ದಾರ್ಶನಿಕರ ಜಯಂತಿ ಸಂಕಲ್ಪ ಮಾಡುವ ದಿನ

| Published : Oct 06 2025, 01:00 AM IST

ಸಾರಾಂಶ

ರಾಮನಗರ: ದಾರ್ಶನಿಕರ ಜಯಂತಿ ಕೇವಲ ಒಂದು ಹಬ್ಬವಲ್ಲ, ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ಸಂಕಲ್ಪ ಮಾಡುವ ದಿನವಾಗಿದೆ ಎಂದು ರಾಮನಗರ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಅಭಿಪ್ರಾಯಪಟ್ಟರು.

ರಾಮನಗರ: ದಾರ್ಶನಿಕರ ಜಯಂತಿ ಕೇವಲ ಒಂದು ಹಬ್ಬವಲ್ಲ, ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ಸಂಕಲ್ಪ ಮಾಡುವ ದಿನವಾಗಿದೆ ಎಂದು ರಾಮನಗರ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಅಭಿಪ್ರಾಯಪಟ್ಟರು.

ನಗರದ ಬೆಂಗಳೂರು‌ ದಕ್ಷಿಣ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಷ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ‌ ಸಲ್ಲಿಸಿ ಮಾತನಾಡಿದ ಅವರು, ಭಾರತದ ಮೂರು ರಾಷ್ಟ್ರೀಯ ರಜಾ ದಿನಗಳಲ್ಲಿ ಗಾಂಧಿ ಜಯಂತಿ ಒಂದು. ವಿಶ್ವಸಂಸ್ಥೆಯು ಗಾಂಧೀಜಿಯವರ ತತ್ವಗಳಾದ ಅಹಿಂಸೆ ಮತ್ತು ಶಾಂತಿಯನ್ನು ಉತ್ತೇಜಿಸಲು ಈ ದಿನವನ್ನು "ಅಂತರರಾಷ್ಟ್ರೀಯ ಅಹಿಂಸಾ ದಿನ " ಎಂದು ಘೋಷಿಸಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರು ಕೊಟ್ಟ ಕೊಡುಗೆಯನ್ನು ಸ್ಮರಿಸುವುದಾಗಿದೆ ಎಂದು ಬಣ್ಣಿಸಿದರು.

ಗಾಂಧೀಜಿಯವರ ಸ್ವಚ್ಛತೆಯ ಆದರ್ಶಕ್ಕೆ ಅನುಗುಣವಾಗಿ ದೇಶಾದ್ಯಂತ ಸ್ವಚ್ಛತಾ ಅಭಿಯಾನ, ಭಾಷಣ, ಪ್ರಬಂಧ ಸ್ಪರ್ಧೆ, ಜೀವನ‌ಚರಿತ್ರೆ, ಭಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಗಾಂಧೀಜಿಯವರ ಸತ್ಯ, ಅಹಿಂಸೆ, ಅಸ್ಪೃಶ್ಯತೆ ನಿವಾರಣೆ, ಸ್ವಚ್ಛತೆ, ಮತ್ತು ಸರ್ವ-ಧರ್ಮ-ಸಮಾನತೆ ಮುಂತಾದ ತತ್ವಗಳನ್ನು ಈ ದಿನದಂದು ನೆನಪಿಸಿಕೊಂಡು ಅವರಿಗೆ ಎಲ್ಲೆಡೆ ಗೌರವ ಸಲ್ಲಿಸಲಾಗುತ್ತಿದೆ ಎಂದರು.

ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್ ಮಾತನಾಡಿ, ದೇಶಕ್ಕೆ ಸ್ವಾತಂತ್ಯ ತಂದು ಕೊಡಲು ಲಾಲ್ ಬಹದ್ದೂರ್ ಶಾಸ್ತ್ರಿಯವರು ಓದನ್ನು ನಿಲ್ಲಿಸಿ ಮಹಾತ್ಮ ಗಾಂಧಿಯವರ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಭಾರತದ ಸ್ವಾತಂತ್ರ್ಯಕ್ಕೆ ಅವಿರತ ಹೋರಾಡಿದ ದೇಶಪ್ರೇಮಿ. ಭಾರತದ ಎರಡನೇ ಪ್ರಧಾನಿಯಾಗಿ ಅತ್ಯಂತ ಪ್ರಾಮಾಣಿಕ, ದಕ್ಷ ಆಡಳಿತ ಕೊಟ್ಟವರು ಎಂದು ಗುಣಗಾನ ಮಾಡಿದರು.

ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷ ಚಂದ್ರಮೋಹನ್ ಮಾತನಾಡಿ, ಕಾಂಗ್ರೆಸ್ ಸೇವಾದಳವನ್ನು 1923 ರಲ್ಲಿ ಮಹಾತ್ಮಾಗಾಂಧಿಯವರು ಸ್ಥಾಪಿಸಿದರು, ಅವರು ಸಮಾಜ ಸೇವೆ, ರಾಷ್ಟ್ರೀಯ ಏಕೀಕರಣ ಮತ್ತು ಸಮುದಾಯದ ಕೆಲಸವನ್ನು ಉತ್ತೇಜಿಸಲು ಶಿಸ್ತು ಬದ್ಧ ಮತ್ತು ಅಹಿಂಸಾತ್ಮಕ ಸ್ವಯಂ ಸೇವಕ ಸಂಸ್ಥೆಯಾಗಿ ರೂಪಿಸಿದರು.ಆ ಮಹಾನ್ ಪುರುಷರನ್ನು ದೇಶದೆಲ್ಲೆಡೆ ಜಯಂತಿ ಆಚರಿಸಿ ಅವರ ಆಶಯಗಳನ್ನು ಪಾಲನೆ ಮಾಡುವ ಸಂಕಲ್ಪ ಮಾಡುತ್ತಿದ್ದೇವೆ ಎಂದರು.

ಈ ವೇಳೆ ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಆರ್.ಗುರುಪ್ರಸಾದ್, ಗ್ರಾಮಾಂತರ ಬ್ಲಾಕ್ ಮಾಜಿ ಅಧ್ಯಕ್ಷ ಜಯರಾಮಯ್ಯ, ನಗರಸಭಾ ಸದಸ್ಯೆ ನಾಗಮ್ಮ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪುಟ್ಟರಾಜು, ಕೆಡಿಪಿ ಸದಸ್ಯ ಪುಟ್ಟಣ್ಣ, ಪಕ್ಷದ ಮುಖಂಡರಾದ ಕುರುಬರಹಳ್ಳಿ ರಘು, ಜಗದೀಶ್, ಷಡಕ್ಷರಿದೇವ, ಕಚೇರಿ ಸಹಾಯಕ ತಿಮ್ಮಯ್ಯ,ಬೆಂಗಳೂರು ದಕ್ಷಿಣ ಜಿಲ್ಲೆ ಕಾಂಗ್ರೆಸ್ ಸೇವಾದಳ ಉಪಾಧ್ಯಕ್ಷ ಆಲ್ಬರ್ಟ್, ಪ್ರಧಾನ ಕಾರ್ಯದರ್ಶಿ ಎನ್.ಯಶಸ್, ಕನಕಪುರ ತಾಲೂಕು ಕಸಬಾ ಅಧ್ಯಕ್ಷ ರವಿನಾಯಕ್ ಉಪಸ್ಥಿತರಿದ್ದರು.

2ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ರಾಷ್ಷ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಿಸಲಾಯಿತು.