ಸಾರಾಂಶ
ಸಾಲ ತುಂಬಲಾರದ್ದಕ್ಕೆ ಫೈನಾನ್ಸ್ ಸಿಬ್ಬಂದಿಯೊಬ್ಬ ಸಾಲಗಾರನ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಅಡಿಹುಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಸಾಲ ತುಂಬಲಾರದ್ದಕ್ಕೆ ಫೈನಾನ್ಸ್ ಸಿಬ್ಬಂದಿಯೊಬ್ಬ ಸಾಲಗಾರನ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಅಡಿಹುಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮುಧೋಳ ನಗರದ ಐ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಾತಿಗೆಂದು ಅಡಿಹುಡಿಯ ಸಾಲಗಾರ ಶರೀಫ್ಸಾಬ ಜಮಖಂಡಿ ಎಂಬುವವರ ಮನೆಗೆ ಹೋಗಿದ್ದಾನೆ. ನಾಳೆ ತುಂಬುತ್ತೇನೆ ಎಂದು ಸಾಲಗಾರ ಸಮಜಾಯಿಸಿ ನೀಡಲು ಹೋದಾಗ, ಫೈನಾನ್ಸ್ ಸಿಬ್ಬಂದಿ ದಸ್ತಗೀರ್ ಸನದಿ ವಾಗ್ವಾದ ನಡೆಸಿದ್ದಾನೆ. ಹೀಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ಸಿಬ್ಬಂದಿ ಸಾಲಗಾರನ ತಲೆಗೆ ಕಟ್ಟಿಗೆಯಿಂದ ಹೊಡೆದಿದ್ದಾನೆ. ಗೊಂದಲ ಕಂಡು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು ಸಿಬ್ಬಂದಿಗೂ ಧರ್ಮದೇಟು ನೀಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಬ್ಬರೂ ಸಾವಳಗಿ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಪ್ಪ ಮಡ್ಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.