ಚೊಂಬು ನೀಡಿದ್ದೇ ಕಾಂಗ್ರೆಸ್‌ ಸರ್ಕಾರದ ಸಾಧನೆ

| Published : Apr 13 2025, 02:03 AM IST

ಸಾರಾಂಶ

ಕೇಂದ್ರ ಸರ್ಕಾರ ಕಳೆದ ವರ್ಷವೇ ತೈಲದ ಮೇಲಿನ ಸೆಸ್‌ ಕಡಿಮೆ ಮಾಡಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಸೆಸ್‌ನಲ್ಲಿ ಏರಿಕೆ ಮಾಡಿದೆ. ಜೊತೆಗೆ ಎರಡೇ ವರ್ಷದಲ್ಲಿ ಹಾಲಿನ ದರವನ್ನು ಮೂರು ಬಾರಿ ಏರಿಸಲಾಗಿದೆ. ಆ ಹಣವನ್ನು ರೈತರಿಗೂ ನೀಡಲಿಲ್ಲ. ಒಂದು ಟ್ರಾನ್ಸ್‌ಫಾರ್ಮರ್‌ ಹಾಕಲು ರೈತರು ಮೂರು ಲಕ್ಷ ರು. ಖರ್ಚು ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕರ್ನಾಟಕದ ಆರೂವರೆ ಕೋಟಿ ಜನರ ಕೈಗೆ ಚೊಂಬು ನೀಡಿರುವುದೇ ಕಾಂಗ್ರೆಸ್‌ ಸರ್ಕಾರದ ಎರಡು ವರ್ಷಗಳ ಸಾಧನೆ ಎಂದು ಸಂಸದ ಡಾ.ಕೆ.ಸುಧಾಕರ್‌ ಟೀಕಿಸಿದರು. ದೇವನಹಳ್ಳಿ ಟೌನ್‌ನ ಕೊರಚರಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಸಾಲು ಸಾಲು ತೆರಿಗೆ

ಕೇಂದ್ರ ಸರ್ಕಾರ ಕಳೆದ ವರ್ಷವೇ ತೈಲದ ಮೇಲಿನ ಸೆಸ್‌ ಕಡಿಮೆ ಮಾಡಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಸೆಸ್‌ನಲ್ಲಿ ಏರಿಕೆ ಮಾಡಿದೆ. ಜೊತೆಗೆ ಎರಡೇ ವರ್ಷದಲ್ಲಿ ಹಾಲಿನ ದರವನ್ನು ಮೂರು ಬಾರಿ ಏರಿಸಲಾಗಿದೆ. ಆ ಹಣವನ್ನು ರೈತರಿಗೂ ನೀಡಲಿಲ್ಲ. ಒಂದು ಟ್ರಾನ್ಸ್‌ಫಾರ್ಮರ್‌ ಹಾಕಲು ರೈತರು ಮೂರು ಲಕ್ಷ ರು. ಖರ್ಚು ಮಾಡಬೇಕು. ಇಂಧನ ಇಲಾಖೆಯಿಂದ ಸ್ಮಾರ್ಟ್‌ ಆಗಿ ದುಡ್ಡು ಹೊಡೆಯಲು ಸ್ಮಾರ್ಟ್‌ ಮೀಟರ್‌ ಯೋಜನೆ ತರಲಾಗಿದೆ. ಮೆಟ್ರೊ, ಬಸ್‌ ಟಿಕೆಟ್‌ ದರ ಏರಿಕೆ ಮಾಡಲಾಗಿದೆ. ರಾಜ್ಯದ ಆರೂವರೆ ಕೋಟಿ ಜನರ ಕೈಗೆ ಚೊಂಬು ನೀಡಿರುವುದೇ ಕಾಂಗ್ರೆಸ್‌ ಸರ್ಕಾರದ ಸಾಧನೆ ಎಂದು ಟೀಕಿಸಿದರು.ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಇಡೀ ದೇಶದಲ್ಲಿ ಕರ್ನಾಟಕವೇ ಮೊದಲಿಗೆ ಈ ನೀತಿಯನ್ನು ಜಾರಿ ಮಾಡಿತ್ತು. ಕಾಂಗ್ರೆಸ್‌ ದ್ವೇಷ ರಾಜಕಾರಣ ಮಾಡಿ ಅದನ್ನು ರದ್ದು ಮಾಡಿದೆ. ರಾಜ್ಯ ಶಿಕ್ಷಣ ನೀತಿ ತರುತ್ತೇವೆಂದು ಹೇಳಿ ಅದನ್ನೂ ತರಲಿಲ್ಲ ಎಂದು ಸಂಸದರು ಟೀಕಿಸಿದರು.

ಮಕ್ಕಳಿಗೆ ಭವಿಷ್ಯವೇ ಇಲ್ಲ

ಹೊಸ ಶಿಕ್ಷಣ ನೀತಿ ಇಲ್ಲದೆ, ಮಕ್ಕಳಿಗೆ ಭವಿಷ್ಯವೇ ಇಲ್ಲವಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಯಾವುದೇ ಭಾಷೆಗೆ ಅನ್ಯಾಯ ಆಗಿಲ್ಲ. ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ದೇಶದ ಎಲ್ಲ ರಾಜ್ಯಗಳು ಈ ನೀತಿಯನ್ನು ಅನುಷ್ಠಾನಗೊಳಿಸಿವೆ. ಕರ್ನಾಟಕ ಸೇರಿದಂತೆ ಕೆಲವೇ ರಾಜ್ಯಗಳು ನೀತಿ ಜಾರಿ ಮಾಡಿಲ್ಲ ಎಂದು ದೂರಿದರು. ಇದೇ ವೇಳೆ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ದೇವನಹಳ್ಳಿ ಟೌನ್‌ನ ವಿಜಯಪುರ ಕ್ರಾಸ್‌ ಬಳಿ ಬಸ್‌ ತಂಗುದಾಣ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಸಂಸದ ಡಾ.ಕೆ.ಸುಧಾಕರ್‌ ನೆರವೇರಿಸಿದರು.

ಕೈಗಾರಿಕಾ ಕಾರಿಡಾರ್‌ ನಿರ್ಮಾಣನಂತರ ಮಾತನಾಡಿ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ವರ್ಷಕ್ಕೆ 5 ಕೋಟಿ ರೂ. ಅನುದಾನ ಬರುತ್ತದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಗತ್ಯ ಇರುವ ತಂಗುದಾಣ ಹಾಗೂ ಇತರೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಕ್ಷೇತ್ರದಲ್ಲಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಕೈಗಾರಿಕಾ ಕಾರಿಡಾರ್‌ ನಿರ್ಮಾಣವಾಗಲಿದ್ದು, ಇದು ಬಜೆಟ್‌ನಲ್ಲೂ ಘೋಷಣೆಯಾಗಿದೆ. ಇದರ ಡಿಪಿಆರ್‌ ತಯಾರಾಗುತ್ತಿದ್ದು, 2026 ರಿಂದ ಕಾಮಗಾರಿ ಆರಂಭವಾಗಲಿದೆ ಎಂದರು.