ಮಾಜಿ ಶಾಸಕ ಮಂಜುನಾಥ್ ಕೂಡ ಹುಲಿ ಕಾಟದಿಂದ ಬೇಸತ್ತು ಗ್ರಾಮಸ್ಥರೊಂದಿಗೆ ಈ ಭಾಗದಲ್ಲಿ ಅಡ್ಡಾಡಿ ರೈತರಿಗೆ ಆಗಿರುವ ಸಮಸ್ಯೆಯನ್ನು ಕಣ್ಣಾರೆ ಕಂಡು ವ್ಯಾಘ್ರನನ್ನು ಸೆರೆ ಹಿಡಿಯಲು ಬೋನ್ ಇಡುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದರು.

ಕನ್ನಡಪ್ರಭ ವಾರ್ತೆ ಹುಣಸೂರುತಾಲೂಕಿನ ಹನಗೋಡು ಹೋಬಳಿಯ ಕೂಡ್ಲೂರು ಸುತ್ತಮುತ್ತಲ ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ಕಾಟ ನೀಡುತ್ತಿದ್ದ ಹುಲಿಯು ಕೂಡ್ಲೂರು ಬಳಿಯ ಮಾಜಿ ಶಾಸಕ ಎಚ್.ಪಿ. ಮಂಜುನಾಥ್‌ ಅವರಿಗೆ ಸೇರಿದ ತೆಂಗಿನ ತೋಟದಲ್ಲಿ ಇರಿಸಿದ್ದ ಬೋನಿಗೆ ಬಿದ್ದಿದೆ. ಸುಮಾರು 3-4 ವರ್ಷದ ಹೆಣ್ಣು ಹುಲಿಯಾಗಿದ್ದು, ಈ ಹುಲಿಯು ಹತ್ತಾರು ಜಾನುವಾರುಗಳನ್ನು ಕೊಂದು ಹಾಕಿತ್ತು. ಹಾಡಹಗಲೇ ಓಡಾಡುತ್ತಿದ್ದ ಹುಲಿಯನ್ನು ಕಣ್ಣಾರೆ ಕಂಡಿದ್ದ ಕೃಷಿಕರು ಹಾಗೂ ಗ್ರಾಮಸ್ಥರು ಜಮೀನಿಗೆ ತೆರಳಲು ಹೆದರುತ್ತಿದ್ದರು. ಅಲ್ಲದೆ ಸಂಜೆ ನಂತರ ಓಡಾಡುವುದನ್ನು ನಿಲ್ಲಿಸಿದ್ದರು. ಹುಲಿ ಸೆರೆ ಹಿಡಿಯುವಂತೆ ಅರಣ್ಯಇಲಾಖೆ ಮೇಲೆ ಒತ್ತಡ ಹಾಕಿದ್ದರು.ಮಾಜಿ ಶಾಸಕ ಮಂಜುನಾಥ್ ಕೂಡ ಹುಲಿ ಕಾಟದಿಂದ ಬೇಸತ್ತು ಗ್ರಾಮಸ್ಥರೊಂದಿಗೆ ಈ ಭಾಗದಲ್ಲಿ ಅಡ್ಡಾಡಿ ರೈತರಿಗೆ ಆಗಿರುವ ಸಮಸ್ಯೆಯನ್ನು ಕಣ್ಣಾರೆ ಕಂಡು ವ್ಯಾಘ್ರನನ್ನು ಸೆರೆ ಹಿಡಿಯಲು ಬೋನ್ ಇಡುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದರು. ಹುಲಿ ಸೆರೆ;ಹುಲಿ ಸೆರೆಗಾಗಿ ಮಂಜುನಾಥರ ತೋಟದಲ್ಲಿ ತಿಂಗಳಿನಿಂದ ರಾತ್ರಿ ವೇಳೆ ಬೋನ್‌ ನಲ್ಲಿ ಮೇಕೆಯನ್ನು ಕಟ್ಟಿ ಹಾಕಲಾಗಿತ್ತು. ಸುತ್ತಮುತ್ತಲಿನಲ್ಲಿ 10 ಟ್ರ್ಯಾಪಿಂಗ್ ಕ್ಯಾಮರ ಕೂಡ ಅಳವಡಿಸಲಾಗಿತ್ತು. ಬುಧವಾರ ಮುಂಜಾನೆ ಮೇಕೆಯನ್ನು ಬೇಟೆಯಾಡಲು ಬಂದ ಹುಲಿಯು ಬೋನಿನಲ್ಲಿ ಬಂಧಿಯಾಗಿದೆ.ವಿಷಯ ತಿಳಿದ ಅಕ್ಕಪಕ್ಕದ ಗ್ರಾಮಸ್ಥರು ಸಿಬ್ಬಂದಿ ಬರುವ ಮೊದಲೇ ಹುಲಿ ನೋಡಲು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಪೊಟೋ, ವಿಡೀಯೋ ಮಾಡಿಕೊಂಡರು.ವಿಷಯ ತಿಳಿಯುತ್ತಿದ್ದಂತೆ ಪ್ರಾದೇಶಿಕ ಅರಣ್ಯ ವಿಭಾಗದ ಡಿ.ಸಿ.ಎಫ್. ಆರ್.ಟಿ. ಕಿರುಬನಂತನ್, ಆರ್.ಎಫ್.ಒ. ಸಂತೋಷ್‌ ಹೂಗಾರ್ ನೇತೃತ್ವದ ತಂಡವು ಸ್ಥಳಕ್ಕೆ ಆಗಮಿಸಿ ಜನರನ್ನು ನಿಯಂತ್ರಿಸಿ, ದೂರ ಕಳುಹಿಸಿದರು.ನಾಗರಹೊಳೆ ಹುಲಿಯೋಜನೆ ಪಶುವೈದ್ಯ ಡಾ. ರಮೇಶ್ ಹುಲಿಗೆ ಬಂದೂಕು ಮೂಲಕ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯ ಜ್ಞಾನ ತಪ್ಪಿಸಿ ಬೋನ್‌ ನಿಂದ ಹೊರ ತೆಗೆದು ಚಿಕಿತ್ಸೆ ನೀಡಿ ಸಾಗಿಸಿದರು.ಈ ವೇಳೆಯಂತೂ ಹುಲಿ ನೋಡಲು ಜನರು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಹರಸಾಹಸಪಟ್ಟರು. ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಓಗಳಾದ ದಿವಾಕರ್, ಮಂಜುನಾಥ್, ಆನೆ ಕಾರ್ಯಪಡೆಯ ಡಿಆರ್‌ಎಫ್‌ಓ ಚಂದ್ರೇಶ್, ಸಿಬ್ಬಂದಿ ಶಿವಪ್ಪ, ಸಿದ್ದಪ್ಪ, ಉದಯ್, ಇಟಿಎಫ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಡಿಸಿಎಫ್ ಕಿರುಬನಂತನ್ ತಿಳಿಸಿದ್ದಾರೆ. ಇನ್ನೂ ಹುಲಿಗಳಿವೆಈಗ ಒಂದುಹುಲಿಯನ್ನು ಮಾತ್ರ ಸೆರೆ ಹಿಡಿದಿದ್ದಾರೆ. ಇನ್ನೂ ತಾಯಿ ಹುಲಿಯೊಂದಿಗೆ ಎರಡು ಮರಿ ಈ ಭಾಗದಲ್ಲಿದೆ. ಇವನ್ನೂ ಸೆರೆ ಹಿಡಿಯಬೇಕೆಂದು ಸುರೇಶ್, ಮಧು, ಗೋವಿಂದರಾಜು ಮೊದಲಾದ ರೈತರು ಒತ್ತಾಯಿಸಿದ್ದಾರೆ.