ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಸರಸ್ವತಿ ಶಾಲೆಯು ಮಕ್ಕಳನ್ನು ಕೇವಲ ಅಂಕಗಳಿಸಲು ಸೀಮಿತಿಗೊಳಿಸದೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅವರ ತನುಮನದಲ್ಲಿ ಬಿತ್ತಿ ಬೆಳೆಸುತ್ತಿದೆ ಎಂದು ಶಾಲೆಯ ಹಿರಿಯ ಶಿಕ್ಷಕಿ ಅಕ್ಕ ತಿಳಿಸಿದರು.ನಗರದ ಸ್ವಾಮಿ ಸಮರ್ಥ ಸಭಾಂಗಣದಲ್ಲಿ ಸರಸ್ವತಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಹಮ್ಮಿಕೊಂಡ ಗುರುವಂದನಾ ಹಾಗೂ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಪ್ರಾಥಮಿಕ ಶಾಲೆ ಎಂಬುವುದು ಭದ್ರ ಬುನಾದಿ ಇದ್ದಂತೆ ಎಂದರು.
ಇಲ್ಲಿ ಕಲಿತ ಪಾಠ, ಆಟ, ದೇಶಭಕ್ತಿ, ಆಚಾರ ವಿಚಾರಗಳು ನಮ್ಮ ಜೀವನದ ಕೊನೆವರೆಗೂ ಉಳಿಯುತ್ತವೆ. ಹಳೆಯ ನೆನಪುಗಳೆಂದರೆ ಬಂಗಾರದಂತಹ ನೆನಪುಗಳು. ಅವುಗಳನ್ನು ಮರೆಯದೆ ‘ಕೆರೆಯ ನೀರು ಕೆರೆಗೆ ಚೆಲ್ಲಿದಂತೆ’ ನಾವು ಶಾಲೆಯಲ್ಲಿ ಪಟ್ಟ ಕಷ್ಟಗಳು, ಕುಂದು ಕೊರತೆಗಳು ನಮ್ಮ ಮುಂದಿನ ಪೀಳಿಗೆ ಅನುಭವಿಸಬಾರದೆಂದರೆ ಹಿರಿಯ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಶಕ್ತಿ ತುಂಬಬೇಕು. ಸಂಸ್ಥೆಯು ಇನ್ನೂ ರಾಷ್ಟ್ರಮಟ್ಟದಲ್ಲಿ ಉತ್ತರೋತ್ತರವಾಗಿ ಬೆಳೆಯಲು ಎಂದರು.ಬೀದರ್ ವಿಶ್ವವಿದ್ಯಾಲಯ ಬೀದರ್ನ ಕುಲಪತಿಗಳಾದ ಪ್ರೊ. ಬಿ.ಎಸ್.ಬಿರಾದಾರ ಮಾತನಾಡಿ, ಶಾಲೆ ಮತ್ತು ಶಿಕ್ಷಕರು ಎಂದರೆ ನನಗೆ ಅತ್ಯುನ್ನತ ಪ್ರೀತಿ. ಹಳೆಯ ವಿದ್ಯಾರ್ಥಿಗಳು ಕಲಿತ ಶಾಲೆಗೆ ಏನಾದರೂ ಉಪಕಾರ ಮಾಡಬೇಕು. ಅದು ಅವರ ಕರ್ತವ್ಯವೂ ಹೌದು. ಇತರೆ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತೆ ಸಹಾಯ ಹಸ್ತ ಚಾಚಬೇಕು. ಭಾರತಾಂಬೆಯ ಕೀರ್ತಿ ಹೆಚ್ಚಿಸುವ ಚಟುವಟಿಕೆಗಳನ್ನು ಮಾಡಬೇಕೆಂದು ತಿಳಿಸಿದರು.
ಬೆಂಗಳೂರಿನ ರೂಟ್ಸ್ ಮತ್ತು ಬ್ರಾಂಚಸ್ ರಿಸರ್ಚ್ ಫೌಂಡೇಶನ್ ಪ್ರಮುಖರಾದ ಜಿಆರ್ ಜಗದೀಶ ಮಾತನಾಡಿ, ಕಲಿತ ಶಾಲೆಗೆ ಹಳೆಯ ವಿದ್ಯಾರ್ಥಿಗಳೇ ಸಂಪತ್ತು. ಸರಸ್ವತಿ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ದೇಶ-ವಿದೇಶಗಳಲ್ಲಿ ಬೆಳಗಲಿ. ಭಾರತ ಸಂಸ್ಕೃತಿ, ಹಿರಿಮೆ-ಗರಿಮೆ ಹೆಚ್ಚಿಸಲಿ. ಸಂಘಟಿತರಾಗಿ, ಜ್ಞಾನವಂತರಾಗಿ ಬದುಕಲಿ ಎಂದು ಶುಭ ಹಾರೈಸಿದರು.ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷರಾದ ಎಸ್ಬಿ ಸಜ್ಜನಶೆಟ್ಟಿ ಮಾತನಾಡಿ, ಒಂದು ಶಾಲೆಯ ಏಳ್ಗೆಗೆ ಶಿಕ್ಷಕರು, ಪಾಲಕರು, ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಬಹಳ ಮುಖ್ಯ. ಇಲ್ಲಿ ಪಡೆದುಕೊಂಡ ಶಿಕ್ಷಣ ಮತ್ತು ಸಂಸ್ಕಾರ ಜೀವನದಲ್ಲಿ ಅಳವಡಿಸಿಕೊಳ್ಳಲಿ ಎಂದರು.
ವೇದಿಕೆ ಮೇಲೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಪ್ರೊ. ವೀಣಾ ಜಲಾದೆ ಉಪಸ್ಥಿತರಿದ್ದು ಸರ್ವರಿಗೂ ಸ್ವಾಗತಿಸಿದರು. ವೀರೇಶ ಸ್ವಾಮಿ ನಿರೂಪಿಸಿ ತೇಜಸ್ವಿನಿ ವಂದಿಸಿದರು. ಶಾಲೆಯ ಕುರಿತು ತಯಾರಿಸಲಾದ ಕಿರುಚಿತ್ರ ಪ್ರದರ್ಶನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹಣಮಂತರಾವ್ ಪಾಟೀಲ್, ಸಂಸ್ಥಾಪಕ ಕಾರ್ಯದರ್ಶಿ ನಾರಾಯಣರಾವ್ ಮುಖೇಡಕರ್ ಪ್ರಮುಖರಾದ ರವಿ ಮೂರ್ತಿ, ಸುಲೋಚನಾ ಅಕ್ಕ, ಭಗುಸಿಂಗ್ ಜಾಧವ್, ರೇವಣಸಿದ್ದಪ್ಪ ಜಲಾದೆ, ಪ್ರೊ. ವೀರಶೆಟ್ಟಿ ಮೈಲೂರಕರ್, ದಾಕ್ಷಾಯಣಿ ಅಕ್ಕ, ನಾಗೇಶರೆಡ್ಡಿ, ಸರಸ್ವತಿ ಸ್ವಾಮಿ, ಸತ್ಯಪ್ರಭಾ ಗರ್ಜೆ, ರೇಣುಕಾ ಹಲಬರ್ಗೆ, ಮಲ್ಲಿಕಾರ್ಜುನ ಪಾಟೀಲ್ ಸೇರಿದಂತೆ ನೂರಾರು ಜನ ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.