ಸಾರಾಂಶ
ಹೊಸಪೇಟೆ: ಇಲ್ಲಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿ ಓಬಳಾಪುರದ ಧರ್ಮದಗುಡ್ಡದಲ್ಲಿ ದೇವರ ಬನ್ನಿ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ನಗರದ ಏಳುಕೇರಿ ಸೇರಿದಂತೆ ತಾಲೂಕಿನ ವಿವಿಧ ಕಡೆಯಿಂದ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ಆಗಮಿಸಿದ್ದ 20ಕ್ಕೂ ಅಧಿಕ ಶಕ್ತಿ ದೇವತೆಗಳ ಉತ್ಸವ ಮೂರ್ತಿಗಳು ಮುಖಾಮುಖಿಯಾದವು. ಧರ್ಮದ ಗುಡ್ಡದ ಶ್ರೀ ಚನ್ನಬಸವೇಶ್ವರಸ್ವಾಮಿ ಶ್ರೀ ನಿಜಲಿಂಗಮ್ಮದೇವಿಗೆ ಪೂಜೆ ಸಲ್ಲಿಸಿ ಬನ್ನಿ ಗಿಡಕ್ಕೆ ಪ್ರದಕ್ಷಣೆ ಹಾಕಿ ದೇವರ ಬನ್ನಿ ಮುಡಿಯಲಾಯಿತು. ಸಾವಿರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು.
ಮಳೆ ಸುರಿಯುತ್ತಿದ್ದರೂ ನಗರದ ಏಳುಕೇರಿ, ಕಮಲಾಪುರ, ನಾಗೇನಹಳ್ಳಿ, ನರಸಾಪುರ, ಬೆನಕಾಪುರ, ಕೊಂಡನಾಯಕನಹಳ್ಳಿ, ಚಿತ್ತವಾಡ್ಗಿ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ್ದ ಭಕ್ತರು ಪಲ್ಲಕ್ಕಿ ಹೊತ್ತು ಸಾಗಿದರು. ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಸಾವಿರಾರು ಭಕ್ತರು ದೇವರ ಬನ್ನಿ ಮಹೋತ್ಸವವನ್ನು ಕಣ್ಣದುಂಬಿಕೊಂಡರು.ಐತಿಹಾಸಿಕ ಧರ್ಮದಗುಡ್ಡದಲ್ಲಿ ವಿಜಯನಗರ ಅರಸರ ಕಾಲದಿಂದಲೂ ಆಚರಣೆಯಲ್ಲಿರುವ ದೇವರ ಬನ್ನಿ ಉತ್ಸವದದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಶಕ್ತಿ ದೇವತೆಗಳ ಸಮ್ಮಿಲನವನ್ನು ಕಣ್ತುಂಬಿಕೊಂಡು ಉತ್ಸವಕ್ಕೆ ಸಾಕ್ಷಿಯಾದರು.
ಬಸವನದುರ್ಗ ಗ್ರಾಮದಿಂದ ಆಗಮಿಸಿದ ಶ್ರೀ ಚನ್ನಬಸವೇಶ್ವರ ಸ್ವಾಮಿ ಉತ್ಸವಮೂರ್ತಿಯ ಪಲ್ಲಕ್ಕಿ ಜತೆಗೆ ತಾಲೂಕಿನ ವಿವಿಧೆಡೆಗಳಿಂದ 20ಕ್ಕೂ ಅಧಿಕ ಶಕ್ತಿ ದೇವತೆಗಳ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಬಂದ ಭಕ್ತರು, ಗುಡ್ಡದ ಕೆಳಗಿರುವ ಶಮಿವೃಕ್ಷಕ್ಕೆ ಪ್ರದಕ್ಷಣೆ ಹಾಕಿ ಮೂಲ ಸ್ಥಳಕ್ಕೆ ತೆರಳುವ ಶಕ್ತಿದೇವತೆಗಳ ಉತ್ಸವ ಮೂರ್ತಿಗೆ ಭಕ್ತರು ನಮಿಸಿ ಭಕ್ತಿ ಸಮರ್ಪಿಸಿದರು.ನಾಗೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನ ಐತಿಹಾಸಿಕ ಪ್ರಕೃತಿದತ್ತ ಧರ್ಮದಗುಡ್ಡದ ಬಂಡೆಯ ಆಸರೆಯಲ್ಲಿ ನೆಲೆಸಿರುವ ಶ್ರೀಚನ್ನಬಸವೇಶ್ವರಸ್ವಾಮಿ ಮತ್ತು ನಿಜಲಿಂಗಮ್ಮದೇವಿಯು ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದಾರೆ. ಆಯುಧಪೂಜೆಯಂದು ನಡೆಯುವ ದೇವರ ಬನ್ನಿ ಉತ್ಸವ ಜಾತ್ರೆಯಂತೆ ನಡೆಯುವುದೇ ಇಲ್ಲಿನ ವಿಶೇಷ.
ಧರ್ಮದಗುಡ್ಡದಲ್ಲಿ ಪಾಂಡವರು ನೆಲೆಸಿದ್ದರು. ಶಿವನು ತಪಸ್ಸಿಗೆ ಹೋದಾಗ ನಂದಿ ಧರ್ಮದಗುಡ್ಡಕ್ಕೆ ಬಂದಿದ್ದನು ಎಂಬುದನ್ನು ಇಲ್ಲಿನ ಶಾಸನಗಳು ಹೇಳುತ್ತವೆ ಎಂಬುದು ಇತಿಹಾಸಕಾರರು ತಿಳಿಸುತ್ತಾರೆ. ನಾಗೇನಹಳ್ಳಿ ಗ್ರಾಮವನ್ನು ವಿಜಯನಗರ ಅರಸರ ಕಾಲದಲ್ಲಿ ನಾಗಲಾದೇವಿಪುರ ಎಂದು ಕರೆಯಲಾಗುತ್ತಿತ್ತು. ವಿಜಯನಗರ ಅರಸ ಶ್ರೀಕೃಷ್ಣದೇವರಾಯನ ತಾಯಿ ನಾಗಲಾದೇವಿಯ ಹೆಸರಿನಲ್ಲಿ ಈ ಗ್ರಾಮ ನಿರ್ಮಾಣವಾಗಿದೆ. ನಾಗೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲೆ ಆಚರಣೆ ನಡೆಯುತ್ತಿರುವುದು ಈ ಭಾಗದ ಜನರ ಸುದೈವ ಎಂದೇ ಭಾವಿಸುತ್ತಾರೆ.21 ಶಕ್ತಿ ದೇವತೆಗಳ ಸಮಾಗಮ
ಬಸವನದುರ್ಗದ ಗುಡ್ಡದ ಚನ್ನಬಸವೇಶ್ವರ, ಬಾಣದಕೇರಿ ನಿಜಲಿಂಗಮ್ಮ, ತಳವಾರಕೇರಿ ರಾಂಪುರ ದುರ್ಗಮ್ಮ, ಮ್ಯಾಸಕೇರಿ ಹುಲಿಗೆಮ್ಮ, ಕಮಲಾಪುರ ಗೋನಾಳ್ಕೇರಿ ನಿಜಲಿಂಗಮ್ಮ, ನಾಗೇನಹಳ್ಳಿ ಹುಲಿಗೆಮ್ಮ, ನರಸಾಪುರ ಮಾಗಣಿಯ ಹಾಲಮ್ಮ, ಕೊಂಡನಾಯಕನಹಳ್ಳಿ ದುರ್ಗಮ್ಮ, ಮಲಪನಗುಡಿ ತಾಯಮ್ಮ, ಉಕ್ಕಡಕೇರಿ ಹುಲಿಗೆಮ್ಮ, ರಾಂಪುರ ದುರುಗಮ್ಮ, ಚಿತ್ತವಾಡ್ಗಿ ವರಕೇರಿ ನಿಜಲಿಂಗಮ್ಮ ಸೇರಿದಂತೆ 21 ಶಕ್ತಿ ದೇವತೆಗಳ ಉತ್ಸವ ಮೂರ್ತಿಗಳ ಹೊತ್ತ ಪಲ್ಲಕ್ಕಿಗಳು ಶಮಿವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಮೂಲ ಸ್ಥಳಕ್ಕೆ ಮರಳಿದವು. ಕಮಲಾಪುರ ಹಾಗೂ ಹೊಸಪೇಟೆ ಏಳು ಕೇರಿಯ ಮುಖಂಡರು ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿದ್ದ ಗಣ್ಯರು ಇದ್ದರು. ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.