ದೇಗುಲಗಳ ನಿರ್ಮಾಣದಿಂದ ಜನರ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ

| Published : Apr 06 2025, 01:47 AM IST

ದೇಗುಲಗಳ ನಿರ್ಮಾಣದಿಂದ ಜನರ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ
Share this Article
  • FB
  • TW
  • Linkdin
  • Email

ಸಾರಾಂಶ

ಪೂರ್ವಿಕರು ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಧಾರ್ಮಿಕ ಪ್ರಜ್ಞೆ, ದೇವರು, ಗುರು- ಹಿರಿಯರಿಗೆ ಗೌರವ ಮೂಡುವಂತೆ ಮಾಡಬೇಕು. ಜನರು ಒಗ್ಗಟ್ಟಿನಿಂದ ಸಹನೆ, ಸಹಬಾಳ್ವೆಯಿಂದ ಬದುಕು ನಡೆಸುವಂತಾಗಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಗ್ರಾಮಗಳಲ್ಲಿ ದೇವಸ್ಥಾನಗಳು ನಿರ್ಮಾಣವಾಗುವುದರಿಂದ ಜನರ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ನೆಲೆಸುವ ಜತೆಗೆ ಧಾರ್ಮಿಕ ಪ್ರಜ್ಞೆ ಮೂಡುತ್ತದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ತಾಲೂಕಿನ ಕಟ್ಟೇರಿ ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಶ್ರೀರಾಮಮಂದಿರ ಚರ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿ ಮಾತನಾಡಿ, ದೇವಸ್ಥಾನಗಳನ್ನು ನಿರ್ಮಿಸುವುದರಿಂದ ಜನರಲ್ಲಿ ಪರಸ್ಪರ ಹೊಂದಾಣಿಕೆಯಾಗಿ ವೈಮನಸ್ಸುಗಳು ಕಡಿಮೆಯಾಗುತ್ತವೆ ಎಂದರು.

ಪೂರ್ವಿಕರು ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಧಾರ್ಮಿಕ ಪ್ರಜ್ಞೆ, ದೇವರು, ಗುರು- ಹಿರಿಯರಿಗೆ ಗೌರವ ಮೂಡುವಂತೆ ಮಾಡಬೇಕು. ಜನರು ಒಗ್ಗಟ್ಟಿನಿಂದ ಸಹನೆ, ಸಹಬಾಳ್ವೆಯಿಂದ ಬದುಕು ನಡೆಸುವಂತಾಗಬೇಕು ಎಂದು ತಿಳಿಸಿದರು.

ಕಟ್ಟೇರಿಯಲ್ಲಿದ್ದ ಹಳೇ ಶ್ರೀರಾಮಮಂದಿರ ದೇವಸ್ಥಾನವನ್ನು ಗ್ರಾಮಸ್ಥರೆಲ್ಲರೂ ಸೇರಿ ದಾನಿಗಳ ನೆರವಿನಿಂದ ನೂತನವಾಗಿ ಜೀರ್ಣೋದ್ಧಾರ ಮಾಡಿದ್ದಾರೆ. ದೇವಸ್ಥಾನದ ನಿರ್ಮಾಣಕ್ಕೆ ಏಟ್ರಿಯ ಬೃಂದಾವನ ಪವರ್ ಕಂಪನಿಯವರು 20 ಲಕ್ಷ ರು. ಹಣ ನೆರವು ನೀಡಿದ್ದಾರೆ ಎಂದರು.

ಇದೇ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಅಭಿನಂಧಿಸಲಾಯಿತು. ಕಾರ್‍ಯಕ್ರಮಕ್ಕೂ ಮುನ್ನ ಬೆಳಗ್ಗೆ 6 ಗಂಟೆಯಿಂದಲೇ ಮಹಾಗಣಪತಿ ಹೋಮ, ನವಗ್ರಹ ಹೋಮ, ಪೀಠ ಸ್ಥಾಪನೆ, ಶ್ರೀರಾಮದೇವರ ಚರ ಪ್ರತಿಷ್ಠಾಪನೆ ಮಹೋತ್ಸವ, ಪ್ರತಿಷ್ಠಂಗ ಹೋಮ, ಕಲಾವೃದ್ಧಿ ಹೋಮ, ರಾಮತಾರಕ ಹೋಮ, ಶ್ರೀಸೂಕ್ತಹೋಮ, ಪುರುಷ ಸೂಕ್ತ ಹೋಮ, ಪವಮಾನ ಹೋಮ, ಪಂಚಬ್ರಹ್ಮ ಮಂತ್ರದಿಂದ ಹೋಮ ಮಹಾಪೂರ್ಣಾಹುತಿ, ಮಹಾಮಂಗಳಾರತಿ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.

ಗ್ರಾಮದ ಮುಖಂಡರಾದ ಕೆ.ವೈ.ಇಂದ್ರಕುಮಾರ್, ರಾಜೇಂದ್ರಕುಮಾರ್, ಕೆ.ಆರ್.ಕಾಂತರಾಜು, ಕೆ.ವಿ.ರಘು, ವಿಟಿಎಲ್ ನಾಗೇಗೌಡ, ಕೃಷ್ಣೇಗೌಡ, ಸತೀಶ್, ಮಾರ್ಗದಟ್ಟಿ ನಾಗಣ್ಣ, ಕೆ.ಆರ್.ದೇವರಾಜು, ಚಂದ್ರಶೇಖರ್, ಕಾಳಪ್ಪ ಸೇರಿದಂತೆ ಹಲವರು ಹಾಜರಿದ್ದರು.