ಇತ್ತೀಚೆಗೆ ಸಿಎಂ ಸಮ್ಮುಖದಲ್ಲಿ ನಡೆದ ಸಭೆ ಕುರಿತು ಹರಿದಾಡುತ್ತಿರುವ ವಿವಿಧ ವದಂತಿಗಳಿಗೆ ತೆರೆ ಎಳೆದರು. ಸಭೆಯನ್ನು ನಾನೇ ಮುತುವರ್ಜಿ ವಹಿಸಿ ಆಯೋಜಿಸಿದ್ದೆ, ಸಿಎಂ ಬಳಿ ಸಮಯ ನಿಗದಿಪಡಿಸಿ, ಉಭಯ ಜಿಲ್ಲೆಗಳ ಶಾಸಕರಿಗೆ ದೂರವಾಣಿ ಮೂಲಕ ಆಹ್ವಾನ ನೀಡಿ ಸಭೆಗೆ ಕರೆದುಕೊಂಡು ಹೋಗಿದ್ದೆ. ಕೋಲಾರ ಜಿಲ್ಲೆಯ ಅಭಿವೃದ್ಧಿ ಹಾಗೂ ಹಿತದೃಷ್ಟಿಯಿಂದ ನಾವೆಲ್ಲರೂ ಒಗ್ಗಟ್ಟಾಗಬೇಕು ಎಂಬ ಏಕೈಕ ಉದ್ದೇಶದಿಂದ ಸಭೆ ನಡೆಸಲಾಯಿತು .
ಕನ್ನಡಪ್ರಭ ವಾರ್ತೆ ಮುಳಬಾಗಿಲು
ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಉಭಯ ಜಿಲ್ಲೆಗಳ ಶಾಸಕರನ್ನು ಒಗ್ಗೂಡಿಸಿಕೊಂಡು ಸಿಎಂ ಸಮ್ಮುಖದಲ್ಲಿ ವಿಶೇಷ ಸಭೆ ಆಯೋಜಿಸಲಾಗಿತ್ತು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಸ್ಪಷ್ಟಪಡಿಸಿದರು.ಮುಳಬಾಗಿಲಿನ ಟಿಎಪಿಸಿಎಂಎಸ್ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಸಿಎಂ ಸಮ್ಮುಖದಲ್ಲಿ ನಡೆದ ಸಭೆ ಕುರಿತು ಹರಿದಾಡುತ್ತಿರುವ ವಿವಿಧ ವದಂತಿಗಳಿಗೆ ತೆರೆ ಎಳೆದರು. ಸಭೆಯನ್ನು ನಾನೇ ಮುತುವರ್ಜಿ ವಹಿಸಿ ಆಯೋಜಿಸಿದ್ದೆ, ಸಿಎಂ ಬಳಿ ಸಮಯ ನಿಗದಿಪಡಿಸಿ, ಉಭಯ ಜಿಲ್ಲೆಗಳ ಶಾಸಕರಿಗೆ ದೂರವಾಣಿ ಮೂಲಕ ಆಹ್ವಾನ ನೀಡಿ ಸಭೆಗೆ ಕರೆದುಕೊಂಡು ಹೋಗಿದ್ದೆ. ಕೋಲಾರ ಜಿಲ್ಲೆಯ ಅಭಿವೃದ್ಧಿ ಹಾಗೂ ಹಿತದೃಷ್ಟಿಯಿಂದ ನಾವೆಲ್ಲರೂ ಒಗ್ಗಟ್ಟಾಗಬೇಕು ಎಂಬ ಏಕೈಕ ಉದ್ದೇಶದಿಂದ ಸಭೆ ನಡೆಸಲಾಯಿತು ಎಂದು ಹೇಳಿದರು.
ಚಿಂತಾಮಣಿ ಶಾಸಕ ಸುಧಾಕರ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಗೌರಿಬಿದನೂರು ಪುಟ್ಟಸ್ವಾಮಿಗೌಡ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಎಂಎಲ್ಸಿ ಅನಿಲ್ ಕುಮಾರ್ ಸೇರಿದಂತೆ ಹಲವು ನಾಯಕರನ್ನು ಸಭೆಗೆ ಕರೆದುಕೊಂಡು ಹೋಗಲಾಗಿತ್ತು. ಜಿಲ್ಲೆಯ ಹಿತ ಕಾಯುವುದೇ ಇದರ ಹಿಂದಿನ ಮುಖ್ಯ ಉದ್ದೇಶವಾಗಿತ್ತು ಎಂದರು.ಕೋಲಾರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು, ಬೃಹತ್ ಎಪಿಎಂಸಿ ಮಾರುಕಟ್ಟೆ, ಎತ್ತಿನಹೊಳೆ ನೀರಾವರಿ ಯೋಜನೆ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ನಡೆಯುತ್ತಿವೆ. ಎತ್ತಿನಹೊಳೆ ಯೋಜನೆಯ ನೀರು ಕೋಲಾರ ತಾಲೂಕಿನ ಮೂಲಕವೇ ಜಿಲ್ಲೆಗೆ ಪ್ರವೇಶಿಸಲಿದೆ, ರಿಂಗ್ ರಸ್ತೆಯೂ ಕೋಲಾರ ಕೇಂದ್ರಸ್ಥಾನದಲ್ಲಿ ಬರಲಿದೆ. ಜಿಲ್ಲಾ ಕೇಂದ್ರದ ಶಾಸಕನಾಗಿ ಈ ಪ್ರಮುಖ ಯೋಜನೆಗಳ ಹೊಣೆಗಾರಿಕೆ ನನ್ನ ಮೇಲಿದ್ದು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಭಿವೃದ್ಧಿಗೆ ವೇಗ ನೀಡುವ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದು ಹೇಳಿದರು.
ಸಚಿವ ಕೆ.ಎಚ್.ಮುನಿಯಪ್ಪ ಅವರ ಹಿಡಿತ ತಪ್ಪಿಸಲು ಸಭೆ ನಡೆಸಲಾಗಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ ಅವರು, ನಮ್ಮ ನಡುವೆ ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಆಯಾ ತಾಲೂಕುಗಳ ಆಡಳಿತಾತ್ಮಕ ನಿರ್ಧಾರಗಳಲ್ಲಿ ಶಾಸಕರದ್ದೇ ಪ್ರಮುಖ ಪಾತ್ರವಿದೆ. ದೇವಾಲಯ, ಶಾಲಾ- ಕಾಲೇಜು ಸಮಿತಿಗಳ ಅಧ್ಯಕ್ಷತೆ ಸೇರಿ ವಿವಿಧ ವಿಚಾರಗಳಲ್ಲಿ ಶಾಸಕರ ಅಧಿಕಾರವೇ ಮುಖ್ಯ. ಯಾರ ಹಿಡಿತವನ್ನೂ ತಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಡಿಲಿಮಿಟೇಶನ್ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ:
ಮುಳಬಾಗಿಲು ಕ್ಷೇತ್ರದ ಮೀಸಲಾತಿ ಬದಲಾವಣೆ ಅಥವಾ ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ಹರಿದಾಡುತ್ತಿರುವುದು ಕೇವಲ ಊಹಾಪೋಹಗಳು. ಡಿಲಿಮಿಟೇಶನ್ ಅಧಿಕೃತವಾಗಿ ಜಾರಿಯಾದ ಬಳಿಕವಷ್ಟೇ ಕ್ಷೇತ್ರಗಳಲ್ಲಿನ ಬದಲಾವಣೆಗಳ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ. ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ನಿರ್ಧಾರವಾಗುವುದರಿಂದ ಯಾವುದೇ ಆಧಾರವಿಲ್ಲದ ವದಂತಿಗಳನ್ನು ಜನರು ನಂಬಬಾರದು ಎಂದು ಮನವಿ ಮಾಡಿದರು.