ಸಾರಾಂಶ
ಬೆಂಗಳೂರು : ಬಾಬುಸಾಪಾಳ್ಯದ ನಿರ್ಮಾಣ ಹಂತದ ಕಟ್ಟಡ ಕುಸಿತ ದುರಂತದಲ್ಲಿ ಅವಶೇಷಗಳಡಿ ಸಿಲುಕಿರುವ ಉಪ ಗುತ್ತಿಗೆದಾರ ಏಳುಮಲೈ ಎರಡು ದಿನಗಳಾದರೂ ಪತ್ತೆ ಆಗದಿರುವುದು ರಕ್ಷಣಾ ತಂಡಗಳಿಗೆ ಸವಾಲಾಗಿ ಪರಿಣಿಮಿಸಿದೆ.
ಇನ್ನೊಂದೆಡೆ ಸತತ 30 ಗಂಟೆಗಳ ಕಾರ್ಯಾಚರಣೆಯಿಂದ ಜೆಸಿಬಿ ಹಾಗೂ ಇಟಾಚಿ ಚಾಲಕರು ಹಾಗೂ ರಕ್ಷಣಾ ತಂಡಗಳ ಸಿಬ್ಬಂದಿ ದಣಿದಿದ್ದ ಕಾರಣಕ್ಕೆ ಗುರುವಾರ ಮಧ್ಯಾಹ್ನ ಬಳಿಕ ಕಾರ್ಯಾಚರಣೆಗೆ ತಾತ್ಕಾಲಿಕ ವಿರಾಮ ನೀಡಿದರು.
ಬಾಬುಸಾಪಾಳ್ಯದ ನಿರ್ಮಾಣ ಹಂತದ 7 ಅಂತಸ್ತಿನ ಕಟ್ಟಡದ ಕುಸಿದ ಅವಘಡದಲ್ಲಿ 8 ಮಂದಿ ಕಾರ್ಮಿಕರು ಮೃತಪಟ್ಟಿದ್ದು, 14 ಮಂದಿ ಪ್ರಾಣಪಾಯದಿಂದ ಪರಾಗಿದ್ದರು. ಈ ಕಟ್ಟಡದಲ್ಲಿ ಮತ್ತೆ ಕಾರ್ಮಿಕ ಗಜೇಂದ್ರ ಹಾಗೂ ಉಪ ಗುತ್ತಿಗೆದಾರ ಏಳುಮಲೈ ಸಿಲುಕಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಎಡಬಿಡದೆ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳಗಳು, ಅಗ್ನಿಶಾಮಕ ದಳ ಹಾಗೂ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದರು. ಆದರೆ ಎಡಬಿಡದೆ ಅವಶೇಷಗಳಡಿ ಹುಡುಕಾಟ ನಡೆಸಿದರೂ ಯಾರೊಬ್ಬರು ಪತ್ತೆಯಾಗಲಿಲ್ಲ. ಕೊನೆಗೆ ವಿಚಾರಣೆ ನಡೆಸಿದಾಗ ಗಜೇಂದ್ರ ಘಟನೆ ನಡೆದಾಗ ವೇಳೆ ಇರಲಿಲ್ಲ. ಹೀಗಾಗಿ ಏಳುಮಲೈ ಮಾತ್ರ ಅವಶೇಷಗಳಡಿ ಬಂಧಿಯಾಗಿದ್ದಾನೆ ಎನ್ನಲಾಗಿದೆ.
ರಕ್ಷಣಾ ತಂಡಗಳಿಗೆ ತಾತ್ಕಾಲಿಕ ವಿರಾಮ
ಧರಾಶಾಯಿ ಕಟ್ಟಡದಲ್ಲಿ ಸಿಲುಕಿದ್ದವರ ಪತ್ತೆ ಕಾರ್ಯಾಚರಣೆಯಲ್ಲಿ ಎರಡು ದಿನಗಳು ಸತತವಾಗಿ ದುಡಿದಿದ್ದರಿಂದ ಜೆಸಿಬಿ, ಇಟಾಚಿ ಚಾಲಕರು ಮಾತ್ರವಲ್ಲದೆ ರಕ್ಷಣಾ ತಂಡಗಳ ಸುಮಾರು 200ಕ್ಕೂ ಮಂದಿ ದಣಿದಿದ್ದರು. ಹೀಗಾಗಿ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ರಕ್ಷಣಾ ಕಾರ್ಯಾಚರಣೆಗೆ ಅಧಿಕಾರಿಗಳು ತಾತ್ಕಾಲಿಕ ವಿರಾಮ ನೀಡಿದರು. ಕಟ್ಟಡದಲ್ಲಿ ಸಿಲುಕಿದ್ದಾನೆ ಎನ್ನಲಾದ ತಮಿಳುನಾಡು ಮೂಲದ ಏಳುಮಲೈ ಪತ್ತೆಗೆ ಶುಕ್ರವಾರ ಮತ್ತೆ ಕಾರ್ಯಾಚರಣೆ ಪುನಾರಂಭಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.