ಜೈನ್, ಬೌದ್ಧ, ಸಿಖ್‌ ಧರ್ಮಗಳು ಚಾತುವರ್ಣ ವಿರೋಧಿಸಲು ಹುಟ್ಟಿಕೊಂಡಿವೆ ಹೊರತು ಪರ್ಯಾಯವಾಗಿ ಅಲ್ಲ

ಹರಪನಹಳ್ಳಿ: ಚಾತುವರ್ಣದ ವ್ಯವಸ್ಥೆ ಈ ದೇಶಕ್ಕೆ ಶಾಪ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ನಗರದ ಎಡಿಬಿ ಕಾಲೇಜಿನ ಆವರಣದಲ್ಲಿ ಸುರ ಸಂಭ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ವಿಚಾರ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಸೌಹಾರ್ದತೆಯ ನೆಲೆಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಭಾರತದಲ್ಲಿ ಚಾತುರ್ಣದ ವ್ಯವಸ್ಥೆ ಜೀವಂತವಾಗಿದೆ, ಚಾತುವರ್ಣದ ನೀತಿ ಸೂತ್ರ ಈ ದೇಶದ ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ವಲಯ ಆಳುತ್ತಿದೆ ಎಂದು ದೂರಿದರು.

ಜೈನ್, ಬೌದ್ಧ, ಸಿಖ್‌ ಧರ್ಮಗಳು ಚಾತುವರ್ಣ ವಿರೋಧಿಸಲು ಹುಟ್ಟಿಕೊಂಡಿವೆ ಹೊರತು ಪರ್ಯಾಯವಾಗಿ ಅಲ್ಲ ಎಂದ ಅವರು, ಹೆಚ್ಚು ಶಿಕ್ಷಣ ಪಡೆದುಕೊಂಡಷ್ಟು ಜಾತಿ ವ್ಯವಸ್ಥೆ ಹೆಚ್ಚಾಗುತ್ತಿದೆ. ಚರಿತ್ರೆ ಅರ್ಥ ಮಾಡಿಕೊಂಡು ವರ್ತಮಾನಕ್ಕೆ ಹೊಂದಿಕೊಂಡರೆ ನಿಮ್ಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಾಂಸ್ಕೃತಿಕ ಹೋರಾಟಕ್ಕೆ ಶಿಕ್ಷಣ, ಸಂಘಟನೆ, ಹೋರಾಟ ಎಂಬ ವಾಕ್ಯ ಡಾ.ಬಿ.ಆರ್.ಅಂಬೇಡ್ಕರ ನೀಡಿದರು, ಆದರೆ ಇಂದು ಅಂಬೇಡ್ಕರ ನಿರೀಕ್ಷಿಸಿದ ಶಿಕ್ಷಣ ಇಲ್ಲ, ಇಂದು ಸರ್ವೋದಯ ಶಿಕ್ಷಣ ಅಗತ್ಯವಾಗಿದೆ ಎಂದು ನುಡಿದರು.

ಕವಿ ಪಂಪನ್ನ ಈವರೆಗೂ ಸರಿಯಾಗಿ ಅರ್ಥೈಸಿಲ್ಲ, ಕನ್ನಡ ಸಾಹಿತ್ಯ ವಿಮರ್ಶೆಗೆ ಅರ್ಥೈಸಿಕೊಳ್ಳಬೇಕು, ನಮ್ಮ ತಿಳಿವಳಿಕೆ ಹೊಸತು ಮಾಡುವುದೇ ಧರ್ಮ ಆದರೆ ಇಂದು ಸ್ಥಗಿತ ಧರ್ವಗಳೇ ಇವೆ ಹೊರತು ಚಲನೆಶೀಲತೆ ಧರ್ಮವಿಲ್ಲ ಎಂದು ನುಡಿದರು.

ಹೊಸಪೇಟೆಯ ನಿವೃತ್ತ ಪ್ರಾದ್ಯಾಪಕ ಡಾ.ಎಸ್. ಶಿವಾನಂದ ವಿಚಾರಗೋಷ್ಠಿಗೆ ಚಾಲನೆ ನೀಡಿ ಮಾತನಾಡಿ, ಧರ್ಮವೆಂದರೆ ಸಕಲ ಜೀವಿಗಳಿಗೂ ಲೇಸು ಬಯಸುವುದು, ದುರ್ಬಲರನ್ನು ಮೇಲೆಕ್ಕೆತ್ತುವ ಕೆಲಸ ಮಾಡುವುದು, ಆದರೆ ಇಂದು ಧರ್ಮ ಹಾಗೂ ದೇವರ ಹೆಸರಿನಲ್ಲಿ ಏನೆಲ್ಲ ಆಗುತ್ತಿದೆ ಎಂದರು.

ನಮ್ಮೊಳಗಿನ ಪರಿಪೂರ್ಣತೆ ಹೊರತೆಗೆಯುವುದೇ ಶಿಕ್ಷಣದ ಉದ್ದೇಶ, ಆದರೆ ಹೊಟ್ಟೆ ಪಾಡಿಗೆ ಶಿಕ್ಷಣ ಪಡೆಯುತ್ತಿದ್ದೇವೆ ಎಂದ ಅವರು, ಶಿಕ್ಷಣದ ಉದ್ದೇಶವೇ ಗೊತ್ತಿಲ್ಲ ದಂತಾಗಿದೆ ಎಂದು ಹೇಳಿದರು.

ಬೆಂಗಳೂರಿನ ಅಂಕಣಕಾರ ಶಿವಸುಂದರ ಉನ್ವತ ಶಿಕ್ಷಣ ಸಮಸ್ಯೆ, ಸವಾಲುಗಳು ಪರಿಹಾರ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಕಾಡೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಕೊಟ್ರೇಶ್ವರ, ಸದಸ್ಯ ಆರುಂಡಿ ನಾಗರಾಜ, ಎಸ್.ಎಂ. ವೀರಭದ್ರಯ್ಯ, ಪಾಟೀಲ್‌ ಜಗದೀಶಗೌಡ, ಮಾಜಿ ಅಧ್ಯಕ್ಷ ಪಟೇಲ್‌ ಬೆಟ್ಟನಗೌಡ, ಪ್ರಾಚಾರ್ಯ ಡಾ.ಎಸ್.ಎಂ. ಸಿದ್ದಲಿಂಗಮೂರ್ತಿ, ಡಾ. ಎ.ಎಂ.ಶರತ್‌ , ಡಾ. ರಾಜಶೇಖಯ್ಯ ನಿವೃತ್ತ ಪ್ರಾಚಾರ್ಯರು, ಪ್ರಾಧ್ಯಾಪಕರು ಪಟ್ಟಣದ ಮುಖಂಡರು, ವಿದ್ಯಾರ್ಥಿಗಳು ಹಾಜರಿದ್ದರು.