ಈ ಶಾಲೆಯಲ್ಲಿ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದ್ದು, ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆಂದು ಪ್ರತ್ಯೇಕವಾಗಿ ನಿರ್ಮಿಸಿಕೊಟ್ಟಿರುವ ಶೌಚಾಲಯಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಶೌಚಾಲಯದ ಬಾಗಿಲುಗಳು ಮುರಿದಿವೆ, ಸ್ವಚ್ಛ ಮಾಡುವವರಿಲ್ಲದೆ ಗಬ್ಬುನಾರುತ್ತಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನ ನಗರಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ನಗರಗೆರೆ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರ ಕೈಯಲ್ಲಿ ಶಾಲಾ ಕೊಠಡಿ ಮತ್ತು ಕೊಠಡಿಗಳ ಮುಂಭಾಗದಲ್ಲಿ ಪೊರಕೆ ಹಿಡಿದು ಕಸ ಗುಡಿಸುತ್ತಾರೆ. ಶಾಲೆಗೆ ಮಕ್ಕಳನ್ನು ಕಳುಹಿಸುವುದು ವಿದ್ಯಾಭ್ಯಾಸಕ್ಕೋ ಅಥವಾ ಸಫಾಯಿ ಕರ್ಮಚಾರಿ ಕೆಲಸ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಶಾಲೆಗಳಲ್ಲಿ ಸ್ವಚ್ಛತೆಗಾಗಿ ಪ್ರತ್ಯೇಕ ಸಿಬ್ಬಂದಿ ಇಲ್ಲ. ಸಾಮಾನ್ಯವಾಗಿ ವಿದ್ಯಾರ್ಥಿಗಳೇ ತಮ್ಮ ತಮ್ಮ ತರಗತಿಗಳನ್ನು ಗುಡಿಸಿ ಸ್ವಚ್ಛ ಮಾಡಿಕೊಳ್ಳುತ್ತಾರೆ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಗಬ್ಬುನಾರುತ್ತಿರುವ ಶೌಚಾಲಯ

ಈ ಶಾಲೆಯಲ್ಲಿ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದ್ದು, ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆಂದು ಪ್ರತ್ಯೇಕವಾಗಿ ನಿರ್ಮಿಸಿಕೊಟ್ಟಿರುವ ಶೌಚಾಲಯಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಶೌಚಾಲಯದ ಬಾಗಿಲುಗಳು ಮುರಿದಿವೆ, ಸ್ವಚ್ಛ ಮಾಡುವವರಿಲ್ಲದೆ ಗಬ್ಬುನಾರುತ್ತಿದೆ.

ಅಶುದ್ಧ ನೀರಿನಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವುದು. ತಿನ್ನಲು ಯೋಗ್ಯವಲ್ಲದ ಗುಣಮಟ್ಟ ಇಲ್ಲದ ಬಾಳೆಹಣ್ಣುಗಳು ಮತ್ತು ತರಕಾರಿ ಬಳಸಲಾಗುತ್ತಿದೆ. ಈ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಶಾಲೆ ಆವರಣದ ಒಳಗೆ ಬಿದ್ದಿರುವ ಕಸದ ರಾಶಿ. ಶಾಲೆಯ ಮುಂಭಾಗ ಪ್ರವೇಶ ದ್ವಾರದಲ್ಲಿ ದೊಡ್ಡಗಾತ್ರದ ಕಸದ ರಾಶಿ. ಉಪಯೋಗಿಸಲು ಯೋಗ್ಯವಲ್ಲದ ನೀರು ಸೋರಿಕೆಯಾಗಿ ಆವರಣದಲ್ಲಿ ನೀರು ನಿಂತಿದ್ದು, ಮಕ್ಕಳು ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕೆಟ್ಟುನಿಂತ ನೀರಿನ ಘಟಕ:

ಶಾಲೆಯಲ್ಲಿರುವ ನೀರಿನ ಘಟಕದ್ದು ದೊಡ್ಡ ಸಮಸ್ಯೆಯಾಗಿದೆ, ಕೆಟ್ಟುನಿಂತು ತಿಂಗಳುಗಳೇ ಕಳೆದರೂ ಇಲ್ಲಿಯವರೆಗೂ ಸರಿಪಡಿಸಿಲ್ಲ, ಶುದ್ಧ ಕುಡಿಯುವ ನೀರು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಾಲೆಗೆ ಸೌಲಭ್ಯ ಒದಗಿಸದೇ ನಿರ್ಲಕ್ಷಿಸುತ್ತಿರುವುದರಿಂದ ಸ್ಥಳೀಯ ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿ ಮೇಲೆ ಮಕ್ಕಳ ಪೋಷಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.