ಸಾರಾಂಶ
ಮಾನ್ವಿ ಪಟ್ಟಣದ ಧ್ಯಾನಮಂದಿರದ ಆವರಣದಲ್ಲಿ ಶ್ರೀ ಮುಕ್ತಗುಚ್ಚ ಬೃಹನ್ಮಠ ಕಲ್ಮಠದ ವತಿಯಿಂದ ಮಹಾ ಶಿವರಾತ್ರಿಯ ಗಾರಿಗೆ ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮಾನ್ವಿ
ನಾಡಿನ ಮಠಗಳ ಗುರುಗಳು ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಅನ್ನದಾಸೋಹ,ಅಧ್ಯತ್ಮಿಕ ಚಿಂತನೆಗಳು, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಅನೇಕ ಸಾಮಾಜಿಕ ಸೇವ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಮಾಜವನ್ನು ಉದ್ಧಾರ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.ಪಟ್ಟಣದ ಧ್ಯಾನಮಂದಿರದ ಆವರಣದಲ್ಲಿ ಮುಕ್ತಗುಚ್ಚ ಬೃಹನ್ಮಠ ಕಲ್ಮಠದ ವತಿಯಿಂದ ಮಹಾ ಶಿವರಾತ್ರಿಯ ಗಾರಿಗೆ ಜಾತ್ರೆ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮೂಹಿಕ ವಿವಾಹಗಳನ್ನು ನಡೆಸುವ ಮೂಲಕ ಅರ್ಥಿಕವಾಗಿ ದುರ್ಬಲ ವರ್ಗದವರಿಗೆ ತಮ್ಮ ಮಕ್ಕಳ ಮದುವೆ ಮಾಡುವುದಕ್ಕೆ ನೇರವನ್ನು ನೀಡುತ್ತಿದ್ದಾರೆ. ಸಾಮೂಹಿಕ ಮದುವೆಗಳಿಂದ ದುಂದುವೆಚ್ಚವನ್ನು ತಡೆಯಲು ಸಾಧ್ಯವಾಗುತ್ತದೆ ಸರಕಾರ ಕೂಡ ಸಾಮೂಹಿಕ ವಿವಾಹಗಳಿಗೆ ಉತ್ತೇಜನವನ್ನು ನೀಡುವುದಕ್ಕೆ ಅನೇಕ ನೇರವುಗಳನ್ನು ನೀಡುತ್ತಿದೆ ಎಂದು ತಿಳಿಸಿದರು.
ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು.ಸಂಜೆ ಕಲ್ಮಠದಿಂದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಕೊಂಡು. ಭಕ್ತರು ನೀಡಿದ ಗಾರಿಗೆಗಳೊಂದಿಗೆ ವಿವಿಧ ಜನಪದ ವಾಧ್ಯಗಳೊಂದಿಗೆ ಮೆರವಣಿಗೆಯೊಂದಿಗೆ ಧ್ಯಾನ ಮಂದಿರಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಹಿಳೆಯರಿಂದ ಗಾರಿಗೆ ಜಾತ್ರ ಮಹೋತ್ಸವ ನಡೆಯಿತು. ವಿವಿಧ ಮಠಗಳ ಸ್ವಾಮೀಜಿಗಳು, ಮುಖಂಡರು,ಸಾರ್ವಜನಿಕರು ಇದ್ದರು.