರೆ ಶಿವಶಂಕರ್ ಇತರರು ಉಪಸ್ಥಿತರಿದ್ದದರು.