ರೈತರನ್ನು ನಡು ನೀರಲ್ಲಿ ಕೈಬಿಟ್ಟ ಕಾಂಗ್ರೆಸ್‌ ಸರ್ಕಾರ

| Published : Dec 02 2023, 12:45 AM IST

ರೈತರನ್ನು ನಡು ನೀರಲ್ಲಿ ಕೈಬಿಟ್ಟ ಕಾಂಗ್ರೆಸ್‌ ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಅವರು ತಾಲೂಕಿನ ಸೊಣ್ಣಪ್ಪನಹಳ್ಳಿ, ಕೋಡಿಹಳ್ಳಿ ಗ್ರಾಮಗಳಿಗೆ ಮಾಜಿ ಸಚಿವ ಡಾ.ಕೆ ಸುಧಾಕರ್, ಸ್ಥಳೀಯ ಶಾಸಕ ಧೀರಜ್ ಮುನಿರಾಜ್ ಅವರೊಂದಿಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿದರು.

ದೊಡ್ಡಬಳ್ಳಾಪುರ: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಅವರು ತಾಲೂಕಿನ ಸೊಣ್ಣಪ್ಪನಹಳ್ಳಿ, ಕೋಡಿಹಳ್ಳಿ ಗ್ರಾಮಗಳಿಗೆ ಮಾಜಿ ಸಚಿವ ಡಾ.ಕೆ ಸುಧಾಕರ್, ಸ್ಥಳೀಯ ಶಾಸಕ ಧೀರಜ್ ಮುನಿರಾಜ್ ಅವರೊಂದಿಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಹಲವು ಜಿಲ್ಲೆಗಳಲ್ಲಿ ಬರಗಾಲದ ವಸ್ತುಸ್ಥಿತಿ ಅಧ್ಯಯನ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಳೆಯೂ ಬಂದಿಲ್ಲ. ರೈತರಿಗೆ ಭರಪೂರ ಆಶ್ವಾಸನೆ ನೀಡಿ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ ಎಂದು ಟೀಕಿಸಿದರು.

ಅಧಿವೇಶನ ಹಿನ್ನಲೆ 2 ಸಾವಿರ ರು. ಬೆಳೆ ಪರಿಹಾರ:

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2 ಸಾವಿರ ರುಪಾಯಿಗಳವರೆಗೆ ಬೆಳೆ ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಇದು ರಾಜಕೀಯ ಹಿತಾಸಕ್ತಿಯೇ ಹೊರತು ಜನಪರ ಕಾಳಜಿಯಲ್ಲ. ಈ ಸರ್ಕಾರ ರೈತರಿಗೆ ಕನಿಷ್ಟ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದರು.

ರೈತರ ಸಾಲ ಮನ್ನಾ ಮಾಡಿ:

ರೈತರು ಬರಗಾಲದಿಂದ ಕಂಗಾಲಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಹೀಗಾಗಿ ರೈತರ ಸಾಲವನ್ನು 2 ಲಕ್ಷ ರುಪಾಯಿಯವರೆಗೂ ಮನ್ನಾ ಮಾಡಬೇಕು. ಹಗಲಿನ ವೇಳೆ ವಿದ್ಯುತ್ ನೀಡಬೇಕು, ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ಸಂಪೂರ್ಣವಾಗಿ ನೀಡಬೇಕು ಎಂದು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಅಧಿಕಾರಕ್ಕಾಗಿ ಕಿತ್ತಾಟ:

ಸಿಎಂ ಸಿದ್ದರಾಮಯ್ಯ ಮೊದಲಿನ ಸಿದ್ದರಾಮಯ್ಯ ಆಗಿಲ್ಲ. ನಾವು ಅಧಿಕಾರದಲ್ಲಿದ್ದಾಗ ಬರ ಇದ್ದಾಗ ಒಂದೇ ತಿಂಗಳಲ್ಲಿ ಬರದ ಹಣವನ್ನು ನೀಡಿದ್ದೇವು, ಮಳೆ ಆಧಾರಿತ ಬೆಳೆಗೆ ಎಕರೆಗೆ 13,600 ರುಪಾಯಿ, ತೋಟಗಾರಿಕೆ ಬೆಳೆಗೆ 25 ಸಾವಿರ ರುಪಾಯಿ ಕೊಟ್ಟಿದ್ದೆವು. ಇವರ ಬಳಿ ಹಣ ಇಲ್ಲ ಹೀಗಾಗಿ ಕೊಡುತ್ತಿಲ್ಲ. ಮಂತ್ರಿಗಳು ಅಧಿಕಾರದ ಆಸೆಗಾಗಿ ಕಿತ್ತಾಡುತ್ತಿದ್ದಾರೆ ಎಂದರು.

ಸರ್ಕಾರದ ಕಿವಿ ಹಿಂಡುತ್ತೇವೆ:

ವಿರೋಧ ಪಕ್ಷದ ನಾಯಕನಾದ ಬಳಿಕ ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಬೆಂ ಗ್ರಾ, ಜಿಲ್ಲೆ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಬರ ಅಧ್ಯಯನ ಮಾಡಿದ್ದೇನೆ. ಸರ್ಕಾರದ ಎಲ್ಲಾ ವೈಫಲ್ಯಗಳನ್ನು ಎತ್ತಿ ಹಿಡಿದು, ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಈ ವೇಳೆ ಮಾಜಿ ಸಚಿವ ಡಾ.ಕೆ ಸುಧಾಕರ್, ಶಾಸಕ ಧೀರಜ್ ಮುನಿರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ ಲಕ್ಷ್ಮೀನಾರಾಯಣ, ಬಮೂಲ್ ನಿರ್ದೇಶಕ ಬಿ.ಸಿ ಆನಂದ್ ಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್, ಬಂತಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.1ಕೆಡಿಬಿಪಿ7-ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣಪ್ಪನಹಳ್ಳಿಯಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್‌ ಶುಕ್ರವಾರ ರಾತ್ರಿ ಬರ ಅಧ್ಯಯನ ಸಮಾಲೋಚನೆ ನಡೆಸಿದರು.