ನಾಡಿನ ಹಿತಕ್ಕಾಗಿ ಸರ್ವಸ್ವವನ್ನೂ ಧಾರೆ ಎರೆದ ನಾಲ್ಮಡಿ

| Published : Jul 07 2025, 11:48 PM IST

ಸಾರಾಂಶ

ಕೆ.ಆರ್.ನಗರ: ಆಡು ಮುಟ್ಟದ ಸೊಪ್ಪಿಲ್ಲ‌ಎಂಬಂತೆ ಮೈಸೂರು ರಾಜ್ಯವನ್ನಾಳಿದ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು ಜನರ ಏಳಿಗೆಗಾಗಿ ಮಾಡದ ಅಭಿವೃದ್ಧಿ ಕೆಲಸಗಳು ಇಲ್ಲ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಹೇಳಿದರು.

ಕೆ.ಆರ್.ನಗರ: ಆಡು ಮುಟ್ಟದ ಸೊಪ್ಪಿಲ್ಲ‌ಎಂಬಂತೆ ಮೈಸೂರು ರಾಜ್ಯವನ್ನಾಳಿದ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು ಜನರ ಏಳಿಗೆಗಾಗಿ ಮಾಡದ ಅಭಿವೃದ್ಧಿ ಕೆಲಸಗಳು ಇಲ್ಲ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಹೇಳಿದರು.

ಪಟ್ಟಣದ ಪಿ.ಎಲ್.ಡಿ. ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ನಡೆದ ಮೈಸೂರು- ಕೊಡುಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಮತ್ತು ವೈದ್ಯಕೀಯ ಸ್ನಾತಕೋತ್ತರ ಪದವಿಯಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಗಳಿಸಿದ ಡಾ. ಸಾ.ರಾ. ಧನುಷ್ ಅವರ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿ ಅವರು ಮಾತನಾಡಿದರು.

ನಾಡಿನ ಜನರ ಹಿತಕ್ಕಾಗಿ ಸರ್ವಸ್ವವನ್ನೂ ಧಾರೆ ಎರದು ಪ್ರಜಾಪ್ರಭುತ್ವದಲ್ಲಿಯೂ ಕೊಡದ ಸವಲತ್ತು ಮತ್ತು ಅನುಕೂಲಗಳನ್ನು ನೀಡಿದ ಮಹಾರಾಜರು ಅಜರಾಮರ ಎಂದು ಬಣ್ಣಸಿದರಲ್ಲದೆ, ಅಂತಹ ಮಹಾ ಪುರಷ ಕನ್ನಡ ನಾಡಿನಲ್ಲಿ ಜನ್ಮ ತಾಳಿದ್ದು ಎಲ್ಲರ ಪುಣ್ಯ ವಿಶೇಷ ಎಂದರು.

ಸಹಜವಾಗಿ ರಾಜಕಾರಣಿಗಳ ಮಕ್ಕಳು ಉನ್ನತ ಹುದ್ದೆಗೇರುವುದು ಮತ್ತು ಜನ್ಮದಾತರ ಗೌರವ ಕಾಪಾಡುವುದು ತೀರ ವಿರಳ, ಅಂತಹದರಲ್ಲಿ ಮಾಜಿ ಸಚಿವರಾದ ಜನನಾಯಕ ಸಾ.ರಾ‌. ಮಹೇಶ್ ಪುತ್ರ ಸಾ.ರಾ. ಧನುಷ್ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿರುವುದು ಎಲ್ಲರೂ ಮುಚ್ಚುವಂತಹ ವಿಚಾರವಾಗಿದ್ದು, ಈ ಸಾಧಕನನ್ನು ಎಲ್ಲರೂ ಹರಸಿ ಆರ್ಶೀವದಿಸಬೇಕು ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತವಾದ ನಂತರ ಸಾ.ರಾ‌.ಮಹೇಶ್ ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದರು. ಆ ಸಮಯದಲ್ಲಿ ಅವರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಸೋಲು, ಗೆಲುವು ಸಹಜವಾಗಿದ್ದು, ನೀವು ಧೃತಿಗೆಡದೆ ಸಾರ್ವಜನಿಕ ಜೀವನದಲ್ಲಿ ಉಳಿಯ ಬೇಕೆಂದು ಸಲಹೆ ನೀಡಿದ್ದೆ, ಅದರಂತೆ ಅವರು ಭವಿಷ್ಯದಲ್ಲಿ ಜನಮುಖಿ ಅಗಬೇಕು ಎಂದು ಆಶೀರ್ವದಿಸಿದರು.

ಕೃಷ್ಣರಾಜ ಒಡೆಯರ್‌ ಕೊಡುಗೆ ಅಪಾರ

ಭರತ ಖಂಡದಲ್ಲಿ ಕರ್ನಾಟಕ ರಾಜ್ಯ ಶಾಶ್ವತ ಹೆಸರು ಗಳಿಸಿ ಶ್ರೀಮಂತಿಕೆ ಬೆಳೆಯಲು ಮೈಸೂರು ರಾಜ್ಯವನ್ನಾಳಿದ ಆಳ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ ಎಂದು ವಿಧಾನ ಪರಿಷತ್ ಸದಸ್ಯ ಎಚ್‌. ವಿಶ್ವನಾಥ್‌ ಪ್ರಶಂಸೆ ವ್ಯಕ್ತಪಡಿಸಿ, ನಾಡಿಗೆ ಅನ್ನ ಮತ್ತು ಆರೋಗ್ಯ ನೀಡಿದ ನಮ್ಮ ಮಹಾರಾಜರ ಕೊಡುಗೆ ಜಗತ್ತಿಗೆ ಮಾದರಿ ಎಂದರು.

ಮಾಜಿ ಸಚಿವ ಸಾ.ರಾ. ಮಹೇಶ್ ಪುತ್ರ ವೈದ್ಯಕೀಯ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ್ದು, ಆತ ಮುಂದಿನ ದಿನಗಳಲ್ಲಿ ಜನರ ಆರೋಗ್ಯ ಕಾಪಾಡಲು ಆದ್ಯತೆ ನೀಡುವುದರ ಜೊತೆಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಕೊಳ್ಖುವಂತೆ ಸಲಹೆ ನೀಡಿದ ಅವರು, ಬಡವರು ಮತ್ತು ನೊಂದವರಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಎಂದು ಕಿವಿಮಾತು ಹೇಳಿದರು.

ಸಾ.ರಾ. ಮಹೇಶ್‌ ವಿಷಾದ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಖಚಿತವಾಗಿ ಪರಾಭವಗೊಳ್ಳುತ್ತೇನೆ ಎಂದು ಗೊತ್ತಿತ್ತು, ಆದರೆ ಗೆಲುವಿನ‌ಅಂತರ ಇಷ್ಟೊಂದು ಇರುತ್ತದೆ ಎಂದು ಊಹಿಸಿರಲಿಲ್ಲ ಎಂದು ಮಾಜಿ ಸಾ.ರಾ‌.ಮಹೇಶ್ ವಿಷಾದ ವ್ಯಕ್ತಪಡಿಸಿದರು.

ನಾನು ಚುನಾವಣೆಯಲ್ಲಿ ಸೋಲನ್ನುಭವಿಸಿದ್ದರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿಲ್ಲ, ಹಾಗಾಗಿ ನನ್ನು ಉಸಿರು ಇರುವ ತನಕ ಜನ ಸೇವೆ ಬಿಡುವುದಿಲ್ಲ ಎಂದು ಘೋಷಿಸಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಎಂದು ನಂಬಿದವರ ಕೈ ಬಿಡುವುದಿಲ್ಲ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೆರಡು ಬಾರಿ‌ಚುನಾವಣೆಗೆ ನಿಂತು ಸೋಲನ್ನುಭವಿಸಿ ಮತದಾರರ ‌ಕೈಕಾಲು ಹಿಡಿವುದು ಶಾಸಕರಾಗುವುದು ಸುಲಭ ಸಾಧ್ಯ ಎಂದು ಶಾಸಕ ಡಿ. ರವಿಶಂಕರ್ ಅವರನ್ನು ಪರೋಕ್ಷವಾಗಿ ಮಾತನಲ್ಲಿಯೇ ತಿವಿದ ಅವರು, ಸಚಿವ ಮತ್ತು ಶಾಸಕನಾಗಿದ್ದವನ ಮಗ ವೈದ್ಯಕೀಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡುವುದು ತೀರ ಅಪರೂಪ ಎಂದು ಬಣ್ಣಸಿದ ಅವರು, ತಮ್ಮ ಮಗನ ಸಾಧನೆಯನ್ನು ಕೊಂಡಾಡಿದರು.

ನನ್ನ ಮಗನ‌ಸಾಧನೆಗೆ ಸುತ್ತೂರು ಶ್ರೀಗಳ ಆರ್ಶೀವಾದ ಕಾರಣ ಎಂದು ತಿಳಿಸಿದ ಅವರು, ತಮ್ಮ ಸಂಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಕಲ್ಪಸಿ ಆತ ರಾಜ್ಯದಲ್ಲಿಯೇ ಮೂರನೇ ರ್ಯಾಂಕ್ ಪಡೆಯಲು ಕಾರಣರಾಗಿದ್ದು, ಜೀವನ ಪರ್ಯಾಂತ ಸುತ್ತೂರು ಮಠದ ಶ್ರೀಗಳ ಋಣ ತೀರಿಸಿಲು ಸಾಧ್ಯವಿಲ್ಲ ಎಂದು ಭಾವುಕರಾಗಿ ನುಡಿದರು.

ಜನಪರ ಕೆಲಸ ಬೆಲೆ ಕಟ್ಟಲು ಸಾಧ್ಯವಿಲ್ಲ

ಮೈಸೂರು ಸಂಸ್ಥಾನವನ್ನಾಳಿದ ಯದು ವಂಶದ ಮಹಾರಾಜರು ನಾಡಿನ ಜನರ ಏಳಿಗೆಗೆ ಅಪಾರವಾದ ಕೊಡುಗೆಯನ್ನು ‌ನೀಡಿದ್ದು ಜನಪರ ಕೆಲಸ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಮೈಸೂರು ಮತ್ತು ಕೊಡುಗು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.

ಜನರ ಆರ್ಶೀವಾದ ನನ್ನನ್ನು ಉತ್ತುಂಗ ಸ್ಥಾನಕ್ಕೆ ಏರಿಸಿದ್ದು, ಅವರ ನಂಬಿಕೆಗೆ ಚ್ಯತಿ ಬಾರದಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ ಅವರು, ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಜೀವನ‌ಮತ್ತು ಜನಸೇವೆ ಜಗತ್ತಿಗೆ ನೀತಿ‌ಪಾಠ ಎಂದು ನುಡಿದರು.

ಮೈಸೂರು ಮಹಾರಾಜರಿಗೆ ಮಕ್ಕಳು‌ಇಲ್ಲದಿದ್ದರೂ ನಾಡಿನ ಜನರನ್ನು ತಮ್ಮ ಮಕ್ಕಳೆಂದು ಭಾವಿಸಿ ಭದ್ರವಾದ ಬದುಕು ಕಟ್ಟಿ ಕೊಡಲು ರಾಜ ನೀತಿಯ ಕೆಲಸ ಮಾಡಿದ ರಾಜರ ಸೇವೆಗೆ ಎಲ್ಲರೂ ತಲೆ ಬಾಗಬೇಕು ಎಂದ ಅವರು, ರಾಜಧರ್ಮದ ಮೂಲಕ ರಾಜ ಧರ್ಮ ಕಾಪಾಡಿ‌ಜನಸೇವೆ ಮಾಡಿದ ಮೈಸೂರು ಸಂಸ್ಥಾನದ ಎಲ್ಲ ಮಹಾರಾಜರುಗಳ ಸೇವೆ ಇತಿಹಾಸ ಪುಟಗಳಲ್ಲಿ ಸೇರಿದ್ದು ಎಂದು ಸಂಬ್ರಮಿಸಿದರು.

ಅವಿನಾಭಾವ ಸಂಬಂಧ

ಕೆ.ಆರ್. ನಗರ ಮತ್ತು ಮೈಸೂರು ಅರಮನೆ ನಡುವೆ ಅವಿನಾಭಾವ ಸಂಬಂಧ ಇದ್ದು ಇಲ್ಲಿನ‌ ಮತ ಕ್ಷೇತ್ರ ನಾನು ಸ್ಪರ್ಧೆ ಮಾಡಿದ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡದಿದ್ದರೂ ನಿಮ್ಮೆಲ್ಲರ ಆರ್ಶೀವಾದಿಂದ ಜಯಗಳಿಸಿದ್ದು, ನಿರಂತರವಾಗಿ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣಾ ಅಖಾಡಕ್ಕೆ ಧುಮುಕುವುದಿಲ್ಲ

ನಮ್ಮ ತಂದೆ ಸಾ.ರಾ‌. ಮಹೇಶ್ ಅವರು ಸಕ್ರೀಯ ರಾಜಕಾರಣದಲ್ಲಿ ಇರುವವರೆಗೂ ನಾನು ಮತ್ತು ನನ್ನ ಸಹೋದರ ಚುನಾವಣಾ ಅಖಾಡಕ್ಕೆ ಧುಮುಕುವುದಿಲ್ಲ ಎಂದು ಡಾ.ಸಾ.ರಾ‌ .ಧನುಷ್ ಸ್ಪಷ್ಟಪಡಿಸಿದರು.

ಪೋಷಕರು ಮತ್ತು ಸುತ್ತೂರು ಶ್ರೀಗಳ ಆರ್ಶೀವಾದಿಂದ ವೈದ್ಯನಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ರೋಗಿಗಳ ಆರೋಗ್ಯ ಕಾಪಾಡಲು ಗಮನ ಹರಿಸುವ ಮೂಲಕ ಪ್ರತಿ ತಿಂಗಳು ಎರಡು ದಿನ ಸಾಲಿಗ್ರಾಮ ಮತ್ತು ಕೆ.ಆರ್. ನಗರ ಜನತೆಯ ವೈದ್ಯಕೀಯ ಸೇವೆಗಾಗಿ ಮುಡುಪಾಗಿಡುತ್ತೇನೆ ಎಂದು ಘೋಷಿಸಿದ ಅವರು, ನನ್ನ ವೈದ್ಯಕೀಯ ಜೀವನದಲ್ಲಿ ಬಡವರಿಂದ ಹಣ ಪಡೆದು ಚಿಕಿತ್ಸೆ ನೀಡುವುದಿಲ್ಲ ಎಂದು ಸೂತ್ತೂರು ಶ್ರೀಗಳ ‌ಮುಂದೆ ಪ್ರತಿಜ್ಞೆ ಮಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ, ಮಾಜಿ ಸದಸ್ಯ ಎಂ.ಟಿ. ಕುಮಾರ್ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಎಂಡಿಎ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಣ ಮಿರ್ಲೆ ಅಣ್ಣೇಗೌಡ, ಜಿಪಂ ಮಾಜಿ ಸದಸ್ಯ ಸಿ.ಜೆ. ದ್ವಾರಕೀಶ್, ಕೆ.ಆರ್. ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಅಮ್ಮ ಸಂತೋಷ್, ಜಿಲ್ಲಾ ಪತ್ರ ಬರಹಗಾರ ಮಿರ್ಲೆ ರಾಜೀವ್, ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್, ಖ್ಯಾತ ಮೂಳೆ ತಜ್ಞ ಡಾ. ಮೆಹಬೂಬ್ ಖಾನ್, ತಾಲೂಕು ಜೆಡಿಎಸ್‌ ಅಧ್ಯಕ್ಷ ಹಂಪಾಪುರ ಕುಮಾರ್, ಮೆಡಿಕಲ್ ರಾಜಣ್ಣ, ತಾಲೂಕು ಜೆಡಿಎಸ್‌ ವಕ್ತಾರ ಕೆ.ಎಲ್. ರಮೇಶ್, ಜಿಲ್ಲಾ ಯುವ ಜೆಡಿಎಸ್ ಮುಖಂಡ ಎಚ್‌.ಕೆ. ಮಧುಚಂದ್ರ, ಜಿಲ್ಲಾ ಗ್ರಾಮಾಂತರ ಯುವ ಜೆಡಿಎಸ್ ಉಪಾಧ್ಯಕ್ಷ ಕಗ್ಗರೆ ಕುಚೇಲ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಿ. ಪ್ರಕಾಶ್, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದಾಕ್ಷಾಯಿಣಿ, ತಾಲೂಕು ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮೀ, ಕಾರ್ಯದರ್ಶಿ ವಿ . ಮೋಹನಕುಮಾರಿ, ರೂಪ ಸತೀಶ್, ತಾಪಂ ಮಾಜಿ ಸದಸ್ಯ ಹಂಗರಬಾಯನಹಳ್ಳಿ ತಮ್ಮಣ್ಣ,‌ಪುರಸಭೆ ಸದಸ್ಯರಾದ ಕೆ.ಎಲ್.ಜಗದೀಶ್, ಉಮೇಶ್, ಸಂತೋಷ್ ಗೌಡ, ಸರೋಜ ಮಹದೇವ್, ಮಾಜಿ ಅಧ್ಯಕ್ಷ ಡಿ. ಕಾಂತರಾಜ್, ಜೆಡಿಎಸ್‌ ಮುಖಂಡರಾದ ಬಾಲಾಜಿ ಗಣೇಶ್, ಸಿ.ವಿ. ಗುಡಿ ಸಾಗರ್, ಡಿ.ವಿ. ಗುಡಿ ಯೋಗೇಶ್, ಅನೀಫ್ ಗೌಡ, ಎರೆಮನುಗನಹಳ್ಳಿ ಸುನೀಲ್, ಕಿಶೋರ್, ಸಾತಿಗ್ರಾಮ ಶಂಕರ ಇದ್ದರು.